ಶಾಮನೂರು - ಶೆಟ್ಟರ್ ಕುಟುಂಬದಲ್ಲಿ ಲಗ್ನದ ಸುದ್ದಿ
ಬೆಂಗಳೂರು, ಅ. 6 : ರಾಜ್ಯದ ಎರಡು ಪ್ರತಿಷ್ಠಿತ ರಾಜಕೀಯ ಕುಟುಂಬಗಳು 'ಕೊಟ್ಟು-ತೊಗೊಂಡು" ಮಾಡುವುದರ ಮೂಲಕ ನೆಂಟಸ್ಥಿಕೆ ಬೆಸೆಯಲು ಮುಂದಾಗಿವೆ. ರಾಜಕೀಯ ರಂಗದಲ್ಲಿ ಸಂಬಂಧಗಳು ಹೇಗೂ ಇರಬಹುದು, ಅದು ಇಲ್ಲಿ ಮುಖ್ಯವಲ್ಲ. ಖಾಸಗಿ ಬದುಕಿನಲ್ಲಿ ಪರಸ್ಪರ ಬೀಗರಾಗುವುದಕ್ಕೆ ಸಿದ್ಧರಾಗುತ್ತಿರುವುದು ಸುದ್ದಿ.
ಮಧ್ಯ ಮತ್ತು ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯಿತ ಕುಟುಂಬಗಳಲ್ಲೊಂದಾಗಿರುವ, ಪ್ರತಿಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಹಾಲೀ ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಕುಟುಂಬದಲ್ಲಿ ಲಗ್ನದ ಕುರಿತ ಮಾತುಕತೆಗಳು ಲಗುಬಗೆಯಿಂದ ಆರಂಭವಾಗಿವೆ.
ಶಾಮನೂರು ಶಿವಶಂಕರಪ್ಪನವರ ಎರಡನೇ ಪುತ್ರ ಗಣೇಶ್ ಅವರ ಮಗಳು ಅಂಚನಾ ಶಾಮನೂರು ಮತ್ತು ಜಗದೀಶ್ ಶೆಟ್ಟರ್ ಅವರ ಮೊದಲನೇ ಪುತ್ರ ಪ್ರಶಾಂತ್ ಶೆಟ್ಟರ್ ನಡುವೆ ಈ ತಿಂಗಳ 27 ರಂದು ನಿಶ್ಚಿತಾರ್ಥ ನಡೆಯಲಿದೆ ಎಂದು ಗೊತ್ತಾಗಿದೆ.
ಹದಿನೈದು ದಿನಗಳ ಕೆಳಗೆ ಜಗದೀಶ್ ಶೆಟ್ಟರ್ ತಮ್ಮ ಕುಟುಂಬ ಸಮೇತರಾಗಿ ದಾವಣಗೆರೆಯಲ್ಲಿ ಶಾಮನೂರು ಅವರನ್ನು ಭೇಟಿಯಾಗಿ ಹುಡುಗಿಯನ್ನು ನೋಡಿಕೊಂಡು ಹೋಗಿದ್ದಾರೆ.
ಮದುವೆ ಮುಂದಿನ ವರ್ಷ ನಡೆಯಲಿದ್ದು, ಮಹೂರ್ತಕ್ಕೆ ಇನ್ನೂ ದಿನಾಂಕ ನಿಗದಿಯಾಗಬೇಕಷ್ಟೇ. ವೃತ್ತಿಯಲ್ಲಿ ಶಾಮನೂರು ಮೊಮ್ಮಗಳು ಲಂಡನ್ ನಲ್ಲಿ ಆರ್ಕಿಟೆಕ್ಟ್ ಆಗಿದ್ದು, ಶೆಟ್ಟರ್ ಪುತ್ರ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕಂಪೆನಿಯೊಂದನ್ನು ನಡೆಸುತ್ತಿದ್ದಾರೆ.
ಶಾಮನೂರು ಶಿವಶಂಕರಪ್ಪ ಮತ್ತು ಪಾರ್ವತಮ್ಮ ದಂಪತಿಗಳಿಗೆ ಮೂರು ಜನ ಗಂಡು ಮಕ್ಕಳು. ಮೊದಲನೆಯ ಮಗ ಎಸ್ ಎಸ್ ಮಲ್ಲಿಕಾರ್ಜುನ ಹಾಲಿ ಶಾಸಕ. ( ದಾವಣಗೆರೆ ಉತ್ತರ) ಎರಡನೆಯ ಪುತ್ರ ಎಸ್ ಎಸ್ ಗಣೇಶ್ ಮತ್ತು ಕೊನೆಯ ಮಗ ಎಸ್ ಎಸ್ ಬಕ್ಕೇಶ್ ಇಬ್ಬರೂ ಉದ್ಯಮಿಗಳು.
ಇನ್ನು ಜಗದೀಶ್ ಶೆಟ್ಟರ್ ಮತ್ತು ಶಿಲ್ಪಾ ದಂಪತಿಗಳಿಗೆ ಇಬ್ಬರು ಗಂಡು ಮಕ್ಕಳು. ಮೊದಲನೆಯ ಮಗ ಪ್ರಶಾಂತ್ ಶೆಟ್ಟರ್ ಸಾಫ್ಟ್ ವೇರ್ ಕಂಪನಿ ನಡೆಸುತ್ತಿದ್ದರೆ ಎರಡನೆಯ ಮಗ ಸಂಕಲ್ಪ್ ಎಲ್ ಎಲ್ ಬಿ ಪದವೀಧರ.