ಬಿಎಸ್ವೈ ಎಲ್ಲೇ ಊಟ ಮಾಡಲಿ, ದಲಿತರ ವೋಟ್ ನಮಗೇ ಗ್ಯಾರಂಟಿ
ಯಡಿಯೂರಪ್ಪ ಮತ್ತು ಆ ಪಕ್ಷದ ಮುಖಂಡರು ಎಷ್ಟೇ ದಲಿತರ ಮನೆಗೆ ಹೋಗಿ ಊಟ ಮಾಡಿಕೊಂಡು ಬರಲಿ, ಆ ಸಮುದಾಯದ ಮತ ಕಾಂಗ್ರೆಸ್ಸಿಗೇ ಎಂದು ಸಮಾಜ ಕಲ್ಯಾಣ ಖಾತೆಯ ಸಚಿವ ಎಚ್ ಆಂಜನೇಯ ಹೇಳಿಕೆ ನೀಡಿದ್ದಾರೆ.
ಚಿತ್ರದುರ್ಗ, ಮೇ 19: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಆ ಪಕ್ಷದ ಮುಖಂಡರು ಎಷ್ಟೇ ದಲಿತರ ಮನೆಗೆ ಹೋಗಿ ಊಟ ಮಾಡಿಕೊಂಡು ಬರಲಿ, ಆ ಸಮುದಾಯದ ಮತ ಕಾಂಗ್ರೆಸ್ಸಿಗೇ ಎಂದು ಸಮಾಜ ಕಲ್ಯಾಣ ಖಾತೆಯ ಸಚಿವ ಎಚ್ ಆಂಜನೇಯ ವೋಟ್ ಬ್ಯಾಂಕ್ ರಾಜಕಾರಣದ ಮಾತನ್ನಾಡಿದ್ದಾರೆ.
ನಗರದಲ್ಲಿ ಶುಕ್ರವಾರ (ಮೇ 19) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಆಂಜನೇಯ, ನಾಡಿನಲ್ಲಿ ಅಸ್ಪಶೃತೆ ಇನ್ನೂ ಜೀವಂತವಾಗಿದೆ. ಬಿಜೆಪಿ ನಾಯಕರ ಆಟ ಈ ವಿಚಾರದಲ್ಲಿ ನಡೆಯುವುದಿಲ್ಲ ಎಂದು ಸಚಿವರು ಹೇಳಿದ್ದಾರೆ.
ಯಡಿಯೂರಪ್ಪನವರಿಗೆ ನಿಜವಾಗಲೂ ಅಸ್ಪಶೃತೆ ವಿರುದ್ದ ಹೋರಾಡ ಬೇಕಿಂದಿದ್ದರೆ, ಹಾವೇರಿ ಜಿಲ್ಲೆಗೆ ಪ್ರವಾಸ ಮಾಡಲಿ. ಆ ಭಾಗದಲ್ಲಿ ದಲಿತರ ಮನೆಯಲ್ಲಿ ಮದುವೆಯಿದ್ದರೆ ಅಂಗಡಿ ಹೋಟೆಲ್ ಮುಚ್ಚುತ್ತಾರೆ. ಆ ಸಮುದಾಯದವರು ಅಂಗಡಿಯೊಳಗೆ ಪ್ರವೇಶಿಸುತ್ತಾರೆ ಎನ್ನುವುದಕ್ಕಾಗಿ ಬಾಗಿಲು ಹಾಕಲಾಗುತ್ತದೆ.
ಚುನಾವಣೆ ಸಮೀಪಿಸುತ್ತಿದ್ದಂತೇ ಬಿಜೆಪಿಯವರು ಹೊಸ ಪ್ರಯೋಗ ಮಾಡಲು ಹೊರಟಿದ್ದಾರೆ. ಬಿಜೆಪಿ ನಾಯಕರ ಆಟ ನಡೆಯುವುದಿಲ್ಲ, ಅವರು ಎಷ್ಟೇ ದಲಿತರ ಮನೆಯಲ್ಲಿ ಊಟ, ವಾಸ್ತವ್ಯ ಮಾಡಿದರೂ ಆ ಸಮುದಾಯದ ಮತ ನಮಗೇ ಎಂದು ಆಂಜನೇಯ ಹೇಳಿದ್ದಾರೆ.
ಜನ ಮಾತನಾಡದ ದೇವಾಲಯಕ್ಕೆ ಹೋಗುತ್ತಾರೆ, ಬುದ್ದಿ ಇಲ್ಲದ ಜನ ದೇಗುಲಕ್ಕೆ ಪ್ರವೇಶ ಕೇಳುತ್ತಾರೆ ಇದು ನಮ್ಮ ವ್ಯವಸ್ಥೆ. ದಲಿತ ಸಮುದಾಯದ ಮೇಲೆ ನಿಜವಾದ ಕಾಳಜಿ ಯಡಿಯೂರಪ್ಪನವರಿಗೆ ಇದ್ದರೆ, ನಾನು ಅವರನ್ನು ಗೌರವಿಸುತ್ತಿದ್ದೆ ಎಂದು ಆಂಜನೇಯ ಹೇಳಿದ್ದಾರೆ.
ಜಾತಿ, ಪಕ್ಷವನ್ನು ಮೀರಿ ರಾಜ್ಯದ ಕೆಲವು ಭಾಗಗಳಲ್ಲಿ ಇನ್ನೂ ಜೀವಂತವಾಗಿರುವ ಅಸ್ಪಶೃತೆ ಎನ್ನುವ ಪಿಡುಗನ್ನು ಮಟ್ಟಹಾಕಬೇಕಾಗಿದೆ. ಅದು ಬಿಟ್ಟು, ಚುನಾವಣೆ ಸಮೀಪಿಸುತ್ತಿದ್ದಂತೇ, ದಲಿತರ ನೆನಪಾದರೆ ಚುನಾವಣೆಯ ಸಮಯದಲ್ಲಿ ಬಿಜೆಪಿಗೆ ಆ ಸಮುದಾಯ ಸರಿಯಾದ ಪಾಠ ಕಲಿಸಲಿದೆ ಎಂದು ಆಂಜನೇಯ ಹೇಳಿದ್ದಾರೆ.