ಲೋಕಾ ಹಗರಣ: ಪೊಲೀಸರೆದುರು ಆರೋಪಿ ಬಾಯ್ಬಿಟ್ಟ ಸತ್ಯ
ಬೆಂಗಳೂರು, ಜುಲೈ 31 : ಲೋಕಾಯುಕ್ತ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಇಳಿದಿರುವ ವಿಶೇಷ ತನಿಖಾ ತಂಡಕ್ಕೆ ಶುಕ್ರವಾರ ಮಹತ್ವದ ಮಾಹಿತಿ ಲಭ್ಯವಾಗಿದೆ. 2 ನೇ ಆರೋಪಿ ಅಶೊಕ್ ಕುಮಾರ್ ಅವರನ್ನು ವಿಚಾರಣೆ ನಡೆಸಿದಾಗ ಪ್ರಮುಖ ಸಂಗತಿಯೊಂದು ಬಹಿರಂಗವಾಗಿದೆ.
ದೂರುದಾರ ಉದ್ಯಮಿ, ಇಂಜಿನಿಯರ್ ಕೃಷ್ಣಮೂರ್ತಿಗೆ ಕೃಷ್ಣ ರಾವ್ ಎಂಬ ಹೆಸರಿನಲ್ಲಿ ಕರೆ ಮಾಡುತ್ತಿದ್ದದ್ದು ನಾನೇ ಎಂದು ಅಶೋಕ್ ಕುಮಾರ್ ಒಪ್ಪಿಕೊಂಡಿದ್ದಾರೆ. ಕೃಷ್ಣರಾವ್ ಹೆಸರಿನಲ್ಲಿ ಕರೆ ಮಾಡಿ ಕೃಷ್ಣಮೂರ್ತಿ ಅವರಿಗೆ ಲೋಕಾಯುಕ್ತ ಕಚೇರಿಗೆ ಆಗಮಿಸಲು ಹೇಳಿದ್ದು ನಾನೆ. ಅಲ್ಲಿಯೇ ಅಶ್ವಿನ್ ರಾವ್ ಅವರು ಕೃಷ್ಣರಾವ್ ಎಂಬ ಹೆಸರಿನಲ್ಲಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ಅಶೋಕ್ ಕುಮಾರ್ ಹೇಳಿದ್ದಾರೆ ಎಂದು ಎಸ್ ಐಟಿ ಪೊಲೀಸರು ತಿಳಿಸಿದ್ದಾರೆ.[ಲೋಕಾಯುಕ್ತ ಪದಚ್ಯುತಿ ವಿಧೇಯಕದ ಪ್ರಮುಖ ಅಂಶಗಳು]
ಇಂಜಿನಿಯರ್ ಆಗಿರುವ ಕೃಷ್ಣಮೂರ್ತಿ ಅವರಿಗೆ ಕರೆ ಮಾಡಿ ನಿಮ್ಮ ಮೇಲೆ ಈಗಾಗಲೇ ಸಾಕಷ್ಟು ದೂರುಗಳು ಬಂದಿವೆ. ನಾವು ನಿಮ್ಮ ಮನೆ ಮತ್ತು ಕಚೇರಿಯನ್ನು ರೈಡ್ ಮಾಡಬೇಕಿತ್ತು. ಇದನ್ನು ಬಗೆಹರಿಸಿಕೊಳ್ಳಬೇಕು ಎಂದರೆ ಲೋಕಾಯುಕ್ತ ಕಚೇರಿಗೆ ಬಂದು ಮಾತನಾಡಿ ಎಂದು ಹೇಳಿದ್ದೆ ಎಂದು ಪ್ರಕರಣದ 2 ನೇ ಆರೋಪಿ ಅಶೋಕ್ ಕುಮಾರ್ ವಿಚಾರಣೆ ವೇಳೆ ಹೇಳಿದ್ದಾರೆ.[ಅಶ್ವಿನ್ ರಾವ್ ಹಣ ಸುಲಿಗೆಗೆ ಬಾಲಿವುಡ್ ಚಿತ್ರವೇ ಪ್ರೇರಣೆ!]
ಶುಕ್ರವಾರ ಬೆಳಗ್ಗೆ ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಲಾಗಿತ್ತು. ಇಬ್ಬರು ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ ಕೋರ್ಟ್ ಅಶೋಕ್ ಕುಮಾರ್ ಅವರನ್ನು ಎಸ್ಐಟಿ ಕಸ್ಟಡಿಗೆ ನೀಡಿತ್ತು. ಆರೋಪಿಗಳಾದ ಅಶೋಕ್ ಕುಮಾರ್, ಶ್ರೀನಿವಾಸಗೌಡ ಮತ್ತು ಶಂಕರೇಗೌಡ ಅವರನ್ನು ಎಸ್ಐಟಿ ಅಧಿಕಾರಿಗಳು ಶುಕ್ರವಾರ ಲೋಕಾಯುಕ್ತ ಕೋರ್ಟ್ಗೆ ಹಾಜರಿಪಡಿಸಿದ್ದರು. ಈ ಸಂದರ್ಭದಲ್ಲಿ ಎಸ್ಪಿಸಿ ಜನಾರ್ದನ್ ಅವರು ಅಶೋಕ್ ಕುಮಾರ್ ಅವರನ್ನು ಎಸ್ಐಟಿ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದ್ದರು.
ಯಾರು ಅಶೋಕ್ ಕುಮಾರ್? : ಅಶೋಕ್ ಕುಮಾರ್ ಮೂಲತಃ ಆಂಧ್ರಪ್ರದೇಶದ ವಾರಂಗಲ್ ನಿವಾಸಿಯಾಗಿದ್ದು, ಬೆಂಗಳೂರಿನ ರಾಜಾಜಿನಗರದಲ್ಲಿ ವಾಸಿಸುತ್ತಿದ್ದಾರೆ. ಮೊದಲು ಸೆಕ್ಯೂರಿಟಿ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ನಂತರ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಆಂಧ್ರಪ್ರದೇಶದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವಾಗ ಅಶ್ವಿನ್ ರಾವ್ ಪರಿಚಯವಾಗಿತ್ತು. ಲೋಕಾಯುಕ್ತದಲ್ಲಿ ನಡೆದ ಅಕ್ರಮಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾ.ಭಾಸ್ಕರಾವ್ ಪುತ್ರ ಅಶ್ವಿನ್ ರಾವ್. ಲೋಕಾಯುಕ್ತ ಪಿಆರ್ಒ ಸಯ್ಯದ್ ರಿಯಾಜ್, ಅಶೋಕ್, ಶ್ರೀನಿವಾಸಗೌಡ ಮತ್ತು ಶಂಕರೇಗೌಡ ಅವರನ್ನು ಬಂಧಿಸಲಾಗಿತ್ತು.