ಲೋಕಾಯುಕ್ತದಲ್ಲಿ ಭ್ರಷ್ಟ್ರಾಚಾರ : ಅಶ್ವಿನ್ರಾವ್ಗೆ ಜಾಮೀನು
ಬೆಂಗಳೂರು, ಸೆಪ್ಟೆಂಬರ್ 19 : ಕರ್ನಾಟಕ ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಅಶ್ವಿನ್ ರಾವ್ಗೆ ಜಾಮೀನು ಸಿಕ್ಕಿದೆ. ಲೋಕಾಯುಕ್ತದಲ್ಲಿ ನಡೆದ ಹಗರಣದಲ್ಲಿ ಅಶ್ವಿನ್ ರಾವ್ ಪ್ರಮುಖ ಆರೋಪಿಯಾಗಿದ್ದಾರೆ.
ಕರ್ನಾಟಕ ಹೈಕೋರ್ಟ್ ಅಶ್ವಿನ್ ರಾವ್, ಭಾಸ್ಕರ್, ಸೈಯದ್ ರಿಯಾಜ್ ಸೇರಿದಂತೆ ಪ್ರಕರಣದ ಎಲ್ಲಾ 13 ಆರೋಪಿಗಳಿಗೆ ಸೋಮವಾರ ಷರತ್ತುಬದ್ಧ ಜಾಮೀನು ನೀಡಿದೆ. ಆರೋಪಿಗಳು 1 ಲಕ್ಷ ರೂ. ಮೌಲ್ಯದ ಬಾಂಡ್ ಸಲ್ಲಿಸಬೇಕು ಮತ್ತು ಪಾಸ್ಪೋರ್ಟ್ಗಳನ್ನು ಎಸ್ಐಟಿ ಅಧಿಕಾರಿಗಳ ವಶಕ್ಕೆ ನೀಡಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.[ಕರ್ನಾಟಕ ಲೋಕಾಯುಕ್ತದಲ್ಲಿ ಇದೇನಿದು ಹಗರಣ?]
ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಮೂರ್ತಿ ಮತ್ತು ಹಾವೇರಿಯ ಲೋಕೋಪಯೋಗಿ ಇಂಜಿನಿಯರ್ ಚನ್ನಬಸಪ್ಪ ಅವರು ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಎಸ್ಐಟಿ ಅಶ್ವಿನ್ ರಾವ್ ಅವರನ್ನು ಬಂಧಿಸಿತ್ತು. 1, 250 ಪುಟಗಳ ಚಾರ್ಜ್ ಶೀಟ್ಅನ್ನು ಅಶ್ವಿನ್ ರಾವ್ ವಿರುದ್ಧ ಸಲ್ಲಿಕೆ ಮಾಡಲಾಗಿದೆ. [ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಭಾಸ್ಕರರಾವ್ 7ನೇ ಆರೋಪಿ]
2015ರ ಆಗಸ್ಟ್ನಿಂದ ಎಲ್ಲಾ ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸುತ್ತಿದ್ದರು. ಆದರೆ, ಎಸ್ಐಟಿ ಸುಪ್ರೀಂಕೋರ್ಟ್ ಮೊರೆ ಹೋಗಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದು ಎಂದು ಮನವಿ ಮಾಡಿತ್ತು. ಆದ್ದರಿಂದ, ಜಾಮೀನು ಸಿಗುವುದು ವಿಳಂಬವಾಯಿತು.[ಭಾಸ್ಕರರಾವ್ ರಾಜೀನಾಮೆ]