ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ನಾಲ್ವರು ಆರೋಪಿಗಳಿಗೆ ಜಾಮೀನು
ಬೆಂಗಳೂರು, ಸೆಪ್ಟೆಂಬರ್, 08 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ನಾಲ್ವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ಜಾಮೀನು ನೀಡಿದೆ. ಸೆ.16ರ ನಂತರ ನಾಲ್ವರು ಆರೋಪಿಗಳು ಜೈಲಿನಿಂದ ಬಿಡುಗಡೆ ಹೊಂದಬಹುದಾಗಿದೆ.
ಲೋಕಾಯುಕ್ತ ಮಾಜಿ ಪಿಆರ್ಒ ಸೈಯದ್ ರಿಯಾಜ್, ಶ್ರೀನಿವಾಸ ಗೌಡ, ಶಂಕರೇಗೌಡ, ಅಶೋಕ್ ಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಅವರ ಏಕಸದಸ್ಯ ಪೀಠ ಜಾಮೀನು ಮಂಜೂರು ಮಾಡಿದೆ. ಎಲ್ಲಾ ಆರೋಪಿಗಳು ಸೆ.15ರ ತನಕ ನ್ಯಾಯಾಂಗ ಬಂಧನದಲ್ಲಿದ್ದು, ಅದು ಮುಕ್ತಾಯವಾಗುತ್ತಿದ್ದಂತೆ ಜಾಮೀನಿನ ಮೇಲೆ ಬಿಡುಗಡೆಯಾಗಲಿದ್ದಾರೆ. [ಲೋಕಾಯುಕ್ತದಲ್ಲಿ ಇದೇನಿದು ಹಗರಣ?]
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 11 ಆರೋಪಿಗಳನ್ನು ಎಸ್ಐಟಿ ಬಂಧಿಸಿದೆ. ಲೋಕಾಯುಕ್ತರ ಪುತ್ರ ಅಶ್ವಿನ್ ರಾವ್, ಎಚ್.ಎಸ್.ರಾಜಶೇಖರ್, ಸೈಯದ್ ರಿಯಾಜ್, ಅಶೋಕ್ ಕುಮಾರ್, ಶ್ರೀನಿವಾಸ ಗೌಡ, ಶಂಕರೇಗೌಡ, ವಿ. ಭಾಸ್ಕರ್, ಮೊಹಮ್ಮದ್ ಸಾದಿಕ್, ಎನ್. ನರಸಿಂಹಮೂರ್ತಿ, ನರಸಿಂಹರಾವ್, ಹೊಟ್ಟೆ ಕೃಷ್ಣ ಬಂಧಿತ ಆರೋಪಿಗಳು. [ರಜೆ ಮೇಲೆ ತೆರಳಿದ ಲೋಕಾಯುಕ್ತರು]
ಸರ್ಕಾರಕ್ಕೆ ವರದಿ ಸಲ್ಲಿಕೆ : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಸರ್ಕಾರಕ್ಕೆ 1458 ಪುಟಗಳ ಮಧ್ಯಂತರ ವರದಿ ಸಲ್ಲಿಸಿದೆ. 33 ಸಾಕ್ಷಿಗಳ ಹೇಳಿಕೆ ಪರಿಗಣಿಸಿ ತಯಾರಿಸಿರುವ ವರದಿಯನ್ನು ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ಎಸ್.ಕೆ.ಪಟ್ನಾಯಕ್ ಸರ್ಕಾರಕ್ಕೆ ಮಂಗಳವಾರ ಸಲ್ಲಿಕೆ ಮಾಡಿದ್ದಾರೆ.
ಲೋಕಾಯುಕ್ತರಿಗೆ ರಜೆ : ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್ ಬಂಧನವಾದ ನಂತರ ಲೋಕಾಯುಕ್ತರು ರಜೆ ಹಾಕಿದ್ದಾರೆ. ಜುಲೈ 17ರಿಂದ ಆ.17ರ ತನಕ ರಜೆ ಹಾಕಿದ್ದರು. ನಂತರ ಅದನ್ನು ಆ.31ರ ತನಕ ವಿಸ್ತರಣೆ ಮಾಡಿದ್ದರು. ಸದ್ಯ, ಸೆಪ್ಟೆಂಬರ್ 30ರ ತನಕ ಭಾಸ್ಕರರಾವ್ ರಜೆ ಮೇಲೆ ತೆರಳಿದ್ದಾರೆ. [ಚಿತ್ರ : ಸೈಯದ್ ರಿಯಾಜ್]