"ಎಲ್ಲಿ ತನಕ ಇಸ್ಲಾಂ ಇರುತ್ತೆ ಅಲ್ಲಿವರೆಗೆ ಭಯೋತ್ಪಾದನೆ ಇರುತ್ತೆ"
ಶಿರಸಿ, ಮಾರ್ಚ್, 01: ವಿವಾದಾತ್ಮಕ ಹೇಳಿಕೆ ನೀಡಿದ್ದ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಕರಾವಳಿ ಭಾಗದಲ್ಲಿ ಆಕ್ರೋಶ ಹೊರಹೊಮ್ಮುತ್ತಿದೆ. ಇಷ್ಟಕ್ಕೂ ಹೆಗಡೆ ಮುಸ್ಲಿಮರ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆಯಾದರೂ ಏನು?
"ಎಲ್ಲಿವರೆಗೂ ಪ್ರಪಂಚದಲ್ಲಿ ಇಸ್ಲಾಂ ಇರುತ್ತೆಯೋ ಅಲ್ಲಿವರೆಗೆ ಭಯೋತ್ಪಾದನೆ ನಿರ್ಮೂಲನೆ ಸಾಧ್ಯವಿಲ್ಲ, ಭಯೋತ್ಪಾದನೆಯನ್ನು ಹೊಡದೊಡಿಸಲು ಸಾಧ್ಯವಿಲ್ಲ, ನಾನು ಹೇಳಿದಂತೆಯೇ ನೀವು ಪ್ರಕಟಮಾಡಬೇಕು'' ಹೀಗೆ ಮಾಧ್ಯಮದವರ ಮುಂದೆ ಹೇಳಿದ್ದವರು ಅನಂತ ಕುಮಾರ್ ಹೆಗಡೆ.[ಇಸ್ಲಾಂ ವಿರುದ್ಧದ ಹೇಳಿಕೆಗೆ ಅನಂತ್ ವಿರುದ್ಧ ಮುಸ್ಲಿಮರು ಕೆಂಡ]
ಶಿರಸಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿ ವೇಳೆ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಅನಂತ್ ಕುಮಾರ್ ಹೆಗಡೆ ಉತ್ತರಿಸಿದ ಬಗೆ ಇದು. ಹೆಗಡೆ ಈ ಹೇಳಿಕೆ ನಂತರ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರಿಂದ ವ್ಯಾಪಕ ವಿರೋಧ ಕೇಳಿಬಂದಿದ್ದು ಸಮಾಜ ವಿರೋಧಿ ಹೇಳಿಕೆ ನೀಡಿರುವ ಹೆಗಡೆ ಅವರನ್ನು ಬಂಧಿಸಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ.
ದೂರು ದಾಖಲು
ಅನಂತ್ ಕುಮಾರ್ ಹೆಗಡೆ ವಿರುದ್ಧ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಂಡಿದ್ದಾರೆ. ಜತೆಗೆ ಮುಸ್ಲಿಂ ಸಂಘಟನೆಗಳು ಭಟ್ಕಳದಲ್ಲಿ ಹೆಗಡೆ ವಿರುದ್ಧ ಸಮಾಜದಲ್ಲಿ ಶಾಂತಿ ಕದಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿವೆ.
ಜೆಎನ್ ಯು ಪ್ರಕರಣ
ದೆಹಲಿಯ ಜವಾಹರಲಾಲ್ ನೆಹರು ವಿವಿಯ ಗೊಂದಲಗಳ ಸಂಬಂಧ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅನಂತ್ ಕುಮಾರ್ ಹೆಗಡೆ ಖಾರವಾಗಿಯೇ ಉತ್ತರಿಸಿದರು. ಅಲ್ಲದೇ ನಾನು ಹೇಳಿದಂತೆ ಪ್ರಸಾರ ಮಾಡಿ, ಆ ತಾಕತ್ತು ನಿಮಗಿದೆಯಾ? ಎಂದು ಪ್ರಶ್ನೆ ಮಾಡಿದ್ದರು.
ಮುಸ್ಲಿಮರ ಮತ ಬೇಡ
ಆರ್ ಎಸ್ ಎಸ್ ಮೂಲದಿಂದ ಬಂದ ಹೆಗಡೆ ಹಿಂದೊಮ್ಮೆ ಚುನಾವಣೆ ಸಂದರ್ಭ ನನಗೆ ಮುಸ್ಲಿಮರ ಮತ ಅಗತ್ಯ ಇಲ್ಲ ಎಂದು ಹೇಳಿದ್ದು ಗಲಾಟೆಗೆ ಕಾರಣವಾಗಿತ್ತು. ಆದರೂ ಉತ್ತರ ಕನ್ನಡದಲ್ಲಿ ಅನಂತ ಜಯಭೇರಿ ಬಾರಿಸಿದ್ದರು.
ನಿರಂತರ ಗೆಲುವು
ಅತಿ ಕಡಿಮೆ ವಯಸ್ಸಿನಲ್ಲಿಯೇ ಸಂಸತ್ ಗೆ ಆಯ್ಕೆಯಾದ ಅನಂತ್ ಕುಮಾರ್ ಹೆಗಡೆ ಒಮ್ಮೆ ಮಾತ್ರ ಮಾರ್ಗರೇಟ್ ಆಳ್ವಾ ವಿರುದ್ಧ ಸೋಲು ಕಂಡಿದ್ದರು. ಇದಾದ ಆದರೆ ನಂತರ ಕೆನರಾ ಕ್ಷೇತ್ರದಲ್ಲಿ ನಿರಂತರವಾಗಿ ಗೆಲುವು ಸಾಧಿಸುತ್ತ ಬಂದಿದ್ದಾರೆ.
ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿದ್ದರು
ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಭದ್ರತೆಯನ್ನು ಲೆಕ್ಕಿಸದೇ ಭಾರತದ ಧ್ವಜ ಹಾರಿಸಿದ್ದವರು ಅನಂತ ಕುಮಾರ್ ಹೆಗಡೆ. ಅಲ್ಲಿಂದ ಆರ್ ಎಸ್ ಎಸ್ ಪಾಳೆಯದಲ್ಲಿ ಗುರುತಿಸಿಕೊಂಡು ರಾಜಕಾರಣಕ್ಕೆ ಧುಮುಕಿ ಸಂಸತ್ ಗೆ ಆಯ್ಕೆಯಾದರು.
ವಿಡಿಯೋ ನೋಡಿ
ಶಿರಸಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅನಂತ್ ಕುಮಾರ್ ಹೆಗಡೆ ನೀಡಿದ್ದ ಹೇಳಿಕೆ ಏನು? ಈ ವಿಡಿಯೋದಲ್ಲಿದೆ ಉತ್ತರ.