ಜೆಡಿಎಸ್ ಏಳು ಶಾಸಕರು ಕಾಂಗ್ರೆಸ್ಗೆ, ಖರ್ಗೆಗೆ ದೂರು
ಬೆಂಗಳೂರು, ಅ.18 : ಜೆಡಿಎಸ್ ಪಕ್ಷದ ಏಳು ಬಂಡಾಯ ಶಾಸಕರು ಕಾಂಗ್ರೆಸ್ ಸೇರಲು ವೇದಿಕೆ ಸಿದ್ಧವಾಗುತ್ತಿದೆ. ಆದರೆ, ಶಾಸಕರ ಪಕ್ಷ ಸೇರ್ಪಡೆಗೆ ಕಾಂಗ್ರೆಸ್ನ ಕೆಲವು ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ ಟಿಕೆಟಗ 'ಕೈ' ತಪ್ಪುವ ಭೀತಿ.
ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಸೇರ್ಪಡೆಗೆ ಗ್ರೀನ್ ಸಿಗ್ನಲ್
ಜೆಡಿಎಸ್ನ ಏಳು ಶಾಸಕರು ಕಾಂಗ್ರೆಸ್ ಸೇರಲು ಈಗಾಗಲೇ ಹೈಕಮಾಂಡ್ ಒಪ್ಪಿದೆ. ಈ ಕುರಿತು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಸ್ವ ಕ್ಷೇತ್ರದಲ್ಲೇ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಈ ನಿರ್ಧಾರಕ್ಕೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಹಲವು ಕಾಂಗ್ರೆಸ್ ನಾಯಕರು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಈ ಕುರಿತು ದೂರು ನೀಡಿದ್ದಾರೆ. ಪುಲಿಕೇಶಿ ನಗರದಲ್ಲಿ ಬಸವಲಿಂಗಪ್ಪ ಅವರ ಪುತ್ರ ಪ್ರಸನ್ನ ಕುಮಾರ್ ಟಿಕೆಟ್ ಪಡೆಯಲು ಪ್ರಯತ್ನ ನಡೆಸಿದ್ದಾರೆ. ಆದರೆ, ಜೆಡಿಎಸ್ನ ಅಖಂಡ ಶ್ರೀನಿವಾಸಮೂರ್ತಿ ಕಾಂಗ್ರೆಸ್ ಸೇರಿದರೆ ಟಿಕೆಟ್ ನೀಡಬೇಕಾಗುತ್ತದೆ.
ಇನ್ನು ಗಂಗಾವತಿಯಲ್ಲಿ ಎಚ್.ಆರ್.ಶ್ರೀನಾಥ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಜೆಡಿಎಸ್ನ ಇಕ್ಬಾಲ್ ಅನ್ಸಾರಿ ಕಾಂಗ್ರೆಸ್ ಸೇರಿದರೆ ಶ್ರೀನಾಥ್ ಅವರಿಗೆ ಟಿಕೆಟ್ ಕೈ ತಪ್ಪುದ ಆತಂಕ ಎದುರಾಗಿದೆ. ಹೀಗೆ ಹಲವು ಕ್ಷೇತ್ರಗಳಲ್ಲಿ ಟಿಕೆಟ್ ಕೈ ತಪ್ಪುವ ಆತಂಕ ಎದುರಾಗಿರುವುದರಿಂದ ಕಾಂಗ್ರೆಸ್ ನಾಯಕರು ಖರ್ಗೆ ಮೊರೆ ಹೋಗಿದ್ದಾರೆ.