ಎಸ್.ಎಂ. ಕೃಷ್ಣರ ನಿವಾಸದಲ್ಲಿ ಕಾಂಗ್ರೆಸ್ ನಾಯಕರ ಚರ್ಚೆ
ಹಿರಿಯ ಮುತ್ಸದ್ದಿಯ ನಿವೃತ್ತಿಯ ನಿರ್ಧಾರದ ಬಗ್ಗೆ ಸುದೀರ್ಘ ಚರ್ಚೆ ನಡೆಸುತ್ತಿರುವ ಕಾಂಗ್ರೆಸ್ ನ ಹಿರಿಯ ನಾಯಕರು
ಬೆಂಗಳೂರು, ಜನವರಿ 28: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುವ ನಿರ್ಧಾರವನ್ನು ಹೊರಹಾಕುತ್ತಿದ್ದಂತೆ, ರಾಜ್ಯ ಕಾಂಗ್ರೆಸ್ ನಲ್ಲಿ ಸಂಚಲನ ಸೃಷ್ಟಿಯಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಇಂಧನ ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಸಚಿವರಾದ ಮಲಕ ರೆಡ್ಡಿ ಮುಂತಾದ ಕಾಂಗ್ರೆಸ್ ನಾಯಕರು ಕೃಷ್ಣ ನಗರದ ಸದಾಶಿವ ನಗರದಲ್ಲಿರುವ ಅವರ ನಿವಾಸಕ್ಕೆ ಸಂಜೆ 7:30 ಸುಮಾರಿಗೇ ಹಾಜರಾಗಿದ್ದರು.[84ರ ವಯಸ್ಸಿನಲ್ಲಿ ರಾಜಕಾರಣಕ್ಕೆ ಗುಡ್ ಬೈ ಹೇಳಿದ ಎಸ್ಸೆಂ ಕೃಷ್ಣ]
ಆದರೆ, ಅವರಿಗೆ ಅಲ್ಲಿ ಕೃಷ್ಣ ದರುಶನವಾಗಿರಲಿಲ್ಲ. ಏಕೆಂದರೆ, ಆ ವೇಳೆಗಾಗಲೇ ಎಸ್.ಎಂ. ಕೃಷ್ಣ ಅವರು, ಅರಮನೆ ಮೈದಾನದಲ್ಲಿ ನಡೆಯುತ್ತಿದ್ದ ಕೇಂದ್ರ ಸಚಿವ ಹಾಗೂ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಹಾಗಾಗಿ, ಕಾರ್ಯಕ್ರಮ ಮುಗಿಸಿಕೊಂಡು ಕೃಷ್ಣ ಅವರು ಮನೆಗೆ ಬರುವವರೆಗೂ ಕಾಂಗ್ರೆಸ್ ನಾಯಕರು ಕೃಷ್ಣ ಅವರ ಮನೆಯಲ್ಲೇ ಕಾಯಬೇಕಾಯಿತು.[1962-2017: ಎಸ್ಸೆಂ ಕೃಷ್ಣ ಏರಿದ್ದೆಲ್ಲ ಎತ್ತರ, ಪಡೆದಿದ್ದೆಲ್ಲ ಅಧಿಕಾರ]
ಅಂತೂ, ರಾತ್ರಿ ಸುಮಾರು 10 ಗಂಟೆಗೆ ಕೃಷ್ಣ ಅವರು ತಮ್ಮ ಪತ್ನಿ ಪ್ರೇಮಾ ಕೃಷ್ಣ ಅವರೊಂದಿಗೆ ಮನೆಗೆ ವಾಪಸ್ಸಾಗಿದ್ದು, ಅವರೊಂದಿಗೆ ಕಾಂಗ್ರೆಸ್ ನಾಯಕರು ಚರ್ಚೆ ನಡೆಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ: ಮಾಜಿ ಮುಖ್ಯಮಂತ್ರಿಯವರು ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯುವ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಮೈಸೂರಿನಲ್ಲಿ ಆರೋಪಿಸಿದ್ದಾರೆ.[ಕಾಂಗ್ರೆಸ್ಸಿಗೆ ಎಸ್ ಎಂ ಕೃಷ್ಣ ಗುಡ್ ಬೈ; ಯಾರ್ಯಾರು ಏನೇನು ಅಂದ್ರು?]