ಅವರಪ್ಪನಾಣೆಗೂ ಯಡಿಯೂರಪ್ಪ ಮತ್ತೆ ಸಿಎಂ ಆಗಲ್ಲಾ, ಉಗ್ರಪ್ಪ ಉವಾಚ
ಉತ್ತರಪ್ರದೇಶದಂತೆ ಕರ್ನಾಟಕದಲ್ಲೂ ಎರಡು ರಾಷ್ಟ್ರೀಯ ಪಕ್ಷಗಳ ಮುಖಂಡರ ನಡುವೆ ಮಾತಿನ ಯುದ್ದ ಮುಂದುವರಿಕೆ.
ಬೆಂಗಳೂರು, ಫೆ 21: ಅತ್ತ ಉತ್ತರಪ್ರದೇಶದಲ್ಲಿ ನೋಡಿದರೆ ಹಾಗೆ, ಇಲ್ಲಿ ಬೆಂಗಳೂರಿನಲ್ಲಿ ನೋಡಿದರೆ ಹೀಗೆ.. ಈ ರಾಜಕೀಯ ನಾಯಕರ ಮಾತಿನ ಚಾಳಿಗೆ ಬ್ರೇಕ್ ಬೀಳುವುದು ಎಂತೋ?
ಕತ್ತೆ, ದತ್ತುಪುತ್ರ, ಬೆಹನ್ಜೀ ಸಂಪತ್ತಿ ಪಾರ್ಟಿ, ಮಿಸ್ಟರ್ ನೆಗೆಟಿವ್ ದಲಿತ್ ಮ್ಯಾನ್ ಹಾಗೇ.. ಹೀಗೆ ಎನ್ನುವ ಹೇಳಿಕೆ ಉತ್ತರಪ್ರದೇಶದ ಕಡೆಯಿಂದ ಬರುತ್ತಿದ್ದರೆ, ಇತ್ತ ಜೈಲಿಗೆ ಕಳುಹಿಸುತ್ತೇನೆ.. ಮಹಾನ್ ಭ್ರಷ್ಟ, ದೊಡ್ಡ ಕಳ್ಳ, ಹುಚ್ಚು ಹಿಡಿದಿದೆ, ಭೂತದ ಬಾಯಿಯಲ್ಲಿ ಭಗವದ್ಗೀತೆ.. ಎನ್ನುವ ಹುಚ್ಚಾಟದ ಹೇಳಿಕೆ ಕರ್ನಾಟಕದಿಂದ ಬರುತ್ತಿದೆ.
ಹೈಕಮಾಂಡಿಗೆ ಕಪ್ಪದ ವಿಚಾರದ ನಂತರ ತಾರಕಕ್ಕೇರಿರುವ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ಮಾತಿನ ಯುದ್ದದ ಪ್ರಹಸನಕ್ಕೆ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪನವರ ಹೇಳಿಕೆ ಮತ್ತೊಂದು ಸೇರ್ಪಡೆಯಾಗಿದೆ. (ಬಿಎಸ್ವೈಗೆ ಹುಚ್ಚು ಹಿಡಿದಿದೆ, ದಿನೇಶ್ ಗುಂಡೂರಾವ್)
ಬೆಂಗಳೂರಿನಲ್ಲಿ ಮಂಗಳವಾರ (ಫೆ 21) ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಉಗ್ರಪ್ಪ, ನಾನು ಸಿಎಂ ಆದ ಕೂಡಲೇ ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸುತ್ತೇನೆ ಎನ್ನುವ ಬಿಎಸ್ವೈ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಸ್ವಾಮಿ ಯಡಿಯೂರಪ್ಪನವರೇ ನೀವು ನಿಮ್ಮಪ್ಪನಾಣೆಗೂ ಮತ್ತೆ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ, ಬಿಜೆಪಿ ಅಧಿಕಾರಕ್ಕೂ ಬರುವುದಿಲ್ಲ ಬಿಡಿ ಎಂದು ಹರಿಹಾಯ್ದಿದ್ದಾರೆ.
ಬಿಜೆಪಿ ಅಧಿಕಾರದಲ್ಲಿದ್ದ ಐದು ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳಾದರು. ಸಿಎಂ ಆಗುವ ಮುಂಚೆ ಮೂವರ ಆಸ್ತಿ ಎಷ್ಟಿತ್ತು, ಈಗ ಎಷ್ಟಿದೆ ಎನ್ನುವುದರ ಬಗ್ಗೆ ತನಿಖೆ ಎದುರಿಸಲು ಬಿಎಸ್ವೈ, ಶೆಟ್ಟರ್ ಮತ್ತು ಸದಾನಂದ ಗೌಡ್ರು ಸಿದ್ದರಿದ್ದಾರೆಯೇ ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯನವರನ್ನು ಜೈಲಿಗೆ ಕಳುಹಿಸಲು ನೀವು ಸಿಎಂ ಆಗುವ ಗಳಿಗೆಗೆ ಯಾಕೆ ಕಾಯುತ್ತೀರಿ, ನಿಮ್ಮ ಸರಕಾರವೇ ಕೇಂದ್ರದಲ್ಲಿ ಇದೆ ತಾನೇ, ತಾಕತ್ತಿದ್ದರೆ ಈಗಲೇ ಅವರನ್ನು ಜೈಲಿಗೆ ಕಳುಹಿಸಿ ಎಂದು ಉಗ್ರಪ್ಪ, ಯಡಿಯೂರಪ್ಪನವರಿಗೆ ಸವಾಲೆಸೆದಿದ್ದಾರೆ.