'ಡೈರಿ ನನ್ನದಲ್ಲ, ಮನೆಗೆ ಬಂದವರು ಬಿಟ್ಟು ಹೋಗಿರಬಹುದು' ಗೋವಿಂದರಾಜ್
ಕಾಂಗ್ರೆಸ್ ಹೈಕಮಾಂಡಿಗೆ ನೀಡಿದ್ದಾರೆ ಎನ್ನಲಾದ ಕಪ್ಪದ ವಿಚಾರಕ್ಕೆ ಸಂಬಂಧಿಸಿದ ಡೈರಿಯ ಹಾಳೆಗಳು ರಾಷ್ಟ್ರೀಯ ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿದ್ದಂತೆ ಪ್ರಕರಣದ ಕೇಂದ್ರ ಬಿಂದು ವಿಧಾನಪರಿಷತ್ ಸದಸ್ಯ ಗೋವಿಂದರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು, ಫೆಬ್ರವರಿ 23: ಕಾಂಗ್ರೆಸ್ ಹೈಕಮಾಂಡಿಗೆ ನೀಡಿದ್ದಾರೆ ಎನ್ನಲಾದ ಕಪ್ಪದ ವಿಚಾರಕ್ಕೆ ಸಂಬಂಧಿಸಿದ ಡೈರಿಯ ಹಾಳೆಗಳು ರಾಷ್ಟ್ರೀಯ ಮಾಧ್ಯಮಗಳಲ್ಲಿ ಭಿತ್ತರವಾಗುತ್ತಿದ್ದಂತೆ ಪ್ರಕರಣದ ಕೇಂದ್ರ ಬಿಂದು ವಿಧಾನಪರಿಷತ್ ಸದಸ್ಯ ಗೋವಿಂದರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
"ಡೈರಿಗೂ ನನಗೂ ಸಂಬಂಧವಿಲ್ಲ. ಇಲ್ಲಿರುವ ಹ್ಯಾಂಡ್ ರೈಟಿಂಗ್ (ಕೈ ಬರಹ) ನನ್ನದಲ್ಲ. ಮನೆಗೆ ಯಾರ್ಯಾರೋ ಬಂದು ಹೋಗುತ್ತಿರುತ್ತಾರೆ. ಅವರು ಯಾರಾದರೂ ಬಿಟ್ಟು ಹೋಗಿರಬಹುದು," ಎಂದು ಹೇಳಿದ್ದಾರೆ.[ಡೈರಿಯಲ್ಲಿ ಕಂಡ ಡೊನೆಷನ್ ಆರ್ ಜಿ ಟೂರಿಗೆ ವಿನಿಯೋಗ!]
"ಇದು ಆದಾಯ ತೆರಿಗೆ ಇಲಾಖೆಗೆ ಸಂಬಂಧಿಸಿದ ವಿಚಾರ. ಇದರ ತನಿಖೆಯನ್ನು ಮಾಡುತ್ತಿದ್ದರು. ತನಿಖೆ ವೇಳೆಯೂ ನಾನು ಇದು ನನ್ನದಲ್ಲ ಎಂದು ಹೇಳಿದ್ದೇನೆ. ಒಂದು ವರ್ಷ ಆದ ಮೇಲೆ ಹೀಗೆಲ್ಲಾ ನಡೆದಿರೋದು ನನಗೂ ಆಶ್ಚರ್ಯವಾಗಿದೆ. ಡೈರಿ ನನಗೆ ಸೇರಿದ್ದರೆ ಇಷ್ಟು ಸಮಯ ತನಿಖೆ ಮಾಡದೆ ಯಾಕೆ ಇರುತ್ತಿದ್ದರು?" ಎಂದು ಅವರು ಪ್ರಶ್ನಿಸಿದ್ದಾರೆ. [ಅನಂತ್-ಯಡಿಯೂರಪ್ಪ ಸಂಭಾಷಣೆಯೇ ತಿರುಚಿದ್ದಂತೆ, ಕೇಸ್ ದಾಖಲಿಸಿದ ಬಿಜೆಪಿ]
ಇನ್ನು, "ಸೆಕ್ಷನ್ 158ರ ಅಡಿಯಲ್ಲಿ ಇದನ್ನು ಸೋರಿಕೆ ಮಾಡಲು ಬರುವುದಿಲ್ಲ. ಯಾರು ಕೊಟ್ಟಿದ್ದಾರೋ ಗೊತ್ತಿಲ್ಲ. ಕೇಂದ್ರವೂ ಕೊಟ್ಟಿರಬಹುದು. ಡೈರಿಯ ಮಾಹಿತಿಗಳನ್ನು ಆರ್.ಟಿ.ಐ ಮೂಲಕ ಕೊಡಲು ಬರುವುದಿಲ್ಲ ಎಂಬ ಕಾರಣಕ್ಕೆ ನಾನು 'ನೀವು ಕೊಟ್ಟಿದ್ದೀರಾ' ಎಂದು ಕೇಳಿ ಆದಾಯ ತೆರಿಗೆ ಪತ್ರ ಬರೆದಿದ್ದೇನೆ," ಎಂದು ಗೋವಿಂದರಾಜ್ ಹೇಳಿದರು.
"ನಾನು ಹೇಳುವುದು ಇಷ್ಟೆ. ಡೈರಿಗೂ ನನಗೂ ಸಂಬಂಧವಿಲ್ಲ. ಇಲ್ಲಿರುವ ಹ್ಯಾಂಡ್ ರೈಟಿಂಗ್ ನನ್ನದಲ್ಲ. ಡೈರಿ ತಲುಪಿಸಿದವರು ನನ್ನ ಸ್ಟೇಟ್ ಮೆಂಟ್ (ಸ್ಪಷ್ಟನೆ) ಜತೆ ತಲುಪಿಸಿದರೆ ಒಳ್ಳೆಯದು. ಯಾರೋ ಹುಚ್ಚರು ಡೈರಿಯಲ್ಲಿ ಏನೇನೋ ಇನಿಶಿಯಲ್ ಗಳನ್ನು ಬರೆದಿದ್ದಾರೆ. ಇದರ ಹಿಂದೆ ರಾಜಕೀಯ ಕಾರಣ ಇದ್ದರೂ ಇರಬಹುದು," ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. [ಗೋವಿಂದರಾಜ್ ಡೈರಿ ಸ್ಪೋಟ: ಕೋಟಿ ಕೋಟಿ ಹಣದ ಸಂಪೂರ್ಣ ವಿವರ ]