ಡೊನೇಷನ್ ಗೇಟ್ : ಬಿಜೆಪಿ ಬಣ್ಣ ಬಯಲು ಮಾಡಿದ ಕಾಂಗ್ರೆಸ್
ಬೆಂಗಳೂರು, ಫೆಬ್ರವರಿ 25 : ಗೋವಿಂದರಾಜ್ ಡೈರಿಯಲ್ಲಿರುವ ಮಾಹಿತಿ ನಿಜವೇ ಆಗಿದ್ದಲ್ಲಿ ಸಿದ್ದರಾಮಯ್ಯನವರು ರಾಜಕೀಯ ಸನ್ಯಾಸ ತೆಗೆದುಕೊಳ್ಳಬೇಕೆಂದು ಸವಾಲು ಹಾಕಿದ್ದ ಯಡಿಯೂರಪ್ಪನವರು ಈಗ ತಾವೇ ಆ ಸವಾಲು ಸ್ವೀಕರಿಸುವಂಥ ಸಂದರ್ಭ ಎದುರಾಗಿದೆ.
2013ರಲ್ಲಿ ಯಡಿಯೂರಪ್ಪನವರ ಅತ್ಯಾಪ್ತರಾಗಿದ್ದ ಲೆಹರ್ ಸಿಂಗ್ ಅವರ ಮೇಲೆ ಐಟಿ ದಾಳಿ ನಡೆದಾಗ ಸಿಕ್ಕ ಡೈರಿಯಲ್ಲಿ ಬಿಜೆಪಿ ಹೈಕಮಾಂಡಿಗೆ, ರಾಷ್ಟ್ರೀಯ ನಾಯಕರಿಗೆ ಎಷ್ಟೆಷ್ಟು ಕಪ್ಪಕಾಣಿಕೆ ಹೋಗಿದೆ ಎಂಬ ವಿವರಗಳಿರುವುದು ಬಿಜೆಪಿಗೆ ಬಿಸಿತುಪ್ಪದಂತಾಗಿದೆ.
ಲೆಹರ್ ಸಿಂಗ್ ಅವರ ಸಹಿ ಇರುವ ಡೈರಿಯ ಎರಡು ಪುಟಗಳಲ್ಲಿ ಯಾರಿಗೆ ಎಷ್ಟು ಹಣ ಸಂದಾಯವಾಗಿದೆ ಎಂಬ ಬಗ್ಗೆ ವಿವಿರಗಳಿವೆ. ಇಲ್ಲಿ ಕೂಡ ಸಂಕೇತಾಕ್ಷರಗಳನ್ನು ನಮೂದಿಸಲಾಗಿದೆ. ಆ ಸಂಕೇತಾಕ್ಷರಗಳು ಯಾರವು ಎಂಬುದು ಬಯಲಾಗಬೇಕಾಗಿದೆ. [ಡೊನೇಷನ್ ಗೇಟ್ ಹಗರಣ : ರಾಜಕಾರಣಿಗಳ ವಾಗ್ಬಾಣ]
ಯಾರ್ಯಾರಿಂದ ಹಣ ಇಸಿದುಕೊಳ್ಳಲಾಯಿತು ಎಂಬ ಬಗ್ಗೆ ಇಲ್ಲಿ ವಿವರಣೆಯಿದೆ. ಅದರ ಪ್ರಕಾರ, ಸಿಎಂಓ ಮತ್ತು ಆರ್ನಿಂದ 67 ಕೋಟಿ ರು., ಎಂ. ನಿರಾಣಿಯಿಂದ 128 ಕೋಟಿ ರು., ರೇಣುನಿಂದ 13 ಕೋಟಿ ರು., ಜೆಎಸ್ ರಿಂದ 9 ಕೋಟಿ, ಎಸ್ಕೆಯಿಂದ 3 ಕೋಟಿ, ಆರ್ ಆರ್ + ಕೆಎಸ್ಇಯಿಂದ 31 ಕೋಟಿ, ಎಸ್ ಆರ್ ನಿಂದ 1.8 ಕೋಟಿ, ಡಿವಿಎಸ್ + ಪಿಎಸ್ ರಿಂದ 11 ಕೋಟಿ ಎಂದು ಬರೆಯಲಾಗಿದೆ.
ಮುಂದಿನ ಪುಟದಲ್ಲಿ ಯಾರ್ಯಾರಿಗೆ ಹಣ ಸಂದಾಯವಾಯಿತು ಎಂಬ ವಿವರಗಳಿವೆ. ಎಎಸ್ ಗೆ 34 ಕೋಟಿ, ಬಿಎಸ್ವೈಗೆ 69 ಕೋಟಿ, ನಮೋಗೆ 120 ಕೋಟಿ, ಎಸ್ಎಸ್ 7 ಕೋಟಿ, ಎಕೆಗೆ 18 ಕೋಟಿ, ಎಂಡಿ ರಾವ್ 4.8 ಕೋಟಿ, ಡಿಪಿಗೆ 9 ಕೋಟಿ, ಪಾರ್ಟಿ ಫಂಡ್ 90 ಕೋಟಿ, ಮಾಧ್ಯಮ (ಪಿಟಿವಿ) 10 ಕೋಟಿ, ಎಚ್ ವಿ (ದೆಹಲಿ ಚುನಾವಣೆ) 32 ಕೋಟಿ. ಒಟ್ಟು 391.8 ಕೋಟಿ.
Yedyurappa BJP President needs to reply to the dairy details of his close associate &MLC Lehar Singh. Amith Shah BJP Chief must reply. pic.twitter.com/96WD6csgZT
— F H Jakkappanavar (@FHJakkappanavar) February 25, 2017
ಇದು ವಾಸ್ತವದ ಸಂಗತಿಯಾ ಅಥವಾ ಸೃಷ್ಟಿಸಿದ್ದಾ ಎಂಬುದು ವಸ್ತುನಿಷ್ಠ ತನಿಖೆಯಿಂದ ಮಾತ್ರ ಹೊರಬಲ್ಲದು. ಈಗ ಯಡಿಯೂರಪ್ಪನವರ ಸ್ಥಿತಿ ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡ ಸ್ಥಿತಿಯಾಗಿದೆ. ಇದು ಕಾಂಗ್ರೆಸ್ ಪಕ್ಷಕ್ಕೂ ಅನ್ವಯಿಸುತ್ತದೆ. ಉನ್ನತಮಟ್ಟದ ತನಿಖೆಯಾದರೆ ಮಾತ್ರ ನಿಜಾಂಶ ಹೊರಬರಬಲ್ಲದು.
ಕೆಲ ದಿನಗಳ ಹಿಂದೆ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ, ತಾವು ಕೂಡ ಬಿಜೆಪಿ ಹೈಕಮಾಂಡಿಗೆ ದುಡ್ಡು ನೀಡಿದ್ದೇವೆ, ಆದರೆ ಸಿದ್ದರಾಮಯ್ಯನಂತೆ 1000 ಕೋಟಿ ರುಪಾಯಿಯಷ್ಟು ನೀಡಿಲ್ಲ ಎಂದು ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ಗುಸುಗುಸು ಮಾತನಾಡಿದ್ದ ಸಿಡಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿತ್ತು.