ನಂಜನಗೂಡಿನಲ್ಲಿ 'ಎಣ್ಣೆ ಬಂದಾಗ ಕಣ್ಣು ಮುಚ್ಚಿ' ಕುಳಿತ ಕಾಂಗ್ರೆಸ್?
ಏಪ್ರಿಲ್ 9ರಂದು ನಡೆಯಲಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿಯ ಕೆಲವೊಂದು ಲೋಪದೋಷಗಳನ್ನು ಎತ್ತಿ ಕಾಂಗ್ರೆಸ್ ಪ್ರಚಾರ ನಡೆಸಿದರೂ ನಡೆಸಬಹುದು. ಈ ಎರಡು ಕ್ಷೇತ್ರದ ಫಲಿತಾಂಶ ಏಪ್ರಿಲ್ 13ರಂದು ಹೊರಬೀಳಲಿದೆ.
ನಂಜನಗೂಡು ಅಸೆಂಬ್ಲಿ ಉಪಚುನಾವಣೆ ಕಣದಲ್ಲಿರುವ ಶ್ರೀನಿವಾಸ್ ಪ್ರಸಾದ್ ಮತ್ತು ಕಳಲೆ ಶ್ರೀನಿವಾಸಮೂರ್ತಿ ನಡುವಿನ ಫೈಟ್ ಎನ್ನುವುದಕ್ಕಿಂತ ಇದು ಯಡಿಯೂರಪ್ಪ ವರ್ಸಸ್ ಸಿದ್ದರಾಮಯ್ಯ ನಡುವಿನ ಫೈಟ್ ಎನ್ನುವುದೇ ಸೂಕ್ತ.
ಜಿದ್ದಿಗೆ ಬಿದ್ದಂತೆ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯ ಪ್ರಚಾರದ ಉಸ್ತುವಾರಿಯನ್ನು ಸಿಂಗಲ್ ಹ್ಯಾಂಡೆಡ್ ಆಗಿ ಹೆಗಲಮೇಲೆ ಹೊತ್ತು ಸಾಗುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಈ ಉಪಚುನಾವಣೆಯ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ.
ಜೊತೆಗೆ ಗೆದ್ದೇ ಗೆಲ್ಲುತ್ತೇನೆ, ನನಗೆ ಇಲ್ಲಿ ಸರಿಸಾಟಿ ಯಾರೂ ಇಲ್ಲ ಎಂದು ಹೇಳಿಕೆ ನೀಡುತ್ತಿರುವ ಶ್ರೀನಿವಾಸ ಪ್ರಸಾದ್ ಅವರಿಗೂ ರಾಜಕೀಯವಾಗಿ ಅಳಿವು ಉಳಿವಿನ ಪ್ರಶ್ನೆ. ಸಿದ್ದರಾಮಯ್ಯನವರ ವಿರುದ್ದ ಸೆಟೆದು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಶ್ರೀನಿವಾಸ್ ಪ್ರಸಾದ್ ಅವರ ವೈಯಕ್ತಿಕ ಪ್ರತಿಷ್ಠೆಗೆ ಈ ಉಪಚುನಾವಣೆ ಉತ್ತರ ನೀಡಲಿದೆ.
ನಂಜನಗೂಡು ಅಸೆಂಬ್ಲಿ ವ್ಯಾಪ್ತಿಯ ಗ್ರಾಮಗ್ರಾಮಕ್ಕೂ ಹೋಗಿ ಪ್ರಚಾರ ನಡೆಸುತ್ತಿರುವ ಯಡಿಯೂರಪ್ಪನವರಿಗೆ, ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಪ್ರಸಾದ್ ಅವರ ಗೈರು ಸವಾಲಾಗಿ ಪರಿಣಮಿಸದೇ ಇರದು. ಕೆಲವು ದಿನಗಳಿಂದ ಕ್ಷೇತ್ರದಲ್ಲಿ ಬೀಡುಬಿಟ್ಟು ಯಡಿಯೂರಪ್ಪ ಪ್ರಚಾರ ಆರಂಭಿಸಿದ್ದರೂ, ಶ್ರೀನಿವಾಸ್ ಪ್ರಸಾದ್ ಅದರಲ್ಲಿ ಹಾಜರಾಗಿದ್ದು ಬೆರಳಣಿಕೆಯಷ್ಟು ಪ್ರಚಾರ ಸಭೆಗಳಲ್ಲಿ ಮಾತ್ರ.
ಯಾರೇ ಮುಖ್ಯಮಂತ್ರಿಯಾಗಿರಲಿ, ಸರಕಾರಕ್ಕೆ ಆದಾಯ ತಂದುಕೊಡುವ ಆಯಕಟ್ಟಿನ ಕಂದಾಯ ಇಲಾಖೆಯ ಸಚಿವರಾಗಿದ್ದ ಶ್ರೀನಿವಾಸ್ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಸಿದ್ದರಾಮಯ್ಯ ಕೈಬಿಟ್ಟಿದ್ದು ಯಾಕೆ ಎನ್ನುವುದಕ್ಕೆ ಕಾರಣ ಮೇಲ್ನೋಟಕ್ಕೆ ಸ್ಪಷ್ಟ.. ಅದು ಶ್ರೀನಿವಾಸ್ ಪ್ರಸಾದ್ ಅವರ ಕೈಕೊಟ್ಟ ಆರೋಗ್ಯ.
ನಂಜನಗೂಡು ಮತ್ತು ಗುಂಡ್ಲುಪೇಟೆ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 9ರಂದು ನಡೆಯಲಿದ್ದು, ಏಪ್ರಿಲ್ 13ರಂದು ಫಲಿತಾಂಶ ಹೊರಬೀಳಲಿದೆ. 'ಎಣ್ಣೆ (ಮದ್ಯ) ಬಂದಾಗ ಕಣ್ಣು ಮುಚ್ಚಿ ಯಾರಾದರೂ ಕೂತ್ಕೋತಾರಾ' ಎನ್ನುವ ಗಾದೆಯ ಮಾತಿನಂತೆ ಬಿಜೆಪಿಯ ಕೆಲವೊಂದು ಲೋಪದೋಷಗಳನ್ನು ಎತ್ತಿ ಕಾಂಗ್ರೆಸ್ ಪ್ರಚಾರ ನಡೆಸಿದರೂ ನಡೆಸಬಹುದು. ಮುಂದೆ ಓದಿ..
ಬಿಜೆಪಿಯ ಹಿರಿಯ ಮುಖಂಡರು ಪ್ರಚಾರದಲ್ಲಿ
ಯಡಿಯೂರಪ್ಪ, ಸಿ ಟಿ ರವಿ, ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ ಆದಿಯಾಗಿ ಬಿಜೆಪಿಯ ಹಲವು ಮುಖಂಡರು ನಂಜನಗೂಡಿನಲ್ಲಿ ಬೀಡು ಬಿಟ್ಟು ನಿರಂತರ ಪ್ರಚಾರ ನಡೆಸುತ್ತಿದ್ದರೂ, ಶ್ರೀನಿವಾಸ್ ಪ್ರಸಾದ್ ಮನೆಯಿಂದ ಹೊರಬರದೇ ಇರುವುದು ಕ್ಷೇತ್ರದ ಜನತೆಗೆ ಅವರ ಆರೋಗ್ಯದ ವಿಚಾರದಲ್ಲಿ ಗುಸುಗುಸು ಮಾತನಾಡುವಂತಾಗಿದೆ.
ಶ್ರೀನಿವಾಸ್ ಪ್ರಸಾದ್ ಆರೋಗ್ಯದ್ದೇ ಸಮಸ್ಯೆ
ಶ್ರೀನಿವಾಸ್ ಪ್ರಸಾದ್ ಅವರ ಆರೋಗ್ಯದ ವಿಚಾರವನ್ನು ಹಿಡಿದುಕೊಂಡು ಕಾಂಗ್ರೆಸ್ ಪ್ರಚಾರಕ್ಕೆ ಇಳಿದರೆ, ಬಿಜೆಪಿಗೆ ಅದು ಮುಳುವಾಗುವ ಸಾಧ್ಯತೆ ಹೆಚ್ಚು. ಶ್ರೀನಿವಾಸ್ ಪ್ರಸಾದ್ ಅವರ ಆರೋಗ್ಯ ಹಿಂದಿನಂತಿಲ್ಲ, ಹೀಗಾಗಿ, ಕ್ಷೇತ್ರಕ್ಕೆ ಸಂಬಂಧಪಟ್ಟ ಅಭಿವೃದ್ದಿ ವಿಚಾರದಲ್ಲಾಗಲಿ ಅಥವಾ ಜನರ ಕಷ್ಟೋತ್ತರಗಳಿಗೆ ಅವರಿಂದ ಹೆಚ್ಚಿನ ನಿರೀಕ್ಷೆ ಮಾಡಬೇಡಿ. ಅದರ ಬದಲು ಕ್ಷೇತ್ರದ ಚಿರಪರಿಚಿತ ಹೆಸರಾದ ಕಳಲೆ ಶ್ರೀನಿವಾಸ ಮೂರ್ತಿಯವರಿಗೊಂದು ಅವಕಾಶ ನೀಡಿ ಎಂದು ಕಾಂಗ್ರೆಸ್ ಪ್ರಚಾರ ಮಾಡಿದರೂ ಆಶ್ಚರ್ಯ ಪಡಬೇಕಾಗಿಲ್ಲ.
ಮುಖ್ಯಮಂತ್ರಿಗಳನ್ನು ಏಕವಚನದಲ್ಲಿ ಸಂಭೋದಿಸುವುದು
ಇನ್ನು ಶ್ರೀನಿವಾಸ್ ಪ್ರಸಾದ್ ಪದೇ ಪದೇ ಸಿದ್ದರಾಮಯ್ಯನವರನ್ನು ಏಕವಚನದಲ್ಲಿ ಸಂಭೋದಿಸುತ್ತಿರುವುದನ್ನೂ ಉಲ್ಲೇಖಿಸಿ ಕಾಂಗ್ರೆಸ್ ಪ್ರಚಾರಕ್ಕೆ ಇಳಿಯಬಹುದು. ಕನಿಷ್ಠ ಈ ರಾಜ್ಯದ ಮುಖ್ಯಮಂತ್ರಿಗಳನ್ನು ಗೌರವಿಸಿ ಮಾತನಾಡಬೇಕೆಂದು ತಿಳಿಯದ ಶ್ರೀನಿವಾಸ್ ಪ್ರಸಾದ್ ಅವರಿಂದ ಇಲ್ಲಿನ ಮತದಾರ ಏನು ನಿರೀಕ್ಷಿಸಲು ಸಾಧ್ಯ ಎಂದು ಕಾಂಗ್ರೆಸ್ ಪ್ರಚಾರ ನಡೆಸಬಹುದು.
ಪ್ರತಾಪ್ ಸಿಂಹ ತೂಕವಾಗಿ ಮಾತನಾಡಬೇಕು
ಯಡಿಯೂರಪ್ಪನವರ ಜೊತೆ ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಮೈಸೂರು ಸಂಸದ ಪ್ರತಾಪ್ ಸಿಂಹ, ಆವೇಶದಿಂದ ಬೇಕಾಬಿಟ್ಟಿ ಹೇಳಿಕೆ ನೀಡಿದರೆ ಅದರ ಲಾಭವನ್ನು ಕಾಂಗ್ರೆಸ್ ಭರಪೂರ ಪಡೆಯುವ ಸಾಧ್ಯತೆಯಿದೆ. ಉದಾಹರಣೆಗೆ ಇತ್ತೀಚೆಗೆ ಗೀತಾ ಮಹಾದೇವಪ್ರಸಾದ್ ವಿರುದ್ದ ಗೂಟದ ಕಾರು ಎಂದು ಹೇಳಿಕೆ ನೀಡಿ ನಂತರ ಹಿಂದಕ್ಕೆ ಪಡೆದದ್ದು.
ಪ್ರಸಾದ್ ಗೆ ಸ್ಥಾನಮಾನದ ಆಸೆ
ಆರೋಗ್ಯ ಸರಿಯಿಲ್ಲದಿದ್ದರೂ ಶ್ರೀನಿವಾಸ್ ಪ್ರಸಾದ್ ಅವರಿಗೆ ಅಧಿಕಾರದ ಆಸೆ, ಇನ್ನು ಬಿಜೆಪಿಯಲ್ಲೂ ಇವರಿಗೆ ಸರಿಯಾದ ಸ್ಥಾನಮಾನ ಸಿಗದೇ ಇದ್ದಲ್ಲಿ ಅಲ್ಲೂ ಇರುತ್ತಾರೆ ಎನ್ನುವುದು ಏನು ಗ್ಯಾರಂಟಿ ಎನ್ನುವ ವಿಚಾರವನ್ನು ಇಟ್ಟುಕೊಂಡು ಕಾಂಗ್ರೆಸ್ ಪ್ರಚಾರ ನಡೆಸಬಹುದು.