ಕಾಂಡೋಂ ವಿತರಣೆಯಲ್ಲಿ ಐನೂರು ಕೋಟಿ ಸೋರಿಕೆ ಆಗಿದೆಯಾ?
ಬೆಂಗಳೂರು, ಸೆಪ್ಟೆಂಬರ್ 27: ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯಿಂದ 500 ಕೋಟಿ ರುಪಾಯಿ ಅವ್ಯವಹಾರವಾಗಿದೆ. ಈ ಸಮಿತಿಯು ರಾಜ್ಯ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಕಾಂಡೋಂ ವಿತರಣೆಗಾಗಿ ಮೀಸಲಿಟ್ಟಿರುವ ಹಣದಲ್ಲಿ 500 ಕೋಟಿ ರುಪಾಯಿ ದುರುಪಯೋಗವಾಗಿದೆ ಎಂದು ಬಿಜೆಪಿ ಕಾರ್ಪೋರೇಟರ್ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ದಾಖಲೆ ಸಹಿತ ಆರೋಪ ಮಾಡಿರುವ ಬಿಜೆಪಿ ನಗರ ಘಟಕದ ವಕ್ತಾರ ರಮೇಶ್, ಯು.ಟಿ.ಖಾದರ್ ಆರೋಗ್ಯ ಸಚಿವರಾಗಿದ್ದಾಗ ಅವ್ಯವಹಾರ ನಡೆದಿದೆ. ಆ ಸೊಸೈಟಿಗೆ ಮುಖ್ಯಮಂತ್ರಿ ಅಧ್ಯಕ್ಷರಾದರೆ, ಆರೋಗ್ಯ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಬಹುತೇಕ ಹಗರಣ ನಡೆದಿರುವುದು ಖಾದರ್ ಅವರು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಎಂದು ಅವರು ಆರೋಪಿಸಿದ್ದಾರೆ.[ಔಷಧಿ ಖರೀದಿಯಲ್ಲಿ ಅಕ್ರಮ : ಯು.ಟಿ.ಖಾದರ್ ಸ್ಪಷ್ಟನೆಗಳು]
ಸೊಸೈಟಿ ಅಧ್ಯಕ್ಷರಾದ ಸಿದ್ದರಾಮಯ್ಯ ವಿರುದ್ಧ ಕೂಡ ಭಷ್ಟಾಚಾರ ನಿಗ್ರಹ ದಳಕ್ಕೆ ರಮೇಶ್ ದೂರು ನೀಡಿದ್ದಾರೆ. ಏಡ್ಸ್ ನಿಯಂತ್ರಣ ಸೊಸೈಟಿಯು ಖಾಸಗಿ ಕಂಪೆನಿಯ ಕಾಂಡೋಂಗಳ ಪ್ರಚಾರ ಮಾಡುತ್ತಿದೆ. ಮತ್ತು ಈ ಕಾಂಡೋಂಗಳನ್ನೇ ಮಹಿಳೆಯರಿಗೆ ವಿತರಿಸುತ್ತಿದೆ. ಈ ಸೊಸೈಟಿಯು ಏಡ್ಸ್ ಬಗ್ಗೆ ಜಾಗೃತಿ ಮೂಡಿಸಬೇಕು ಹಾಗೂ ಎಚ್ ಐವಿ ಪೀಡಿತರಿಗೆ ಸಲಹೆ ಹಾಗೂ ಪುನರ್ವಸತಿ ಕಲ್ಪಿಸಬೇಕು.
ಯುನಿಸೆಫ್, ನ್ಯಾಷನಲ್ ಏಡ್ಸ್ ಕಂಟ್ರೋಲ್ ಆರ್ಗನೈಸೇಶನ್ ಇತರೆ ಸಂಸ್ಥೆಗಳಿಂದ ಬಂದಿರುವ ಅನುದಾನವನ್ನು ಹೇಗೆ ಬಳಸಲಾಗಿದೆ ಎಂಬ ಬಗ್ಗೆ ಸರಿಯಾದ ದಾಖಲೆಗಳನ್ನು ಇಟ್ಟಿಲ್ಲ. ಪರೀಕ್ಷೆಗಳಿಗೆ, ಚಿಕಿತ್ಸೆಗೆ ಎಷ್ಟು ಖರ್ಚು ಮಾಡಲಾಗಿದೆ ಎಂಬ ಬಗ್ಗೆ ಇರುವ ಮಾಹಿತಿಗಳು ಬೋಗಸ್ ಎಂದು ರಮೇಶ್ ಆರೋಪಿಸಿದ್ದಾರೆ.[ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕನ್ನ, ಮೂವರ ಬಂಧನ]
ಸದ್ಯ ಆಹಾರ ನಾಗರಿಕ ಪೂರೈಕೆ ಸಚಿವರಾಗಿರುವ ಖಾದರ್, ನಾವು ಯಾವುದೇ ತನಿಖೆ ಎದುರಿಸಲು ಸಿದ್ಧ. ಮೊದಲು ತನಿಖೆ ಆಗಲಿ. ನಾನು ಆತ್ಮವಿಶ್ವಾಸದಿಂದ ಇದ್ದೀನಿ. ಯಾಕೆಂದರೆ ಇಂಥ ಯಾವುದೇ ಕೆಲಸದಲ್ಲಿ ಭಾಗಿಯಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.