ದ.ಕನ್ನಡ, ಉಡುಪಿಯಲ್ಲಿ ನಾಳೆ (ಮೇ 22) ವೈದ್ಯಕೀಯ ಸೇವೆ ಬಂದ್
ವೈದ್ಯರು, ನರ್ಸಿಂಗ್ ಸಿಬ್ಬಂದಿಗಳ ಮೇಲಿನ ಹಲ್ಲೆ,ಆಸ್ಪತ್ರೆ ಗಳ ಮೇಲಿನ ದಾಳಿಗಳನ್ನು ಖಂಡಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸೋಮವಾರ (ಮೇ 22) ವೈದ್ಯಕೀಯ ಸೇವೆ ಬಂದ್.
ಮಂಗಳೂರು, ಮೇ 21: ದೇಶಾದ್ಯಂತ ಹೆಚ್ಚುತ್ತಿರುವ ವೈದ್ಯರು, ನರ್ಸಿಂಗ್ ಸಿಬ್ಬಂದಿಗಳ ಮೇಲಿನ ಹಲ್ಲೆ,ಆಸ್ಪತ್ರೆಗಳ ಮೇಲಿನ ದಾಳಿಗಳನ್ನು ಖಂಡಿಸಿ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸೋಮವಾರ (ಮೇ 22) ವೈದ್ಯಕೀಯ ಸೇವೆ ಬಂದ್ ಆಗಲಿದೆ.
ಮಂಗಳೂರು ಮತ್ತು ಉಡುಪಿ ನಗರ, ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ವೈದ್ಯಕೀಯ, ಡೆಂಟಲ್, ಪ್ಯಾರಾ ಮೆಡಿಕಲ್, ನರ್ಸಿಂಗ್,ಫಿಸಿಯೋಥೆರಪಿ ವಿಭಾಗದ ವೈದ್ಯರು ಮತ್ತು ವೈದ್ಯಕೀಯ ಸೇವಾ ನಿರತ ಸಿಬ್ಬಂದಿಗಳು ಬಂದ್ ನಲ್ಲಿ ಭಾಗವಹಿಸಲಿದ್ದಾರೆ.
ಜೊತೆಗೆ, ವಿದ್ಯಾರ್ಥಿಗಳು, ಹೆತ್ತವರು, ಸಮಾನ ಮನಸ್ಕ ನಾಗರಿಕರು, ಕನ್ನಡಕಟ್ಟೆ, ಕರವೇ ಕರಾವಳಿ ಮುಂತಾದ ಸಂಘಟನೆಗಳು, ವಿವಿಧ ಸಂಘ ಸಂಸ್ಥೆಗಳು ಸೋಮವಾರದ ಬಂದ್ ಗೆ ಬೆಂಬಲ ನೀಡಿದೆ. ತುರ್ತು ಚಿಕಿತ್ಸೆ ಹೊರತುಪಡಿಸಿ ಸೋಮವಾರ ಬೆಳಗ್ಗೆ ಆರು ಗಂಟೆಯಿಂದ 24ಗಂಟೆಯ ಬಂದ್ ಗೆ ಕರೆನೀಡಲಾಗಿದೆ.
ಅವಳಿ ಜಿಲ್ಲೆಯ ವೈದ್ಯರು, ಸಿಬ್ಬಂದಿಗಳು, ಸಂಘಟನೆಗಳು, ಮಂಗಳೂರು ಡಾ.ಅಂಬೇಡ್ಕರ್ ವೃತ್ತ (ಜ್ಯೋತಿ ಸರ್ಕಲ್) ದಿಂದ, ಕಾಲ್ನಡಿಗೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯವರೆಗೆ ತೆರಳಿ, ಸಾರ್ವಜನಿಕ ಕಿರು ಸಭೆಯನ್ನು ನಡೆಸಲು ನಿರ್ಧರಿಸಿದ್ದಾರೆ.
ವೈದ್ಯರಿಗೆ ಸೇವೆ ನೀಡಲು ಪೂರಕ ವಾತಾವರಣ ಕಲ್ಪಿಸಿ ಕೊಡಲು, ವೈದ್ಯರ ಪ್ರಾಣಹಾನಿ ಆಗುವುದನ್ನ ತಪ್ಪಿಸಲು ಮತ್ತು ಆಸ್ಪತ್ರೆಯಗಳ ಮೇಲಾಗುತ್ತಿರುವ ದಾಳಿಗಳನ್ನು ನಿಲ್ಲಿಸಲು ಸರಕಾರ ಕಾನೂನು ರೂಪಿಸಬೇಕೆಂದು ಒತ್ತಾಯಿಸಲು ನಿರ್ಧರಿಸಲಾಗಿದೆ.
ವೈದ್ಯರ ಮೇಲಾಗುತ್ತಿರುವ ದಾಳಿಗಳನ್ನು ರಾಷ್ಟ್ರಪತಿಗಳೂ ಖಂಡಿಸಿದ್ದಾರೆ. ಮಂಗಳೂರು ಸೇರಿದಂತೆ ದೇಶದ ವಿವಿದೆಡೆ ವೈದ್ಯರು, ಸಿಬ್ಬಂದಿಗಳು, ಆಸ್ಪತ್ರೆಗಳ ಮೇಲೆ ದಾಳಿ ನಡೆಯುತ್ತಿದೆ.
ಸರಕಾರ ಈ ಸಂಬಂಧ ಕಠಿಣ ಕಾನೂನು ರೂಪಿಸಬೇಕೆಂದು ನಾಳಿನ ಬಂದ್ ಕರೆಯಲಾಗಿದೆ. ಬಂದ್ ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ ಎಂದು National IMA Standing Committee Member for Planning Commission, New Delhi, Karavali Division Co-ordinator ಆಗಿರುವ ಅಣ್ಣಯ್ಯ ಕುಲಾಲ್ ಉಲ್ತೂರ್ 'ಒನ್ ಇಂಡಿಯಾ' ಗೆ ತಿಳಿಸಿದ್ದಾರೆ.
ನಾಳೆ ಕರೆನೀಡಲಾಗಿರುವ ಬಂದ್ ಬಗ್ಗೆ 'ಒನ್ ಇಂಡಿಯಾ' ಜೊತೆ ಮಾತನಾಡುತ್ತಾ ಆಯುಶ್ ಫೌಂಡೇಶನ್ ಅಧ್ಯಕ್ಷೆ ಆಶಾ ಜ್ಯೋತಿ ರೈ, ವೈದ್ಯರು ಮತ್ತು ಸಿಬ್ಬಂದಿಗಳು ಭಯದಿಂದ ಕೆಲಸ ಮಾಡುವ ವಾತಾವರಣ ನಿರ್ಮಾಣವಾಗಿರುವುದು ವಿಷಾದನೀಯ ಎಂದಿದ್ದಾರೆ.
ವೈದ್ಯರ ಮೇಲೆ ಹಲ್ಲೆ: ಮೇ 16ರಂದು ದೇರಳಕಟ್ಟೆಯ ಯೆನಪೋಯ ಮೆಡಿಕಲ್ ಕಾಲೇಜು ಹಾಸ್ಪಿಟಲ್ ನಲ್ಲಿ ಮಧುಮೇಹ ಕಾಯಿಲೆ ಯಿಂದಾಗಿ ರೋಗ ಉಲ್ಬಣ ಗೊಂಡು ಗಂಭೀರ ಸ್ಥಿತಿಯಲ್ಲಿದ್ದ 65 ವರ್ಷ ಪ್ರಾಯದ ರೋಗಿಯೊಬ್ಬರು ಸಾವನ್ನಪ್ಪಿದ್ದರು.
ಈ ವಿಷಯವನ್ನು ರೋಗಿಗಳ ಸಂಬಂಧಿಕರಿಗೆ ತಿಳಿಸಲು ತೆರಳಿದ ಹಿರಿಯ ವೈದ್ಯರನ್ನ ಹಿಡಿದು ಎಳೆದು ಥಳಿಸಿ ಆಸ್ಪತ್ರೆಯ 6ನೇ ಮಾಳಿಗೆಯಿಂದ ಎಳೆದು ತಂದು ಬಲವಂತವಾಗಿ ಗಾಡಿಯಲ್ಲಿ ಕೂರಿಸುವಾಗ ವೈದ್ಯರ ರಕ್ಷಣೆಗೆ ಬಂದ ಹಿರಿಯ ಶುಶ್ರೂಷಕಿ ಫ್ಲಾರೆನ್ಸ್ ಅವರನ್ನ ಥಳಿಸಿ ತಳ್ಳಿಹಾಕಿ ವೈದ್ಯರನ್ನು ರೋಗಿಯ ಸಂಬಂಧಿಕರು ತೊಕ್ಕಟ್ಟಿನಿಂದ ಅಪಹರಿಸಿಕೊಂಡು ಹೋಗಿದ್ದರು.
ತೊಕ್ಕಟ್ಟಿನಿಂದ ಮಂಗಳೂರಿನತ್ತ ಬಂದು ವೈದ್ಯರನ್ನು ನೇತ್ರಾವತಿ ನದಿಗೆ ದೂಡಿ ಹಾಕುವ ಪ್ರಯತ್ನ ಮಾಡುವಷ್ಟರಲ್ಲಿ ಅಪಹರಣಕಾರರ ವಾಹನವನ್ನು ಇನ್ನೊಂದು ಕಾರು ಹಿಂಬಾಲಿಸುತ್ತಿದ್ದುದನ್ನ ಕಂಡು ಅಪಹರಣಕಾರರು ಪುನಃ ಉಳ್ಳಾಲದತ್ತ ತಿರುಗಿಸಿ ಹೋಗುವಾಗ ವೈದ್ಯರು ಕೂಗಿಕೊಂಡಿದ್ದರಿಂದ ಪೊಲೀಸ್ ಮತ್ತು ನಾಗರೀಕರ ಸಹಾಯದಿಂದ ವೈದ್ಯರನ್ನ ಬಿಡುಗಡೆಗೊಳಿಸಲು ಸಾಧ್ಯವಾಯಿತು ಎಂದು ಭಾರತೀಯ ವೈದ್ಯಕೀಯ ಸಂಘದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.