ಕುಮಾರಸ್ವಾಮಿಗೆ ಹೆಚ್ಚಾದ ಆತ್ಮರತಿ: ಬಿಜೆಪಿ ನಾಯಕಿ ಲೇವಡಿ
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮೇಲೆ ಕುಮಾರಸ್ವಾಮಿ ಮಾಡಿರುವ ಆರೋಪಕ್ಕೆ ಬಿಜೆಪಿ ನಾಯಕಿ ತೇಜಸ್ವಿನಿ ಗೌಡ ಫುಲ್ ಗರಂ.
ಬೆಂಗಳೂರು, ಮೇ 25: ಆದಾಯ ತೆರಿಗೆ ಇಲಾಖೆಯಲ್ಲಿ ದಾಖಲಾದ ದೂರಿನ ವಿಚಾರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಯಡಿಯೂರಪ್ಪ ಮೇಲೆ ಮಾಡಿರುವ ಆರೋಪಕ್ಕೆ ಬಿಜೆಪಿ ನಾಯಕಿ ತೇಜಸ್ವಿನಿ ಗೌಡ ಫುಲ್ ಗರಂ ಆಗಿದ್ದಾರೆ.
ಜಂತಕಲ್ ಅಕ್ರಮ ಅದಿರು ಕೇಸಿನಲ್ಲಿ ಜಾಮೀನು ಸಿಕ್ಕನಂತರ ಕುಮಾರಸ್ವಾಮಿ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ, ಜೊತೆಗೆ ರಾಜ್ಯ ರಾಜಕೀಯದಲ್ಲಿ 'ನಾನೇ ಬೆಸ್ಟ್' ಎನ್ನುವ ಆತ್ಮರತಿ ಅವರಿಗೆ ಕಾಡುತ್ತಿದೆ ಎಂದು ತೇಜಸ್ವಿನಿ ಗೌಡ, ಎಚ್ಡಿಕೆ ವಿರುದ್ದ ಕಿಡಿಕಾರಿದ್ದಾರೆ. (ಬಿಎಸ್ವೈ ಮನೆಯಲ್ಲೇ ನನ್ನ ವಿರುದ್ಧ ದೂರು)
ನಗರದಲ್ಲಿ ಬುಧವಾರ (ಮೇ 24) ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸುತ್ತಿದ್ದ ತೇಜಸ್ವಿನಿ ಗೌಡ, ದಾಖಲೆ ಬಿಡುಗಡೆ ಮಾಡುತ್ತೇನೆಂದು 'ಹಿಟ್ ಅಂಡ್ ರನ್' ಮಾಡುತ್ತಿರುವವರು ನಮ್ಮ ರಾಜ್ಯದಲ್ಲಿ ಯಾರು ಎನ್ನುವುದು ಇಲ್ಲಿನ ಜನತೆಗೆ ಚೆನ್ನಾಗಿ ಗೊತ್ತು ಎಂದು ತೇಜಸ್ವಿನಿ ಹೇಳಿದ್ದಾರೆ.
ಯಡಿಯೂರಪ್ಪನವರನ್ನು ಹೇಡಿತನದ ರಾಜಕಾರಣ ಮಾಡುವವರು ಎಂದು ಹೇಳುವ ಕುಮಾರಸ್ವಾಮಿ ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಯಡಿಯೂರಪ್ಪ ಸುದೀರ್ಘ ರಾಜಕಾರಣದಿಂದ ಮುಖ್ಯಮಂತ್ರಿಯಾದವರು, ಕುಮಾರಸ್ವಾಮಿಯ ಹಾಗೇ ರಾತ್ರೋರಾತ್ರಿ ಮುಖ್ಯಮಂತ್ರಿಯಾದವರಲ್ಲ.
ಜೆಡಿಎಸ್ ಪಕ್ಷಕ್ಕೆ ನಿರ್ದಿಷ್ಟ ಗುರಿ ಅನ್ನೋದು ಇಲ್ಲ, ಅವರ ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡಿಕೊಂಡು ಬರುವವರು. ಒಂದು ಕಡೆ ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಜೆಡಿಎಸ್, ಅದೇ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ತೇಜಸ್ವಿನಿ ವ್ಯಂಗ್ಯವಾಡಿದ್ದಾರೆ. ಮುಂದೆ ಓದಿ..
ಬಿಎಸ್ವೈ ಮನೆಯಲ್ಲಿ ತಯಾರಾದ ದೂರು
ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಲಾಗಿರುವ ದೂರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲೇ ಸೃಷ್ಟಿಯಾಗಿದ್ದು, ದೂರು ನೀಡಿ ವಾಟ್ಸಾಪ್ ಮೂಲಕ ಮಾಧ್ಯಮದವರಿಗೆ ವಿಷಯ ತಿಳಿಸಿ, ಹೇಡಿತನದ ರಾಜಕಾರಣ ಬಿಎಸ್ವೈ ಮಾಡುತ್ತಿದ್ದಾರೆಂದು ಕುಮಾರಸ್ವಾಮಿ ಆರೋಪಿಸಿದ್ದರು.
ಇಪ್ಪತ್ತು ಸಾವಿರ ಕೋಟಿ ರೂಪಾಯಿ ದೂರು ಕೊಟ್ಟಿದ್ದು ಕಮ್ಮಿ ಆಯಿತಾ
ಬೆಂಗಳೂರು ಮಲ್ಲೇಶ್ವರಂನಲ್ಲಿರುವ ಜಗನ್ನಾಥ ಭವನದಲ್ಲಿ ಮಾಧ್ಯಮದರೊಂದಿಗೆ ಮಾತನಾಡುತ್ತಿದ್ದ ತೇಜಸ್ವಿನಿ ಗೌಡ, ರಾತ್ರೋರಾತ್ರಿ ಕುಮಾರಸ್ವಾಮಿ ಸಿಎಂ ಆಗಿರುವುದರಿಂದ, ನಾನೇ ಬೆಸ್ಟ್ ಸಿಎಂ ಅನ್ನೋ ಆತ್ಮರತಿ ಅವರಿಗೆ ಕಾಡುತ್ತಿದೆ. ಇಪ್ಪತ್ತು ಸಾವಿರ ಕೋಟಿ ರೂಪಾಯಿ ದೂರು ಕೊಟ್ಟಿದ್ದು ಕಮ್ಮಿ ಆಯಿತಾ ಎಂದು ತೇಜಸ್ವಿನಿ, ಕುಮಾರಸ್ವಾಮಿಯವರನ್ನು ಪ್ರಶ್ನಿಸಿದ್ದಾರೆ.
ಇಲ್ಲಿ ಯಾರೂ ಬಾಹುಬಲಿಯಲ್ಲ, ಕಟ್ಟಪ್ಪ ಅನ್ಕೋ ಬೇಕಾಗಿಲ್ಲ
ಕುಮಾರಸ್ವಾಮಿ ಹೇಳಿಕೆಯನ್ನು ಬಾಹುಬಲಿ ಚಿತ್ರಕ್ಕೆ ಹೋಲಿಸಿ ಮಾತನಾಡಿದ ತೇಜಸ್ವಿನಿ ಗೌಡ, ಇಲ್ಲಿ ಯಾರೂ ಬಾಹುಬಲಿಯೂ ಅಲ್ಲ, ಬಲ್ಲಾಳ ದೇವನೂ ಇಲ್ಲ. ಯಾರೂ ತಾನು ಕಟ್ಟಪ್ಪ ಎಂದು ಭಾವಿಸಿ ರಾಜಕಾರಣ ಮಾಡುವುದು ಬೇಡ ಎಂದು ತೇಜಸ್ವಿನಿ ಪರೋಕ್ಷವಾಗಿ ಕುಮಾರಸ್ವಾಮಿಯವರನ್ನು ಕಟ್ಟಪ್ಪಗೆ ಹೋಲಿಸಿದ್ದಾರೆ.
ಎಚ್ಡಿಕೆ, ದೇವೇಗೌಡ ಆದರ್ಶ ಪಾಲಿಸಲಿ
ಯಡಿಯೂರಪ್ಪ ಮತ್ತು ದೇವೇಗೌಡ್ರು ಹಿರಿಯ ರಾಜಕಾರಣಿಗಳು, ಕೊನೇ ಪಕ್ಷ ಕುಮಾರಸ್ವಾಮಿ ತನ್ನ ತಂದೆಯ ಆದರ್ಶವನ್ನಾದರೂ ಪಾಲಿಸಲಿ. ಹಿಟ್ ಎಂಡ್ ರನ್ ರಾಜಕಾರಣ ಎನ್ನುವುದು ಜೆಡಿಎಸ್ ಪಕ್ಷಕ್ಕೆ ಒಪ್ಪುವಂತಹ ಪದ - ತೇಜಸ್ವಿನಿ ಗೌಡ.
ತಮ್ಮ ಕುಟುಂಬದ ವಿರುದ್ಧ ರಾಜಕೀಯ ಪಿತೂರಿ
ಯಡಿಯೂರಪ್ಪ ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ರಾಜಕೀಯ ಪಿತೂರಿ ನಡೆಸುತ್ತಿದ್ದಾರೆ. ವೆಂಕಟೇಶ್ ಗೌಡ ಎಂಬುವರಿಂದ ನನ್ನ ವಿರುದ್ದ ಆದಾಯ ತೆರಿಗೆ ಕಚೇರಿಯಲ್ಲಿ ದೂರು ಸಲ್ಲಿಕೆಯಾಗುತ್ತದೆ, ಆದರೆ, ಆ ದೂರಿನ ಪ್ರತಿಯಲ್ಲಿ ವೆಂಕಟೇಶ್ ಗೌಡ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದಷ್ಟೇ ಇದೆ. ಇದು ಬಿಎಸ್ವೈ ಮನೆಯಲ್ಲಿ ತಯಾರದ ದೂರು ಎಂದು ಬುಧವಾರ (ಮೇ 24) ಕುಮಾರಸ್ವಾಮಿ ದೂರಿದ್ದರು.