ಭುಸ್ಸೆಂದ ನಾಗಪ್ಪ, ಮನೆಯೊಡತಿ ಲೀಲಾವತಿ ಉಸ್ಸಪ್ಪ!
ಮಡಿಕೇರಿ, ಮೇ 17 : ಹಾವೆಂದರೆ ಸಾಕು ಬೆಚ್ಚಿ ಬೀಳುವ ಜನರ ನಡುವೆ ಮನೆಯ ದೇವರಕೋಣೆಯಲ್ಲಿ ಶ್ರೀಮಂಜುನಾಥನ ಫೋಟೋದ ಮುಂದೆ ಹೆಡೆಬಿಚ್ಚಿ ಭುಸ್ ಎಂದರೆ ಮನೆ ಮಂದಿಗೆ ಹೇಗಾಗಬೇಡ? ಈ ಅಪರೂಪದ ದೃಶ್ಯವನ್ನು ನೋಡಿ ಕೆಲವರು ಬೆಚ್ಚಿಬಿದ್ದರೆ ಮತ್ತೆ ಕೆಲವರು ಶ್ರದ್ಧೆಯಿಂದ ನಮನ ಸಲ್ಲಿಸಿದರು.
ಇದೆಲ್ಲವೂ ನಡೆದಿದ್ದು ಕುಶಾಲನಗರ ಬಳಿಯ ಗುಡ್ಡೆಹೊಸೂರು ಗ್ರಾಮದ ನಿವಾಸಿ ಲೀಲಾವತಿ ಎಂಬುವರ ಮನೆಯಲ್ಲಿ. ಎಂದಿನಂತೆ ದೇವರ ಕೋಣೆಗೆ ತೆರಳಿದ ಲೀಲಾವತಿಯವರಿಗೆ ಅಚ್ಚರಿ ಕಾದಿತ್ತು. ಇದ್ದಕ್ಕಿದ್ದಂತೆ ಭುಸ್ ಎಂಬ ಶಬ್ದ ಬಂದಿತ್ತು. ಎಚ್ಚೆತ್ತು ನೋಡಿದ ಅವರಿಗೆ ದೇವರ ಕೋಣೆಯ ದೀಪ ಹಚ್ಚುವ ಸ್ಥಳದಲ್ಲಿ ದೊಡ್ಡಗಾತ್ರದ ಹೆಡೆಬಿಚ್ಚಿ ನಿಂತು ಭುಸುಗುಡುತ್ತಿದ್ದ ನಾಗರಹಾವಿನ ದರ್ಶನವಾಗಿತ್ತು. [ಮಂತ್ರವಾದಿ ಮಾತು ಕೇಳಿ ಹಾವು ಕೊಂದ ವ್ಯಕ್ತಿ]
ಕೊಠಡಿಯಿಂದ ಹೊರಗೆ ಬಂದ ಅವರು ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಹತ್ತಿರದವರು ಬಂದು ನೋಡಿದಾಗ ದೇವರ ಫೋಟೋ ಬಳಿ ತೆಕ್ಕೆ ಹಾಕಿ ಹೆಡೆಬಿಚ್ಚಿ ನಿಂತ ನಾಗರ ಹಾವು ಕಂಡಿದೆ. ಕೆಲವರು ದೈವಸ್ವರೂಪಿ ಹಾವೆಂದು ಕೈಮುಗಿದಿದ್ದೂ ಆಯಿತು. ಆದರೆ ಕೊಠಡಿಯ ಒಳಗೆ ಹೋಗಿ ಅದನ್ನು ಅಲ್ಲಿಂದ ಓಡಿಸುವ ಧೈರ್ಯ ಮಾತ್ರ ಯಾರಿಗೂ ಬರಲಿಲ್ಲ.
ಮನಯೊಡತಿ ಲೀಲಾವತಿಯವರ ತಾಯಿ ಪುಟ್ಟಬಸಮ್ಮ ದೈವಭಕ್ತೆ. ಅವರು 80ನೇ ವರ್ಷ ಪ್ರಾಯದಲ್ಲೂ ಎರಡು ಬಾರಿ ಶಬರಿಮಲೆಗೆ ಹೋಗಿ ಬಂದಿದ್ದರು. ಕಳೆದ ವರ್ಷವಷ್ಟೇ ತೀರಿಕೊಂಡಿದ್ದರು. ಅವರೇ ನಾಗರ ಹಾವಿನ ರೂಪದಲ್ಲಿ ಬಂದಿದ್ದಾರೆ, ಮನೆಗೆ ಒಳ್ಳೆಯದಾಗುತ್ತೆ.. ಹೀಗೆ ಕಥೆಯನ್ನೂ ಸ್ಥಳದಲ್ಲಿದ್ದವರು ಪೋಣಿಸಿದರು. [ಕರ್ನಾಟಕಕ್ಕೆ ಮತ್ತೊಬ್ಬ ಹಾವಾಡಗಿತ್ತಿ ಪ್ರಾಪ್ತಿ]
ಇಷ್ಟೆಲ್ಲಾ ಆದರೂ ಮನೆಯಲ್ಲಿ ಹಾವನ್ನು ಬಿಟ್ಟುಕೊಂಡು ಇರಲು ಸಾಧ್ಯವಿಲ್ಲ, ಅಲ್ವೆ? ಏನು ಮಾಡೋದು ಎಂದು ಯೋಚಿಸುತ್ತಿದ್ದಾಗ ಹಾವು ಹಿಡಿಯುವುದರಲ್ಲಿ ನಿಸ್ಸೀಮರಾಗಿರುವ ಸ್ಥಳೀಯ ಉಧ್ಘಮ್ ಶಾಲೆಯ ನೌಕರ ಶಿವು ವಿಶ್ವನಾಥ್ ಎಂಬವರು ಬಂದರು. ನೇರವಾಗಿ ದೇವರ ಕೋಣೆಗೆ ಹೋದವರೇ ಅಲ್ಲಿದ್ದ ನಾಗರಹಾವನ್ನು ಹಿಡಿದರು. ಬಳಿಕ ಪಕ್ಕದಲ್ಲಿರುವ ಆನೆಕಾಡಿನ ಅರಣ್ಯಕ್ಕೆ ಬಿಡಲಾಯಿತು. ಸದ್ಯ ಮನೆಯೊಡತಿ ಲೀಲಾವತಿ ನೆಮ್ಮದಿಯುಸಿರು ಬಿಟ್ಟಿದ್ದಾರೆ.