ಅಕ್ರಮ ಮರಳು ಸಾಗಣೆ : ರಾಜ್ಯಾದ್ಯಂತ ಸಿಐಡಿ ತನಿಖೆ
ರಾಯಚೂರು, ಫೆ. 16: ರಾಜ್ಯದೆಲ್ಲೆಡೆ ಅಕ್ರಮ ಮರಳು ಮಾಫಿಯಾ ತೀವ್ರ ತಲೆನೋವು ತಂದಿದೆ. ನಗರೀಕರಣ ಹೆಚ್ಚುತ್ತಿದ್ದಂತೆ ಕಟ್ಟಡ ನಿರ್ಮಾಣಕ್ಕಾಗಿ ಮರಳಿಗೆ ಬೇಡಿಕೆ ಅತಿಯಾಗಿದೆ. ಆದ್ದರಿಂದ ರಾಜ್ಯದೆಲ್ಲೆಡೆ ಅಕ್ರಮ ಮರಳು ಸಾಗಣೆ ಅಧಿಕಾರಿಗಳು ಹಾಗೂ ಜನರ ನಿದ್ದೆಗೆಡಿಸಿದ ವರದಿಗಳು ಬರುತ್ತಲೇ ಇವೆ.
ಆದ್ದರಿಂದ ರಾಜ್ಯದೆಲ್ಲೆಡೆ ನಡೆದ ಅಕ್ರಮ ಮರಳುಗಾರಿಕೆ ಪ್ರಕರಣಗಳನ್ನು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಜೊತೆಗೆ ಅಕ್ರಮ ಮರಳು ಸಾಗಣೆ ಕುರಿತು ವಾಸ್ತವ ವರದಿ ನೀಡಲು ರಮೇಶ್ಕುಮಾರ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಯಚೂರಿನಲ್ಲಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿಯವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದಾರೆ. ರಮೇಶ್ಕುಮಾರ್ ನೇತೃತ್ವದ ಸಮಿತಿ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಶೀಘ್ರ ವರದಿ ಸಲ್ಲಿಸಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿರುವ ಮರಳು ಬೇಡಿಕೆ ಪೂರೈಸಲು ಹೊಸ ಮರಳು ಪಾಯಿಂಟ್ಗಳನ್ನು ಗುರುತಿಸಲು ಹಾಗೂ ಪರ್ಯಾಯ ಮಾರ್ಗಗಳನ್ನು ಹುಡುಕಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.