ಚಿಂತಾಮಣಿಯಲ್ಲಿ ಯಮರೂಪಿ ಪೊಲೀಸಪ್ಪ, 75ರ ವೃದ್ಧರಿಗೆ ಹೊಡೆದ್ರಪ್ಪೊ..
ಚಿಂತಾಮಣಿಯಲ್ಲಿ ಸಬ್ ಇನ್ಸ್ ಸ್ಪೆಕ್ಟರ್ ನರಸಿಂಹಮೂರ್ತಿ 75 ವರ್ಷದ ನಾರಾಯಣಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಏಕೆ ಹೊಡೆದರು ಅಂತ ಗೊತ್ತಾಗಬೇಕು, ಈಗ ನಾರಾಯಣಪ್ಪ ಅವರ ಸ್ಥಿತಿ ಹೇಗಿದೆ ಅಂತ ತಿಳಿಯುವುದಕ್ಕೆ ಈ ವರದಿ ಓದಿ
ಚಿಂತಾಮಣಿ, ಮೇ 4: 75 ವರ್ಷದ ವೃದ್ಧರ ಮೇಲೆ ಇಲ್ಲಿನ ನಗರ ಠಾಣೆ ಸಬ್ ಇನ್ ಸ್ಪೆಕ್ಟರ್ ನರಸಿಂಹಮೂರ್ತಿ ಎಂಬುವರು ಗುರುವಾರ ಹಲ್ಲೆ ನಡೆಸಿದ್ದಾರೆ. ಅದಕ್ಕೆ ಇರುವ ಕಾರಣ ಗೊತ್ತಾದರೆ ಇದೆಂತಹ ಪೊಲೀಸಪ್ಪ ಅಂತ ಖಂಡಿತಾ ಅನ್ನಿಸುತ್ತದೆ. ಇಲಿನ ಚೇಳೂರು ವೃತ್ತದಲ್ಲಿ ಗುರುವಾರ ಶಂಕರ್ ಎಂಬಾತ ಕೆಂಪು ದೀಪ ಇರುವಾಗಲೇ ದಾಟಿ ಹೋದರಂತೆ.
ಅಲ್ಲಿದ್ದ ಕಾನ್ ಸ್ಟೇಬಲ್ ಕೃಷ್ಣಪ್ಪ ಇದನ್ನು ಗಮನಿಸಿದವರೇ ದಂಡ ಹಾಕಿ, ಜತೆಗೆ ನಾಲ್ಕು ಬುದ್ಧಿ ಮಾತು ಹೇಳಿ ಕಳಿಸಿದ್ದರೆ ಆಗಿರೋದು. ಆದರೆ ಆತ ಜಗಳಕ್ಕೆ ನಿಂತಿದ್ದಾರೆ, ಬಾಯಿಗೆ ಸಿಕ್ಕಂತೆ ಮಾತನಾಡಿದ್ದಾರೆ. ಇದನ್ನು ಕಂಡು ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಶಂಕರ್ ಬೆಂಬಲಕ್ಕೆ ನಿಂತಿದ್ದಾರೆ.[ಚಿಂತಾಮಣಿಯಲ್ಲಿ 900 ಸಿಲಿಂಡರ್ ಸ್ಫೋಟ, 2 ಲಾರಿ ಭಸ್ಮ]
ಆ ವೇಳೆಗೆ ನಗರ ಠಾಣೆ ಸಬ್ ಇನ್ ಸ್ಪೆಕ್ಟರ್ ನರಸಿಂಹಮೂರ್ತಿ ಸ್ಥಳಕ್ಕೆ ಬಂದಿದ್ದಾರೆ. ಶಂಕರ್ ಅವರ ತಂದೆ 75 ವರ್ಷದ ನಾರಾಯಣಪ್ಪನವರೂ ಅಲ್ಲಿಗೆ ಬಂದಿದ್ದಾರೆ. ಈ ಸಂದರ್ಭದಲ್ಲಿ, ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದರೆ ದಂಡ ವಸೂಲಿ ಮಾಡಿ, ಕಾನೂನು ಏನು ಹೇಳುತ್ತದೆ ಹಾಗೆ ಮಾಡಿ. ಅದು ಬಿಟ್ಟು ಬಯ್ಯೋದು, ಹೊಡೆಯುವುದಕ್ಕೆ ನಿಮಗೇನು ಅಧಿಕಾರ ಇದೆ ಎಂದು ಪ್ರಶ್ನಿಸಿದ್ದಾರೆ.
ಇಷ್ಟು ಮಾತಿಗೆ ನಖಶಿಖಾಂತ ಉರಿದ ಸಬ್ ಇನ್ ಸ್ಪೆಕ್ಟರ್ ನರಸಿಂಹಮೂರ್ತಿ, ವಯಸ್ಸಾದವರು ಎಂದು ಲೆಕ್ಕಿಸದೆ ಅವರ ಕಪಾಳಕ್ಕೆ ಹೊಡೆದಿದ್ದಾರೆ. ಮೊದಲೇ ಆರೋಗ್ಯ ಸಮಸ್ಯೆ ಇದ್ದ ನಾರಾಯಣಪ್ಪ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.[ಮರಳು ಕಳ್ಳರನ್ನು ದಿಟ್ಟತನದಿಂದ ಹಿಡಿದ ಯುವಕರು]
ಈ ನಿರ್ದಿಷ್ಟ ಘಟನೆಗೆ ಗೃಹಸಚಿವ ಜಿ.ಪರಮೇಶ್ವರ ಹೇಗೆ ಪ್ರತಿಕ್ರಿಯಿಸುತ್ತಾರೋ? ಮೈಸೂರಿನಲ್ಲಿ ಜನಸ್ನೇಹಿ ಪೊಲೀಸ್ ಅಭಿಯಾನ ಮಾಡ್ತಾರಂತೆ ಅನ್ನೋದು ಸುದ್ದಿ. ಚಿಂತಾಮಣಿಯಲ್ಲಿ ನಡೆದಿರುವ ಈ ಘಟನೆ ನೋಡಿದರೆ, ವರ್ಷವಿಡೀ ಪೊಲೀಸರಿಗೆ ಜನಸ್ನೇಹಿಯಾಗಿ ಹೇಗಿರಬೇಕು ಅಂತ ಹೇಳಿಕೊಡುವ ಕೆಲಸವಾಗಬೇಕು ಅನ್ನಿಸುತ್ತದೆ.