ಚಿಕ್ಕಮಗಳೂರು: ಕಾರ್ಮಿಕ ಶೇಷಯ್ಯ ಕೊಲೆ, 11 ಮಂದಿಗೆ ಜೀವಾವಧಿ ಶಿಕ್ಷೆ
ಚಿಕ್ಕಮಗಳೂರು, ಮೇ 26 : ಇಲ್ಲಿನ ಕಡವಂತಿ ಗ್ರಾಮದ ಕಾರ್ಮಿಕ ಶೇಷಯ್ಯ ಅವರ ಕೊಲೆ ಪ್ರಕರಣದಡಿ 11 ಮಂದಿಗೆ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿ ತಲಾ 7000 ರು. ದಂಡ ವಿಧಿಸಿ ಆದೇಶ ಹೊರಡಿಸಿದೆ.
ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಭಾವತಿ ಎಂ.ಹಿರೇಮಠ ಈ ಆದೇಶ ನೀಡಿದ್ದಾರೆ ಒಟ್ಟು 13 ಆರೋಪಿಗಳ ಪೈಕಿ ಮಂಜ, ಸುಂದರೇಶ್, ಮಂಜುನಾಥ್, ಸತೀಶ, ಅಣ್ಣಪ್ಪ, ದಿನೇಶ, ಜಾನಕಿ, ಸುಜಾತಾ, ಸುಧಾ, ರೇಣುಕಾ, ಲಕ್ಷ್ಮೀ ಒಟ್ಟು 11 ಜನರಿಗೆ ಶಿಕ್ಷೆಯಾಗಿದ್ದು ಇನ್ನಿಬ್ಬರು ಸುರೇಶ, ಮಂಜಯ್ಯ ಎನ್ನುವರು ಮೃತಪಟ್ಟಿದ್ದಾರೆ.[ಚಾರ್ಮಾಡಿ ಘಾಟಿಯಲ್ಲಿ ಉರುಳಿದ ಬಸ್, 2 ಮಂದಿ ಸಾವು]
2015ರ ಮಾರ್ಚ್ 25ರಂದು ರಾತ್ರಿ 10.30ರ ವೇಳೆಯಲ್ಲಿ ಶೇಷಯ್ಯ ಅವರ ಕೊಲೆ ನಡೆದಿತ್ತು. ಈ ಕುರಿತು ಆತನ ತಂದೆ ಸಿದ್ದಯ್ಯ ಅವರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಹಳೆ ವೈಷಮ್ಯದ ಕಾರಣಕ್ಕೆ ದುಷ್ಕರ್ಮಿಗಳು ಗುಂಪುಕಟ್ಟಿಕೊಂಡು ಮನೆಗೆ ನುಗ್ಗಿ ಮಗನ ಕಣ್ಣಿಗೆ ಕಾರದ ಪುಡಿ ಎರಚಿ ಹೊರಕ್ಕೆ ಎಳೆದುಕೊಂಡು ಬಂದು ಮಾರಕಾಸ್ತ್ರಗಳು ಮತ್ತು ಕಲ್ಲಿನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.