ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಬಿಡುಗಡೆಗೆ ಲಂಚದ ಬೇಡಿಕೆ
ಚಿಕ್ಕಬಳ್ಳಾಪುರ, ಅಕ್ಟೋಬರ್, 24: ಅಂತರ್ಜಾತಿ ವಿವಾಹಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅಂತರ್ಜಾತಿ ವಿವಾಹ ಪ್ರೋತ್ಸಾಹಧನ ಬಿಡುಗಡೆಗೆ 10ಸಾವಿರ ಲಂಚಕ್ಕೆ ಸಹಾಯಕ ಸಿಬ್ಬಂದಿಯೊಬ್ಬ ಬೇಡಿಕೆ ಇಟ್ಟ ಘಟನೆ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ.
ಜಿಲ್ಲೆಯ ಪರಿಶಿಷ್ಟ ಜಾತಿಗೆ ಸೇರಿದ ವಧುವೊಬ್ಬರನ್ನು ಮೇಲ್ಜಾತಿ ಯುವಕನೊಬ್ಬ ಇತ್ತೀಚೆಗೆ ವರಿಸಿದ್ದರು. ಅಂತರ್ಜಾತಿ ವಿವಾಹ ಪ್ರೋತ್ಸಾಹ ಯೋಜನೆಯಡಿ ರಾಜ್ಯ ಸರ್ಕಾರ ನೀಡುವ 3ಲಕ್ಷ ರೂ. ಪ್ರೋತ್ಸಾಹಧನಕ್ಕಾಗಿ ಬಾಗೇಪಲ್ಲಿ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಮನವಿ ಮಾಡಿದ್ದರು.
ಪ್ರೋತ್ಸಾಹಧನ ಬಿಡುಗಡೆ ಮಾಡುವ ಕೇಸ್ ವರ್ಕರ್ ಪ್ರಥಮ ದರ್ಜೆ ಸಹಾಯಕ ಅಶ್ವತ್ಥಪ್ಪ ಎಂಬುವವರು ಹಣ ಮಂಜೂರಾಗಲು ನಾನು ಕಡತವನ್ನು ಮೇಲಾಧಿಕಾರಿಗಳಿಗೆ ಕಳುಹಿಸಬೇಕು. ಕಡತ ಕಳಿಸಬೇಕೆಂದರೆ ನನಗೆ 10ಸಾವಿರ ಲಂಚ ನೀಡಿ ಎಂದು ಬೇಡಿಕೆ ಇಟ್ಟಿದ್ದಾನೆ.
ಕೂಡಲೇ ಅರ್ಜಿದಾರರು ಪ್ರಕರಣದ ಕುರಿತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿದ ಅಧಿಕಾರಿಗಳು ಸೋಮವಾರ (ಅ.24ರಂದು) ಕಾರ್ಯಚರಣೆ ನಡೆಸಿ ಅಶ್ವತ್ಥಪ್ಪ ಅವರನ್ನು ಬಂಧಿಸಿದ್ದಾರೆ.
ಅಶ್ವತ್ಧಪ್ಪ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ 1988ರ ಅಡಿಯಲ್ಲಿ ಪ್ರಕರಣ ಪೊಲೀಸರು ದೂರು ದಾಖಲಿಸಿದ್ದಾರೆ.