ಕೊಳ್ಳೇಗಾಲದಲ್ಲಿ ಪುಂಡಾನೆ ಸೆರೆ, ರೈತರ ನಿಟ್ಟುಸಿರು
ಚಾಮರಾಜನಗರ, ನವೆಂಬರ್ 12: ಕೊಳ್ಳೇಗಾಲ ತಾಲೂಕಿನ ಕಾಡಂಚಿನ ಗ್ರಾಮದ ಮಂದಿಗೆ ನರಹಂತಕನಾಗಿ ಕಾಡುತ್ತಿದ್ದ ಪುಂಡಾನೆಯನ್ನು ಸೆರೆಹಿಡಿದ ಬಳಿಕ ರೈತರು ಸೇರಿದಂತೆ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಕಾಡಂಚಿನ ಗ್ರಾಮದ ಹುಣಸೇ ಪಾಳ್ಯದಲ್ಲಿ ಇಬ್ಬರು, ಡಿವಿಲೇಜ್ನಲ್ಲಿ ಒಬ್ಬ, ಪಿಜಿಪಾಳ್ಯದಲ್ಲಿ ಇಬ್ಬರು, ಹುಯಲನತ್ತ ಗ್ರಾಮದಲ್ಲಿ ಒಬ್ಬ ಹೀಗೆ ಸುಮಾರು ಏಳು ಮಂದಿಯನ್ನು ಪುಂಡಾನೆ ಬಲಿತೆಗೆದು ಕೊಂಡಿತ್ತು.
ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಹೊಸಪಾಳ್ಯ ಗ್ರಾಮದ ಜಡೇರುದ್ರ ಹಾಗೂ ಇಬ್ಬರು ಸ್ನೇಹಿತರು ಜಮೀನಿನಲ್ಲಿ ಕಾವಲು ಕಾಯುತ್ತಿದ್ದಾಗ ಏಕಾಏಕಿ ದಾಳಿ ನಡೆಸಿ ಜಡೇರುದ್ರ ಸ್ಥಳದಲ್ಲೇ ಸಾಯಿಸಿತ್ತು.
ಈ ಸಂದರ್ಭ ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಪುಂಡಾನೆಯನ್ನು ಸೆರೆಹಿಡಿಯುವಂತೆ ಆಗ್ರಹಿಸಿದ್ದರು.
ಅದರಂತೆ ಸಾಕಾನೆಗಳಾದ ಗಜೇಂದ್ರ, ಅಭಿಮನ್ಯು, ಕೃಷ್ಣ, ದ್ರೋಣ ಮತ್ತು ಹರ್ಷ ಸಾಕಾನೆಯನ್ನು ಕರೆ ತಂದು ಡಿಎಫ್ಓ ಮಾಲತಿಪ್ರಿಯರವರ ನೇತೃತ್ವದಲ್ಲಿ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿಗಳ ಸಹಾಯದಿಂದ ಎರಡು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.