ಚಲೋ ಉಡುಪಿ: ಜಿಗ್ನೇಶ್ ಮೆವಾನಿ ಪ್ರಖರ ಭಾಷಣದ ಹೈಲೆಟ್ಸ್
ಉಡುಪಿ, ಅ 9: ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿ ನೇತೃತ್ವದಲ್ಲಿ 'ಚಲೋ ಉಡುಪಿ' ಸ್ವಾಭಿಮಾನಿ ಸಂಘರ್ಷ ಜಾಥಾ, ಉಡುಪಿಯಲ್ಲಿ ಭಾನುವಾರ (ಅ 9) ಮುಕ್ತಾಯಗೊಂಡಿದೆ.
ನಗರದ ಅಜ್ಜರಕಾಡಿನಿಂದ ಬೆಳಗ್ಗೆ ಆರಂಭವಾದ ಮೆರವಣಿಗೆ ಬೀಡಿನಗುಡ್ಡೆ ರಂಗಮಂದಿರದಲ್ಲಿ ಸಮಾರೋಪಗೊಂಡಿತು. ಗುಜರಾತಿನ ಯುವ ಮುಖಂಡ ಮತ್ತು ಉನಾ ದಲಿತ - ದಮನಿತರ ಚಳವಳಿಯ ನಾಯಕ ಜಿಗ್ನೇಶ್ ಮೆವಾನಿ ಸಮಾರೋಪ ಭಾಷಣ ಮಾಡಿದರು.
ಮೆವಾನಿ ಭಾಷಣದ ಹೈಲೆಟ್ಸ್:
. ಇದೊಂದು ಹೊಸ ಚಳವಳಿ. ಗುಜರಾತ್ ನ ದಲಿತರು ಯಾವ ರೀತಿ ಚಳವಳಿಯನ್ನು ಮಾಡಿದರೋ, ಸರ್ಕಾರಕ್ಕೆ ಬಲವಾದ ಏಟನ್ನು ಕೊಟ್ಟರೋ, ಅಂತಹ ಕಾರ್ಯಕ್ರಮ ಇಲ್ಲಿ ನಡೆಯುತ್ತಿದೆ. ಇದು ಎಲ್ಲಾ ದಮನಿತರ ದನಿಯಾಗಬೇಕು. ದಲಿತ, ಆದಿವಾಸಿ, ಕೃಷಿಕರ ಚಳವಳಿಯಾಗಬೇಕು.
. ಉಡುಪಿ ಮಠಗಳಲ್ಲಿ ನಡೆಯುತ್ತಿರುವ ಪಂಕ್ತಿಭೇದವನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮಠಕ್ಕೂ ಮುತ್ತಿಗೆ ಹಾಕಲಾಗುವುದು. ಎರಡು ತಿಂಗಳಲ್ಲಿ ದಲಿತರಿಗೆ ಭೂಮಿ ಕೊಡಲು ಸರ್ಕಾರ ಒಂದು ತೀರ್ಮಾನ ಮಾಡಬೇಕು. ಇಲ್ಲದಿದ್ದರೆ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು, ಇದಕ್ಕಾಗಿ ಜೈಲಿಗೆ ಹೋಗುವುದಕ್ಕೂ ನಾವು ಸಿದ್ಧ.
. ಗುಜರಾತ್ ದಲಿತರು ಏನು ಮಾಡಿದ್ದಾರೋ ಇಲ್ಲಿಯು ಕೂಡಾ ನೀವು ಹಾಗೇ ಮಾಡಬೇಕು. ಗುಜರಾತ್ ನಲ್ಲಿ ದಲಿತ - ಆದಿವಾಸಿ ಕೃಷಿಕರ ಸಂಘರ್ಷ ಜೊತೆಯಾಗಿ ಸಾಗಿದೆ. ಇದು ಕರ್ನಾಟಕದ ಹಿಂದುತ್ವ ಪ್ರಯೋಗ ಶಾಲೆ. ಇಲ್ಲಿ ನೀವೆಲ್ಲರೂ ಸೇರಿದ್ದೀರಿ. ಇದು ಒಳ್ಳೆಯ ಬೆಳವಣಿಗೆ.
. ನಾಗಮಂಡಲದಲ್ಲಿ ಹೇಗೆ ನಾಗನನ್ನು ಆಡಿಸಿತ್ತಾರೋ ಹಾಗೆಯೇ ಮೋದಿ ಇಡೀ ವ್ಯವಸ್ಥೆಯನ್ನು ನಾಗಮಂಡಲದ ಹಾಗೆ ಆಡಿಸುತ್ತಿದ್ದಾರೆ. ಅದು ಇಲ್ಲಿ ಬರುವ ಮೊದಲೇ ನಾವೆಲ್ಲಾ ಸೇರಿ ಅದನ್ನು ನಾಶ ಮಾಡಬೇಕು .
. ನಾವೆಲ್ಲರೂ ಇಂದು ಒಟ್ಟಾಗಿದ್ದೇವೆ. ಈ ಐಕ್ಯತೆಯನ್ನು ನೀವು ಕಾಪಾಡಬೇಕು. ಇಲ್ಲವಾದರೆ ನೀವು ದಲಿತರು ಬದುಕಲು ಸಾಧ್ಯವಿಲ್ಲ. 'ನಿಮ್ಮ ದನದ ಬಾಲವನ್ನು ನೀವೇ ಇಟ್ಟುಕೊಳ್ಳಿ, ನಮ್ಮ ಜಮೀನನ್ನು ನಮಗೆ ಕೊಡಿ' ಅಂತ ಗಟ್ಟಿ ದನಿಯಲ್ಲಿ ನಾವು ಹೇಳಬೇಕಿದೆ. ಮೆವಾನಿ ಭಾಷಣದ ಪ್ರಮುಖಾಂಶ, ಮುಂದೆ ಓದಿ..
ಉಡುಪಿ ಚಲೋ
ಹಿಂದುತ್ವದ ಅಜೆಂಡಾ ಏನಿದೆ, ಅದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಗುಜರಾತ್ 2012ರ ದಂಗೆಯಲ್ಲಿ ಮುಸ್ಲಿಂ ಸಹೋದರರ ಮೇಲೆ ಹಲ್ಲೆಯಾಗಿದೆ. ದಲಿತರ ಮೇಲೆ 746 ಮೇಲೆ ಕೇಸ್, ಮೇಲ್ಜಾತಿಯವರ ಮೇಲೆ ಕೇವಲ 56 ಕೇಸ್ ಮಾತ್ರ ದಾಖಲಾಗಿದೆ. ಇದರಲ್ಲೇ ನಾವು ಅರ್ಥ ಮಾಡಿಕೊಳ್ಳಬೇಕು.
ದಲಿತರು ಪೊಲೀಸ್ ರಕ್ಷಣೆಯಲ್ಲಿ ಬದುಕುತ್ತಿದ್ದಾರೆ
ಗುಜರಾತ್ ಮಾಡೆಲ್ ನ ಚರ್ಚೆ ಇಡೀ ದೇಶದಲ್ಲಿ ಆಗುತ್ತಿವೆ. 119 ಹಳ್ಳಿಗಳಿಲ್ಲಿರುವ ದಲಿತರು ಇಂದು ಪೊಲೀಸ್ ರಕ್ಷಣೆಯಲ್ಲಿ ಬದುಕುತ್ತಿದ್ದಾರೆ. 2014ರಲ್ಲಿ 74 ಜನ ದಲಿತ ಮಹಿಳೆಯರ ಅತ್ಯಾಚಾರವಾಗಿತ್ತು. ಇವರನ್ನು ಸಂದರ್ಶಿಸಲಿಕ್ಕೆ ನರೇಂದ್ರ ಮೋದಿ ಹೋಗಿಲ್ಲ. 55 ಹಳ್ಳಿಗಳಲ್ಲಿ ಇವತ್ತು ಸಾಮಾಜಿಕ ಬಹಿಷ್ಕಾರಕ್ಕೆ ದಲಿತ ಕುಟುಂಬ ಒಳಗಾಗಿದೆ. 'ಸಬ್ ಕಾ ಸಾಥ್ ಸಬ್ ಕಾ ವಿಕಾಸ್' ಮೋದಿಯ ಘೋಷಣೆ ದಲಿತರ ವಿನಾಶಕ್ಕೆ ಮಾಡಿದ ಘೋಷಣೆಯಾಗಿದೆ.
ದಲಿತರ ಮೇಲೆ ಹಲ್ಲೆ
ಊನಾದಲ್ಲ ಸತ್ತ ದನದ ಕಳೇಬರ ವಿಲೇವಾರಿ ಮಾಡಿದಾಗ ದಲಿತರ ಮೇಲೆ ಹಲ್ಲೆಯಾಯ್ತು. ಆದರೆ ನಮ್ಮ ಹೋರಾಟ ದನಕ್ಕೆ ಮಾತ್ರ ಸೀಮಿತವಾಗಬಾರದು, ಎನ್ಕೌಂಟರ್ ಮಾಡಿ ಸಾಯಿಸಲಾದ ಮೂವರು ಯುವರ ಕುರಿತು ಹೋರಾಟ ಮುಂದಯವರಿಸಬೇಕು. ಗುಜರಾತ್ ನ ಊನ ಚಳವಳಿಯ ಸ್ಲೋಗನ್ ಅಸ್ಮಿತೆ ಮತ್ತು ಅಸ್ತಿತ್ವದ ಆಂದೋಲನ. ಈ ಹೋರಾಟವನ್ನು ನಾವು ಭೂಮಿ ಹೋರಾಟಕ್ಕೆ ಕೊಂಡೊಯ್ದೆವು. ಇದಕ್ಕೆ ಸಾವಿರಾರು ಜನ ಜೊತೆಯಾದರು.
ಸಂಘ ಪರಿವಾರದ ವಿರುದ್ದ ಹೋರಾಟ
1ಲಕ್ಷಕ್ಕೂ ಅಧಿಕ ದಲಿತರು ನಾವು ದನದ ಕಳೇವರ ವಿಲೇವಾರಿ ಮಾಡಲ್ಲ, ಮಲ ಎತ್ತುವುದಿಲ್ಲ, ಕೊಳೆಚೆಗೆ ಇಳಿಯುವುದಿಲ್ಲ ಎಂದು ಶಪಥ ಮಾಡಿದ್ದಾರೆ. ದಲಿತ ಅಸ್ಮಿತೆ ಯಾತ್ರೆ ಮಾಡದ ನಂತರ ಆಗಸ್ಟ್ 15ರಂದು ನಾವಲ್ಲರೂ ಸೇರಿದೆವು. ಅದಲ್ಲದೆಯೂ ಕೂಡ ಒಂದು ಲಕ್ಷ ಜನ ಸಂಘ ಪರಿವಾರದ ವಿರುದ್ದ ಹೋರಾಟ ಮಾಡಿದ್ದರು. ಈ ಹೋರಾಟ ನೋಡಿ ನರೇಂದ್ರ ಮೋದಿಯವರು ಹೊಡೆಯುವುದಾದರೆ ನನಗೆ ಹೊಡೆಯಿರಿ ಎಂಬ ಹೇಳಿಕೆಯನ್ನು ಕೊಟ್ಟರು. ಈ ಹೋರಾಟ ನಡೆದ ಮೇಲೆ ಹಲವರಿಗೆ ಬೆದರಿಕೆಗಳನ್ನು ಕೂಡ ಹಾಕಿದ್ದರು.
ಭೀಮ ನಾಯಕರ ಹೆಗಲ ಮೇಲಿದೆ
ಇದು ಕೇವಲ ನನ್ನ ಆಂದೋಲನವಲ್ಲ. ಇದು ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆಯುತ್ತಿದೆ. ಈ ಹೋರಾಟ ಭೀಮ ನಾಯಕರ ಹೆಗಲ ಮೇಲಿದೆ. ಈ ದಲಿತರ ಆಂದೋಲನ ಇನ್ನೂ ತನ್ನ ಗತಿಯನ್ನು ಕಾಯ್ದುಕೊಂಡಿದೆ. ಇದರ ಪರಿಣಾಮ 150 ಸೆಂಟ್ಸ್ ಭೂಮಿಯನ್ನು ದಲಿತರಿಗೆ ಕೊಡುವ ಕೆಲಸ ಆಗುತ್ತಿದೆ. ಅಟ್ರಾಸಿಟಿ ಕಾನೂನು ಜಾರಿಯಲ್ಲಿದ್ದರೂ ಕೂಡ ದಲಿತರಿಗೆ ವಿಶೇಷವಾದ ಕೋರ್ಟ್ ಇರಲಿಲ್ಲ. ಆದರೆ ಈ ಹೋರಾಟದ ಪರಿಣಾಮದಿಂದ ಇಂದು ವಿಶೇಷ ಕೋರ್ಟ್ ಹಲವು ಕಡೆ ಆಗುತ್ತಿದೆ.
ಸಫಾಯಿ ಕರ್ಮಚಾರಿ
1941ರಲ್ಲಿ ಅಂಬೇಡ್ಕರ್ ಗುಜರಾತ್ ಗೆ ಭೇಟಿ ನೀಡಿದ್ದರು. ಸಫಾಯಿ ಕರ್ಮಚಾರಿಗಳ ಕುರಿತು ಮಾತಾಡಿದ್ದರು. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಯಾರೂ ಮಾತಾಡಿಲ್ಲ. ನಮ್ಮ ಹೋರಾಟದ ನಂತರ ಸರ್ಕಾರ ಸಫಾಯಿ ಕರ್ಮಚಾರಿಗಳನ್ನು ಖಾತ್ರಿ ಮಾಡುತ್ತೇವೆ ಎಂದು ಮಾತುಕೊಟ್ಟಿದೆ. ಅದಾನಿ, ಅಂಬಾನಿಗೆ ಭೂಮಿ ಕೊಡಲು ಸಾಧ್ಯವಾಗುತ್ತದೆ ಎಂತಾದರೆ ದಲಿತರಿಗೆ ಯಾಕೆ ಕೊಡಲು ಆಗುತ್ತಿಲ್ಲ?
ಕಾಂಗ್ರೆಸ್ ಮತ್ತು ಬಿಜೆಪಿ
ನಿಮಗೆಲ್ಲ ಗೊತ್ತಿರಬಹುದು, ಗುಜರಾತ್ ನಲ್ಲಿ ಪಟೇಲ್ ಸಮುದಾಯದವರು ಹೋರಾಟ ಮಾಡುತ್ತಿದ್ದಾರೆ. ಗುಜರಾತ್ ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಕೂಡ ದಲಿತರಿಗೆ ಭೂಮಿಯನ್ನು ಕೊಡಲಿಲ್ಲ. ಭಾರತದಲ್ಲಿ ಇವತ್ತಿನ ಆರ್ಥಿಕ ತಾರತಮ್ಯ ಜಾತಿ ವ್ಯವಸ್ಥೆಯಿಂದ ಆಗಿದೆ. ಈ ಮನುವಾದವನ್ನು ನಾವು ವಿರೋಧಿಸಬೇಕಾಗಿದೆ. ಕರ್ನಾಟಕ ಸರ್ಕಾರವೂ ಕೂಡ ದಲಿತರಿಗೆ ಭೂಮಿಯನ್ನು ಕೊಡಲು ಹಿಂದೇಟು ಹಾಕಿದರೆ ಅದರ ವಿರುದ್ದವೂ ನಾವು ಸೆಟೆದು ನಿಲ್ಲುತ್ತೇವೆ.
ಸಂಶಯದಿಂದ ಕಾಣುತ್ತಿದ್ದಾರೆ
ರೋಹಿತ್ ವೇಮುಲ ಇಲ್ಲಿನ ಯುವಕರಲ್ಲಿ ಜೀವಂತವಾಗಿದ್ದಾರೆ ಎಂದು ನಾವು ಭಾವಿಸುತ್ತೇನೆ. ಇತ್ತೀಚೆಗೆ ಹೊರಡಿಸಿದ ವರದಿಯಲ್ಲಿ ರೋಹಿತ್ ದಲಿತ ಅಲ್ಲವೆಂದು ಹೇಳುತ್ತಿದ್ದಾರೆ. ರೋಹಿತ್ ನ ತಾಯಿಯನ್ನು ಸಂಶಯದಿಂದ ಕಾಣುತ್ತಿದ್ದಾರೆ.
ಉಚ್ಚಂಗಿ ಪ್ರಸಾದ್
ಉಚ್ಚಂಗಿ ಪ್ರಸಾದ್ ವಿಷಯದಲ್ಲೂ ಇದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ಇದರ ವಿರುದ್ದವೂ ನಾವು ಹೋರಾಡಬೇಕಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಇವರಿಗೆಲ್ಲ ಸಿಕ್ಕಾಪಟ್ಟೆ ಸೊಕ್ಕು ಬಂದಿದೆ. ದಲಿತ ಮೇಲೆ ಹಲ್ಲೆಯಾಗುತ್ತಿದೆ.
ಶ್ವೇತಪತ್ರ
ನಾವು ಕರ್ನಾಟಕ ಸರ್ಕಾರಕ್ಕೆ ಈ ವೇದಿಕೆಯ ಮೂಲಕ ಎಚ್ಚರಿಕೆಯನ್ನು ಕೊಡುತ್ತಿದ್ದೇವೆ. ಕರ್ನಾಟಕ ಸರ್ಕಾರ ಎಷ್ಟು ಜಮೀನು ನೀಡಿದೆ, ವಿವಿಧ ಕಂಪೆನಿಗಳಿಗೆ ಎಷ್ಟು ಭೂಮಿ ಕೊಟ್ಟಿದ್ದಾರೆ ಎಂದು ಎಂಬುದರ ಬಗ್ಗೆ ಶ್ವೇತ ಪತ್ರ ಹೊರಡಿಸಬೇಕು ಮತ್ತು ಗೋ ರಕ್ಷಕ ಸಮಿತಿಗಳನ್ನು ಬರ್ಖಾಸ್ತು ಮಾಡಬೇಕು.