ಜುಲೈ 11 ರಿಂದ ಕೇಂದ್ರ ಸರ್ಕಾರಿ ನೌಕರರು ಕೆಲಸ ಮಾಡಲ್ಲ
ಹುಬ್ಬಳ್ಳಿ, ಜೂನ್, 28: 7ನೇ ವೇತನ ಆಯೋಗದ ವರದಿ ಸೇರಿದಂತೆ ಇನ್ನಿತರ 36 ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೇಂದ್ರ ಸರಕಾರದ 33 ಲಕ್ಷ ನೌಕರರು ಜುಲೈ 11 ರ ಬೆಳಗ್ಗೆ 6 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭ ಮಾಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೌರ್ಥ ವೆಸ್ಟ್ ರೈಲ್ವೆ ಮಜ್ದೂರ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಡಾ.ಎ.ಎಂ.ಡಿಕ್ರೂಜ್, ಮುಷ್ಕರದಲ್ಲಿ ರೈಲ್ವೆ ನೌಕಕರು, ರೈಲ್ವೆ ಪೋಲೀಸರು, ಆದಾಯ ತೆರಿಗೆ ಸೇರಿದಂತೆ ಇನ್ನಿತರ ಹಲವಾರು ಇಲಾಖೆಗಳ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.[ಕಳಸಾ ಬಂಡೂರಿ: ಜುಲೈ 14ಕ್ಕೆ ಉತ್ತರ ಕರ್ನಾಟಕ ಬಂದ್]
2015 ರ ನವೆಂಬರ್ ನಲ್ಲಿಯೇ 7ನೇ ವೇತನ ಆಯೋಗದ ವರದಿ ಸಲ್ಲಿಕೆಗೆ ರಾಷ್ಟ್ರೀಯ ಜಂಟಿ ಕ್ರಿಯಾ ಸಮಿತಿ ಸಂಚಾಲಕ ಕ್ಯಾ.ಶಿವಗೋಪಾಲ ಮಿಶ್ರಾ ವಿರೋಧಿಸಿದ್ದರು. ಆಗ ಸೆಕ್ರೆಟರಿ ಮಟ್ಟದಲ್ಲಿ ಎ.ಕೆ.ಮಾಥೂರ್ ಅವರ ಅಧ್ಯಕ್ಷತೆಯಲ್ಲಿ ಮತ್ತೆ ಸಮಿತಿಯನ್ನು ರಚಿಸಲಾಯಿತು. ಆ ಸಮಿತಿಯು ಕಳೆದ ಫೆಬ್ರವರಿ ತಿಂಗಳಿನಲ್ಲಿ ಸರಕಾರಕ್ಕೆ ತನ್ನ ವರದಿ ಸಲ್ಲಿಸಿತು.[ಬೆಳಗಾವಿ ಸಂಸದರ ಮನೆ ಮುಂದೆ ಪ್ರಾಣ ಬಿಟ್ಟ ಗದಗದ ರೈತ]
ಆದರೆ, ಕೇಂದ್ರ ಸರಕಾರ ವರದಿ ಸ್ವೀಕರಿಸಿದೆಯೋ ಹೊರತು ಆ ಬಗ್ಗೆ ಏನೂ ಕ್ರಮ ತೆಗೆದುಕೊಂಡಿಲ್ಲ. ವೇತನ ಆಯೋಗದೊಂದಿಗೆ, ಹೊಸ ಪೆನ್ಸನ್ ಪದ್ಧತಿ ರದ್ದುಗೊಳಿಸುವುದು, ಖಾಸಗೀಕರಣ ನಿಲ್ಲಿಸುವುದು, ವಿದೇಶಿ ಬಂಡವಾಳ ಹೂಡಿಕೆ ನಿಲ್ಲಿಸುವುದು, ಖಾಲಿ ಇರುವ ಹುದ್ದೆಗಳನ್ನು ಶೀಘ್ರ ತುಂಬಿಕೊಳ್ಳುವುದು ಸೇರಿದಂತೆ ಹಲವಾರು ನಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮುಷ್ಕರ ಹಮ್ಮಿಕೊಂಡಿದ್ದೇವೆ ಎಂದು ತಿಳಿದರು.
ಮುಷ್ಕರ ನಡೆಸುವುದಾಗಿ ಜೂನ್ 9 ರಂದು ರೈಲ್ವೆಯ ಮಹಾಪ್ರಬಂಧಕರಿಗೆ ನೋಟಿಸ್ ಸಲ್ಲಿಸಲಾಗಿತ್ತು. ಆದರೆ ಅದಕ್ಕೆ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಜೂನ್. 24 ರಂದು ನವದೆಹಲಿಯಲ್ಲಿ ಪಾರ್ಲಿಮೆಂಟ್ ಚಲೋ ಕಾರ್ಯಕ್ರಮದ ಮೂಲಕ ಪ್ರತಿಭಟಿಸಲಾಗಿತ್ತು. ಅದಕ್ಕೂ ಸರಕಾರ ಸ್ಪಂದಿಸಿಲ್ಲ. ಹಾಗಾಗಿ ಜುಲೈ 11 ರಿಂದ ಮುಷ್ಕರ ನಡೆಸಲು ತೀರ್ಮಾನ ಮ ಡಿದ್ದೇವೆ ಎಂದರು. ಯೂನಿಯನ್ ಪ್ರಾದೇಶಿಕ ಅಧ್ಯಕ್ಷ ಆರ್.ಆರ್.ನಾಯಕ ಮತ್ತಿತರರು ಉಪಸ್ಥಿತರಿದ್ದರು.