ಲಾಟರಿ ಹಗರಣ ಸಿಬಿಐ ತನಿಖೆಗೆ : ಯಾರು, ಏನು ಹೇಳಿದರು?
ಬೆಂಗಳೂರು, ಮೇ 27 : ಬಹುಕೋಟಿ ರೂಪಾಯಿ ಒಂದಂಕಿ ಲಾಟರಿ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಿದ ಬಳಿಕ ಸಿಬಿಐ ತನಿಖೆ ಆರಂಭವಾಗಲಿದೆ. ಸುಮಾರು 15 ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ.
ಮಂಗಳವಾರ ವಿಧಾನಸೌಧದಲ್ಲಿ ಸುಮಾರು 30 ನಿಮಿಷ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸರ್ಕಾರ ಲಾಟರಿ ಹಗರಣವನ್ನು ಸಿಬಿಐಗೆ ವಹಿಸಲು ತೀರ್ಮಾನಿಸಿದೆ ಎಂದು ಪ್ರಕಟಿಸಿದರು. ಸಿಬಿಐ ತನಿಖೆ ಏಕೆ ಎಂದು ವಿವರಣೆ ನೀಡಿದರು. [ಲಾಟರಿ ಹಗರಣ ಸಿಬಿಐ ತನಿಖೆಗೆ ಕೊಟ್ಟಿದ್ದೇಕೆ? ಸಿದ್ದು ಉತ್ತರ ಕೇಳಿ]
ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರ ಲಾಟರಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿರುವುದನ್ನು ಸ್ವಾಗತಿಸಿವೆ. ಸಿಬಿಐ ತನಿಖೆಗೆ ಒತ್ತಾಯಿಸಿ ಬುಧವಾರ ಬಿಜೆಪಿ ಪ್ರತಿ ಜಿಲ್ಲೆಯಲ್ಲಿಯೂ ಹಮ್ಮಿಕೊಂಡಿದ್ದ ಮುಷ್ಕರವನ್ನು ವಾಪಸ್ ಪಡೆದಿದೆ. ಸಿಬಿಐ ತನಿಖೆ ಬಗ್ಗೆ ಯಾರು ಏನು ಹೇಳಿದರು ನೋಡೋಣ ಬನ್ನಿ... [ಸಿಐಡಿ ಹಾಗೂ ಸಿಬಿಐ ತನಿಖೆ ವ್ಯತ್ಯಾಸವೇನು?]
ಪ್ರಧಾನಿಗೆ ಪತ್ರ ಬರೆಯಲು ಸಿದ್ಧತೆ ನಡೆಸಿದ್ದೆ
'ಒಂದಂಕಿ ಲಾಟರಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿರುವುದು ಸ್ವಾಗತಾರ್ಹ. ಹಗರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ನಾನು ಪ್ರಧಾನಮಂತ್ರಿಗಳಿಗೆ ಪತ್ರ ಬರೆಯುವುದರಲ್ಲಿದ್ದೆ. ಅಷ್ಟರಲ್ಲಿ ಪ್ರಕರಣ ಸಿಬಿಐಗೆ ವಹಿಸಿರುವುದು ಒಳ್ಳೆಯದಾಗಿದೆ, ಇದನ್ನು ಸ್ವಾಗತಿಸುತ್ತೇನೆ' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಸತ್ಯಾಂಶ ಹೊರಗೆ ಬರಲಿ
'ಒಂದಂಕಿ ಲಾಟರಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿರುವುದು ಉತ್ತಮ ಬೆಳವಣಿಗೆ 2007ರಿಂದ ಹಗರಣ ನಡೆದಿದೆ ಎಂಬ ಆರೋಪಗಳಿಗೆ ಸಿಬಿಐ ತನಿಖೆಯಾದರೆ ಎಲ್ಲವೂ ಹೊರಬರುತ್ತದೆ. ಬಿಜೆಪಿ ಸಿಬಿಐ ತನಿಖೆಗೆ ಆಗ್ರಹಿಸಿ ನಡೆಸಬೇಕಿದ್ದ ಹೋರಾಟವನ್ನು ವಾಪಸ್ ಪಡೆಯಲಿದೆ' ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಸಿಎಂ, ಜಾರ್ಜ್ ರಾಜೀನಾಮೆ ನೀಡಲಿ
'ಲಾಟರಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಕೆ.ಜೆ.ಜಾರ್ಜ್ ರಾಜೀನಾಮೆ ನೀಡಬೇಕು' ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದ್ದಾರೆ. ಹಗರಣದ ಬಗ್ಗೆ ಗುಪ್ತಚರ ಇಲಾಖೆ ಸಿಎಂಗೆ ಮಾಹಿತಿ ನೀಡಬೇಕಿತ್ತು. ಮಾಹಿತಿ ಸಂಹಿಸುವಲ್ಲಿ ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಈಶ್ವರಪ್ಪ ದೂರಿದ್ದಾರೆ.
ಪ್ರತಿಭಟನೆ ಕೈ ಬಿಟ್ಟಿದ್ದೇವೆ : ಜೋಶಿ
ಒಂದಂಕಿ ಲಾಟರಿ ಹಗರಣವನ್ನು ಸಿಬಿಐ ತನಿಖೆಗೆ ವಹಿಸಿರುವುದನ್ನು ಸ್ವಾಗತಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಬುಧವಾರ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪಕ್ಷ ಹಮ್ಮಿಕೊಂಡಿದ್ದ ಹೋರಾಟವನ್ನು ಕೈ ಬಿಟ್ಟಿದ್ದೇವೆ ಎಂದು ಹೇಳಿದ್ದಾರೆ.
ಬರೀ ಆರೋಪ ಮಾಡುವುದು ಸರಿಯಲ್ಲ
'ಲಾಟರಿ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಜೆ ಜಾರ್ಜ್ ಅವರ ವಿರುದ್ಧ ಆರೋಪ ಮಾಡುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೂಕ್ತ ದಾಖಲೆಗಳನ್ನು ನೀಡಲಿ. ಹಿರಿಯರಾದ ದೇವೇಗೌಡರು ಕೇವಲ ಆರೋಪ ಮಾಡಬಾರದು ಅದಕ್ಕೆ ಪುರಾವೆ ಕೊಡಬೇಕು' ಎಂದು ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಒತ್ತಾಯಿಸಿದ್ದಾರೆ.