ಸಿದ್ದು ಮತ್ತು ಜಯಾ ವಿನಿಮಯ ಮಾಡಿಕೊಂಡ ಪತ್ರಗಳಲ್ಲಿ ಏನಿದೆ?
ಬೆಂಗಳೂರು, ಸೆಪ್ಟೆಂಬರ್ 13: ಸುಪ್ರೀಂ ಕೋರ್ಟ್ ನಿಂದ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ತೀರ್ಪು ಹೊರಬಿದ್ದ ನಂತರ ತಮಿಳುನಾಡಿನಲ್ಲಿ ಕನ್ನಡಿಗರ ಒಡೆತನದ ವ್ಯವಹಾರಗಳ ಮೇಲೆ ನಡೆದ ದಾಳಿ, ಕರ್ನಾಟಕದಲ್ಲಿ ತಮಿಳು ಭಾಷಿಕರ ಒಡೆತನದ ವ್ಯವಹಾರಗಳ ಮೇಲೆ ದಾಳಿಗಳಾದ ಹಿನ್ನೆಲೆಯಲ್ಲಿ ಎರಡೂ ರಾಜ್ಯದ ಮುಖ್ಯಮಂತ್ರಿಗಳು ಪರಸ್ಪರ ಪತ್ರ ಬರೆದಿದ್ದಾರೆ.
ಜಯಲಲಿತಾ ಅವರಿಗೆ ಸಿದ್ದರಾಮಯ್ಯ ಅವರು ಬರೆದ ಪತ್ರದಲ್ಲಿ, ಬೆಂಗಳೂರಿನಲ್ಲಿ ತಮಿಳು ಯುವಕನ ಮೇಲಾದ ದಾಳಿ ಸುದ್ದಿಯನ್ನು ತಮಿಳುನಾಡಿನಲ್ಲಿ ಮಾಧ್ಯಮಗಳು ವೈಭವೀಕರಿಸಿವೆ. ಇದರಿಂದ ಅಲ್ಲಿರುವ ಕನ್ನಡ ಮಾತನಾಡುವವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದಿದ್ದಾರೆ.[ನನ್ನ ಬಸ್ ಸುಟ್ಟಿದ್ದರಿಂದ ಕಾವೇರಿ ಸಮಸ್ಯೆ ಬಗೆಹರಿಯುತ್ತಾ?: ಕೆ.ಪಿ.ನಟರಾಜನ್]
"ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಮ್ಮ ಸರಕಾರ ಬದ್ಧವಾಗಿದೆ. ನಾಗರಿಕರ ರಕ್ಷಣೆ, ಸುರಕ್ಷತೆಗೆ ಮುಂಜಾಗ್ರತೆ ತೆಗೆದುಕೊಂಡಿದ್ದೇವೆ. ಅದರಲ್ಲೂ ರಾಜ್ಯದಲ್ಲಿರುವ ತಮಿಳು ಭಾಷಿಕರ ರಕ್ಷಣೆಗೆ ಕ್ರಮ ಕೈಗೊಂಡಿದ್ದೇವೆ" ಎಂದು ಸಿದ್ದರಾಮಯ್ಯ ಬರೆದಿದ್ದಾರೆ. "ತಮಿಳುನಾಡಿನಲ್ಲಿ ಹಿಂಸೆಗೆ ಪ್ರಚೋದನೆ ನೀಡುವವರ ವಿರುದ್ಧ ತಕ್ಷಣ ದೂರು ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿ. ತಮಿಳುನಾಡಿನಲ್ಲಿರುವ ಕನ್ನಡ ಭಾಷಿಕರಿಗೆ ಅಗತ್ಯ ರಕ್ಷಣೆ ದೊರಕಿಸುವಂತೆ ಸಲಹೆ ನೀಡಿ" ಎಂದೂ ಸೇರಿಸಿದ್ದಾರೆ.
ಹಿಂಸಾಚಾರ ಕುರಿತಂತೆ ಸಿದ್ದರಾಮಯ್ಯ ನೀಡಿದ ಪ್ರತ್ಯೇಕ ಹೇಳಿಕೆಯಲ್ಲಿ, " ಕಾವೇರಿ ವಿಚಾರದಲ್ಲಿ ಪ್ರತಿ ಸಲವೂ ಅನ್ಯಾಯವಾಗಿದೆ. ಇದರಿಂದ ಎಲ್ಲ ಕನ್ನಡಿಗರಿಗೆ ನೋವಾಗಿದೆ. ನಾವಾಡುವ ಭಾಷೆ, ಕುಡಿಯುವ ಮೂಲಕ ನಮ್ಮನ್ನು ಗುರುತಿಸಿಕೊಳ್ತೇವೆ. ಇದೇ ವೇಳೆ ಸಹನೆಯಿಂದ ಇರಬೇಕು.
"ಕನ್ನಡಿಗರು ಹಾಗೂ ಕನ್ನಡಿಗರ ಮಾಲೀಕತ್ವದ ಹೋಟೆಲ್ ಮೇಲೆ ತಮಿಳುನಾಡಿನ ದಾಳಿಗಳಾಗಿವೆ. ಅದೇ ರೀತಿ ಕರ್ನಾಟಕದಲ್ಲಿ ತಮಿಳರ ಮೇಲೆ ದಾಳಿಗಳಾಗಿವೆ. ಇಂಥ ಕೃತ್ಯವನ್ನು ಬಲವಾಗಿ ಖಂಡಿಸುತ್ತೇನೆ. ಈ ರೀತಿ ಹಿಂಸಾಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಕರ್ನಾಟಕ ಸರಕಾರ ಗಂಭೀರ ಕ್ರಮ ತೆಗೆದುಕೊಳ್ಳುತ್ತದೆ" ಎಂದು ಹೇಳಿದ್ದಾರೆ.[ಬೆಂಗಳೂರಿನಲ್ಲಿರುವ ತಮಿಳರ ಪ್ರದೇಶಕ್ಕೆ ಬಿಗಿ ಭದ್ರತೆ]
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಬರೆದ ಪತ್ರದಲ್ಲಿ, ತಮಿಳುನಾಡಿನಲ್ಲಿ ನಡೆದ ಘಟನೆಗಳು ಸಣ್ಣ ಪ್ರಮಾಣದ್ದು. ಆದರೆ ಕರ್ನಾಟಕದಲ್ಲಿನ ಪರಿಸ್ಥಿತಿ 'ಆತಂಕಕಾರಿ' ಹಾಗೂ 'ಉದ್ರೇಕಕಾರಿ'ಯಾಗಿದೆ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಕನ್ನಡಿಗರ ಆಸ್ತಿಗೆ ಹಾನಿಯಾಗದಂತೆ ನೋಡಿಕೊಳ್ತೇವೆ ಎಂದು ಖಾತ್ರಿ ನೀಡ್ತೇವೆ ಎಂದು ಸೇರಿಸಿದ್ದಾರೆ.
ನನಗೆ ಕರ್ನಾಟಕದ ಪರಿಸ್ಥಿತಿ ಬಗ್ಗೆ ಆತಂಕ ಇದೆ. ತಮಿಳು ಭಾಷಿಕರು ಹಾಗೂ ಅವರ ಆಸ್ತಿ ಮೇಲೆ ದಾಳಿಗಳಾದ ಹಲವು ಘಟನೆಗಳು ಸಂಭವಿಸಿವೆ. ನಮಗೆ ದೊರೆತ ಮಾಹಿತಿ ಪ್ರಕಾರ 40 ಬಸ್, 45 ಲಾರಿಗಳು ಹಾಗೂ ತಮಿಳುನಾಡು ನೋಂದಣಿಯ ಹಲವು ವಾಹನಗಳು ಬೆಂಕಿಗೆ ಅಹುತಿಯಾಗಿವೆ, ಜಖಂ ಆಗಿವೆ.[ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ]
ಕರ್ನಾಟಕದಲ್ಲಿ ತಮಿಳು ಭಾಷಿಕರ ಮಾಲೀಕತ್ವದ ಹೋಟೆಲ್, ಆಸ್ತಿಗಳ ಮೇಲೆ ದಾಳಿಗಳಾಗಿವೆ. ಇದು ಆತಂಕಕಾರಿ ಹಾಗೂ ಪ್ರಚೋದನಕಾರಿ ಸನ್ನಿವೇಶ ಎಂದು ಜಯಲಲಿತಾ ಪತ್ರದಲ್ಲಿ ತಿಳಿಸಿದ್ದಾರೆ.[ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಮಿಳು ಸಂಘಟನೆ ಅಡ್ಡಿ]
ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆಯುವಂತೆ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದರು. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ರಾಜ್ಯದ ಆರ್ಥಿಕತೆ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಅದರಲ್ಲೂ ಐಟಿ ವಲಯದಿಂದ ಬರುತ್ತಿರುವ ಆದಾಯ ಹಾಗೂ ವಿದೇಶಿ ವಿನಿಮಯದ ಮೇಲೆ ತೀವ್ರ ಪರಿಣಾಮ ಆಗುತ್ತದೆ. ಜತೆಗೆ ಜನ ಸಾಮಾನ್ಯರ ಬದುಕಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದರು.