ಕರ್ನಾಟಕ ರೈತರ ಹಣೆಬರಹ ಸುಪ್ರೀಂನಲ್ಲಿ ನಿರ್ಧಾರ
ನವದೆಹಲಿ, ಸೆಪ್ಟೆಂಬರ್, 05: ಕರ್ನಾಟಕದಿಂದ ಕಾವೇರಿ ನೀರು ಕೇಳಿರುವ ತಮಿಳುನಾಡಿನ ಅರ್ಜಿ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಸೋಮವಾರ ನಡೆಯಲಿದ್ದು ಕರ್ನಾಟಕದ ರೈತರ ಹಣೆಬರಹ ನಿರ್ಧಾರವಾಗಲಿದೆ.
ಕಾವೇರಿ ಪಾತ್ರದಿಂದ 50.52 ಟಿಎಂಸಿ ನೀರು ನೀಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಯಲಿದ್ದು ಕರ್ನಾಟಕ ಸಹ ವಾದ ಮಂಡನೆಗೆ ಸಿದ್ಧತೆ ಮಾಡಿಕೊಂಡಿದೆ.[ತಮಿಳ್ನಾಡಿಗೆ ಕಾವೇರಿ ಬಿಡಲೇಬೇಕು]
ಒನ್ ಇಂಡಿಯಾದ ಜತೆ ಮಾತನಾಡಿರುವ ಕರ್ನಾಟಕದ ಪರ ವಕೀಲ ಮೋಹನ್ ಕಟರ್ಕಿ, ತಮಿಳುನಾಡಿನಲ್ಲಿ ಈ ಬಾರಿ ಸಾಕಷ್ಟು ಮಳೆಯಾಗಿದೆ. ಮಳೆ ಕೊರತೆ ತಮಿಳುನಾಡನ್ನು ಕಾಡಿಲ್ಲ. ನಮ್ಮ ಬಳಿ ಹೊರ ರಾಜ್ಯಕ್ಕೆ ಬಿಡುವಷ್ಟು ನೀರು ಇಲ್ಲ. ಇದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.[ನಮಗೇ ನೀರಿಲ್ಲ, ಇನ್ನು ತಮಿಳ್ನಾಡಿಗೆ ಎಲ್ಲಿಂದ ಬಿಡೋಣ?]
ಕರ್ನಾಟಕ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳ ಸಂಪೂರ್ಣ ವಿವರವನ್ನು ನ್ಯಾಯಾಲಯಕ್ಕೆ ತಿಳಿಸಲಾಗುವುದು. ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ಕಟರ್ಕಿ ತಿಳಿಸಿದ್ದಾರೆ.
ಕಾವೇರಿ ನೀರು ಬಿಡುಗಡೆ ಸಂಬಂಧದ ತೀರ್ಪು ಹೊರಬೀಳಲಿರುವುದರಿಂದ ಮಂಡ್ಯ ಜಿಲ್ಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೆ ಆರ್ ಎಸ್ ಬಳಿಯೂ ಪೊಲೀಸರನ್ನು ನಿಯೋಜಿಸಲಾಗಿದೆ.