ಕಾವೇರಿ ವಿವಾದ: ಕೊನೆಗೂ ಸಿದ್ದರಾಮಯ್ಯ ಸರಕಾರದ ದಿಟ್ಟ ನಿರ್ಧಾರ
ಬೆಂಗಳೂರು, ಸೆ 21: ಸುರ್ಪೀಂಕೋರ್ಟ್ ತೀರ್ಪಿನಿಂದ ಇಕ್ಕಟ್ಟಿಗೆ ಸಿಲುಕಿದ್ದ ಸಿದ್ದರಾಮಯ್ಯ ಸರಕಾರ, ಕೊನೆಗೂ ರಾಜ್ಯದ ಜನರ ಆಶೋತ್ತರಕ್ಕೆ ಸ್ಪಂದಿಸಿದೆ.
ನಮಗೇ ನೀರಿಲ್ಲ, ಅವರಿಗೆ ಎಲ್ಲಿಂದ ಕೊಡುವುದು ಎನ್ನುವ ಸಾರ್ವಜನಿಕರ ಆಕ್ರೋಶಕ್ಕೆ ಕೊನೆಗೂ ಮಣಿದಿರುವ ರಾಜ್ಯ ಸರಕಾರ, ತಮಿಳುನಾಡಿಗೆ ನೀರು ಹರಿಸದಿರುವ ತೀರ್ಮಾನಕ್ಕೆ ತುರ್ತು ಸಚಿವ ಸಂಪುಟ ಸಭೆಯಲ್ಲಿ ಬರಲಾಗಿದೆ. (ಪ್ರಾಣ ಹೋದರೂ ನೀರು ಬಿಡಬೇಡಿ)
ರಾಜ್ಯದ ಉಭಯ ಸದನಗಳಲ್ಲಿ ಶುಕ್ರವಾರ (ಸೆ 23) ಸರಕಾರದ ನಿರ್ಧಾರವನ್ನು ಮಂಡಿಸಲಿದ್ದೇವೆ, ಅಲ್ಲಿಯವರೆಗೆ ತಮಿಳುನಾಡಿಗೆ ನೀರು ಬಿಡಲಾಗುವುದಿಲ್ಲ ಎಂದು ಸಿದ್ದರಾಮಯ್ಯ ತುರ್ತು ಸಚಿವ ಸಂಪುಟ ಸಭೆಯ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ (ಸೆ 21) ಹೇಳಿದ್ದಾರೆ.
ಅಂದರೆ ಬುಧವಾರದಿಂದ ಶುಕ್ರವಾರದವರೆಗೆ ನೀರು ಬಿಡದಿರಲು ಸಿದ್ದರಾಮಯ್ಯ ಸರಕಾರ ನಿರ್ಧರಿಸಿದೆ. ಒಟ್ಟಿನಲ್ಲಿ ಸದ್ಯದ ಮಟ್ಟಿಗೆ ಹದಿನೆಂಟು ಸಾವಿರ ಕ್ಯೂಸೆಕ್ಸ್ ನೀರು ಉಳಿತಾಯ.
ಆ ಮೂಲಕ, ಸರ್ವಪಕ್ಷಗಳ ಸಭೆಯಲ್ಲಿ ಹೊರಬಿದ್ದ ಸರ್ವಾನುಮತದ ನಿರ್ಣಯವನ್ನು ರಾಜ್ಯ ಸರಕಾರ ಎತ್ತಿ ಹಿಡಿದಿದಂತಾಗಿದೆ.
ತಮಿಳುನಾಡಿಗೆ ಸೆ21ರಿಂದ 27ರವರೆಗೆ ದಿನವೊಂದಕ್ಕೆ ಆರು ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿತ್ತು. (ತಮಿಳುನಾಡಿಗೆ ನೀರು ಬಿಡುವುದು ಬೇಡ)
ಬುಧವಾರ ಬೆಳಗ್ಗೆಯಿಂದಲೇ ಸಭೆಯ ಮೇಲೆ ಸಭೆ ನಡೆಸುತ್ತಿದ್ದ ಮುಖ್ಯಮಂತ್ರಿಗಳಿಗೆ ಸಚಿವ ಸಂಪುಟದ ಸಹದ್ಯೋಗಿಗಳು ಯಾವ ಕಾರಣಕ್ಕೂ ತಮಿಳುನಾಡಿಗೆ ನೀರು ಬಿಡಬಾರದೆಂದು ಒತ್ತಾಯಿಸಿದ್ದರು.
ಶುಕ್ರವಾರ ನಡೆಯಲಿರುವ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಸರಕಾರ ನೀರು ಬಿಡದೇ ಇರುವ ತೀರ್ಮಾನವನ್ನು ಸದನದಲ್ಲಿ ಮಂಡಿಸಲಿದೆ.
ಬಳಿಕ ರಾಷ್ಟ್ರಪತಿಗಳ ಬಳಿ ಸರ್ವಪಕ್ಷಗಳ ನಿಯೋಗ ಕರೆದುಕೊಂಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಜೊತೆಗೆ, ಮುಂದೆ ಎದುರಿಸಬೇಕಾಗಿರುವ ಕಾನೂನು ಹೋರಾಟಕ್ಕೂ ಸರಕಾರ ಸಿದ್ದತೆ ನಡೆಸುತ್ತಿದೆ.