ಕಾವೇರಿ ವಿವಾದ: ಸರ್ವಪಕ್ಷ ಸಭೆಯಲ್ಲಿ ಹೊರಬಿದ್ದ ಜನವಿರೋಧಿ ನಿರ್ಧಾರ!
ಬೆಂಗಳೂರು, ಸೆ 6: ತಮಿಳುನಾಡಿಗೆ ನೀರು ಬಿಡಬೇಕು ಎನ್ನುವ ಸುಪ್ರೀಂಕೋರ್ಟ್ ಆದೇಶದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದ ಸರ್ವಪಕ್ಷಗಳ ಸಭೆ ಮಂಗಳವಾರ (ಸೆ 6) ಮುಕ್ತಾಯಗೊಂಡಿದೆ.
ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ, ಭಾರವಾದ ಮನಸ್ಸಿನಿಂದ ತಮಿಳುನಾಡಿಗೆ ನೀರು ಬಿಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ವಿಧಾನಸೌಧದಲ್ಲಿ ನಡೆದ ಸರ್ವಪಕ್ಷಗಳ ಸಭೆಯ ನಂತರ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.(ತಮಿಳುನಾಡಿಗೆ ನೀರು ಹರಿಸಿ ಎಂದ ಸುಪ್ರೀಂ)
ಸಂಕಷ್ಟದ ಪರಿಸ್ಥಿತಿಯಲ್ಲೂ ತಮಿಳುನಾಡಿಗೆ ನೀರು ಬಿಡುವ ನಿರ್ಧಾರಕ್ಕೆ ಬಂದಿದ್ದೇವೆ. ನಮ್ಮ ರಾಜ್ಯದ ರೈತರ ಹಿತವನ್ನೂ ನಾವು ಕಾಪಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಸಭೆಯ ನಂತರ ಭರವಸೆ ನೀಡಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ಹತ್ತುದಿನಗಳ ಕಾಲ ದಿನವೊಂದಕ್ಕೆ 15ಸಾವಿರ ಕ್ಯೂಸೆಕ್ಸ್ ನೀರು ಬಿಡಲಿದ್ದೇವೆ ಎಂದು ಸಿಎಂ ಹೇಳಿದ್ದಾರೆ. ಸರಕಾರದ ನಿರ್ಧಾರವನ್ನು ಪ್ರತಿಭಟಿಸಿ ಬಿಜೆಪಿ ಮತ್ತು ಜೆಡಿಎಸ್ ಸಭೆಯಿಂದ ಹೊರ ನಡೆದಿದೆ.
ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟ ಮಾಡಬೇಡಿ. ನಮ್ಮ ರಾಜ್ಯದ ರೈತರಿಗೂ ನೀರು ಬಿಡಲಿದ್ದೇವೆ ಎಂದು ಮುಖ್ಯಮಂತ್ರಿ ಹೋರಾಟಗಾರರಲ್ಲಿ ಮನವಿ ಮಾಡಿದ್ದಾರೆ. (ಕನ್ನಡಿಗರಿಗೆ ಕಾವೇರಿ ಕುಡಿಸಿದ ರಾಜಕಾರಣಿಗಳು)
ಸುರ್ಪೀಂಕೋರ್ಟ್ ಮತ್ತು ನ್ಯಾಯಾಧೀಕರಣ ಪ್ರಾಧಿಕಾರದಲ್ಲಿ ಆದೇಶ ಪರಿಷ್ಕರಿಸುವಂತೆ ಅರ್ಜಿ ಸಲ್ಲಿಸಲಾಗುವುದು.
ಪ್ರಾಧಿಕಾರದ ಸದಸ್ಯರಲ್ಲಿ ಕಾವೇರಿ ಜಲಾಯನ ಪ್ರದೇಶಕ್ಕೆ ಬಂದು ವಸ್ತುಸ್ಥಿತಿಯನ್ನು ತಿಳಿದುಕೊಳ್ಳಲೂ ಮನವಿ ಮಾಡಲಾಗುವುದು. ನ್ಯಾಯಾಲಯದ ಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯ ಎಂದು ಸಿದ್ದರಾಮಯ್ಯ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
'ಬದುಕಿ ಮತ್ತು ಬದುಕಲು ಬಿಡಿ' ಎಂದು ಹೇಳಿದ್ದ ದ್ವಿಸದಸ್ಯ ಸುಪ್ರೀಂಕೋರ್ಟ್ ನ್ಯಾಯಪೀಠ, ಮುಂದಿನ 10 ದಿನಗಳ ಕಾಲ ಪ್ರತೀದಿನ 15ಸಾವಿರ ಕ್ಯೂಸೆಕ್ಸ್ ನೀರು ಬಿಡಲು ಕರ್ನಾಟಕಕ್ಕೆ ಆದೇಶ ನೀಡಿತ್ತು.
ಸಿಎಂ, ಈಶ್ವರಪ್ಪ ಜಟಾಪಟಿ: ಸರ್ವಪಕ್ಷಗಳ ಸಭೆಯಲ್ಲಿ ಪರಿಷತ್ತಿನ ಪ್ರತಿಪಕ್ಷದ ನಾಯಕ ಈಶ್ವರಪ್ಪ ಮತ್ತು ಸಿಎಂ ನಡುವೆ ಮಾತಿನ ಚಕಮಕಿ ನಡೆದಿದೆ.
ನಿಮ್ಮ ಸರಕಾರದ ದುರಾಡಳಿತದಿಂದಾಗಿ ನೀರು ಬಿಡುವ ಅನಿವಾರ್ಯತೆ ರಾಜ್ಯಕ್ಕೆ ಬಂದಿದೆ ಎಂದು ಈಶ್ವರಪ್ಪ ಹೇಳಿಕೆಗೆ, ಸಿದ್ದರಾಮಯ್ಯ ಮತ್ತು ಈಶ್ವರಪ್ಪ ನಡುವೆ ಜಟಾಪಟಿ ನಡೆದ 'ರಾಜಕೀಯ ಪ್ರಹಸನ' ನಡೆದಿದೆ.
ಮಾದೇಗೌಡ ಹೇಳಿಕೆ : ಮುಖ್ಯಮಂತ್ರಿಗಳು ಕರ್ತವ್ಯ ಪಾಲಿಸುವಲ್ಲಿ ಸೋತಿದ್ದಾರೆ. ನಾಳೆಯಿಂದ ಕಾವೇರಿ ಹೋರಾಟದ ಜೊತೆಗೆ ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕೆಂದು ಹೋರಾಟ ನಡೆಸಲಿದ್ದೇವೆ ಎಂದು ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ ಮಾದೇಗೌಡ ಹೇಳಿದ್ದಾರೆ.