ಕಾವೇರಿ ವಿವಾದ: ಬಂದ್, ಪ್ರತಿಭಟನೆಗೆ ಕೆಎಸ್ ಆರ್ ಟಿಸಿಗೆ 12 ಕೋಟಿ ನಷ್ಟ
ಬೆಂಗಳೂರು, ಸೆಪ್ಟೆಂಬರ್ 22: ಕಾವೇರಿ ಗಲಾಟೆ ಸಂದರ್ಭದಲ್ಲಿ ಆದ ಭಾರೀ ನಷ್ಟಕ್ಕೆ ಕರ್ನಾಟಕ ರಾಜ್ಯ ಸಾರಿಗೆ ಕಣ್ಣೀರು ಹಾಕುವಂತಾಗಿದೆ. ಸೆ.6 ಹಾಗೂ 13ರ ಮಧ್ಯೆ ಗಲಭೆಪೀಡಿತ ಪ್ರದೇಶಗಳಲ್ಲಿ ಸರಕಾರಿ ಸಾರಿಗೆ ನಿಗದಿಯಂತೆ ಸಂಚರಿಸಲಿಲ್ಲ. ಅದರಿಂದ ನಿಗಮಕ್ಕೆ ಭಾರೀ ನಷ್ಟವೇ ಆಗಿದೆ.
ಇತ್ತೀಚೆಗೆ ನೌಕರರ ವೇತನ ಹೆಚ್ಚಳ ಮಾಡಿದ ನಂತರ ಕೆಎಸ್ ಆರ್ ಟಿಸಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಇದರ ಜತೆಗೆ 11.80 ಕೋಟಿ ನಷ್ಟವುಂಟಾಗಿರುವುದು ಚಿಂತೆಗೆ ಕಾರಣವಾಗಿದೆ. ಪ್ರತಿ ದಿನ 6ರಿಂದ 13ರ ವರೆಗೆ ನಷ್ಟ ಸೇರಿ 50ರಿಂದ 55 ಲಕ್ಷ ನಷ್ಟವಾಗಿದೆ ಎಂದು ಕೆಎಸ್ ಆರ್ ಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಟಿ.ಎಸ್.ಲತಾ ತಿಳಿಸಿದ್ದಾರೆ.[ಕೆಎಸ್ಆರ್ ಟಿಸಿ ಬಸ್ಸುಗಳಿಗೆ ತಟ್ಟಿದ ಕಾವೇರಿ ಹೋರಾಟದ ಬಿಸಿ]
ಗಡಿಯಲ್ಲಿ ಕಾವೇರಿ ಗಲಾಟೆ ತೀವ್ರವಾಗಿದ್ದರಿಂದ ಕರ್ನಾಟಕ-ತಮಿಳುನಾಡು ಮಧ್ಯದ ಅಂತರರಾಜ್ಯ ಬಸ್ ಗಳು ಸ್ಥಗಿತಗೊಂಡಿತ್ತು. ದಿನಕ್ಕೆ 450 ರಂತೆ ಬಸ್ ಶೆಡ್ಯೂಲ್ ಆಗಿತ್ತು. ಒಟ್ಟಾರೆ ಕರ್ನಾಟಕದಲ್ಲಿ ಎಲ್ಲೆಲ್ಲಿ ಕಾವೇರಿ ಗಲಾತೆ ಇದೆಯೋ ಅಲ್ಲೆಲ್ಲ ಸೇರಿ 10.980 ಶೆಡ್ಯೂಲ್ ನಿಲ್ಲಿಸಲಾಯಿತು. ನಷ್ಟದ ಬಹುಪಾಲು ಕೊಡುಗೆ ಇದರದೇ ಎಂದು ಲತಾ ಒನ್ಇಂಡಿಯಾಗೆ ತಿಳಿಸಿದರು.
ಮುಂಜಾಗ್ರತಾ ಕ್ರಮವಾಗಿ ಈಗಲೂ ತಮಿಳುನಾಡಿಗೆ ಬಸ್ ಸಂಚಾರ ಆರಂಭಿಸಿಲ್ಲ. ಈ ಕಾರಣಕ್ಕೆ ನಷ್ಟದ ಪ್ರಮಾಣ ಮತ್ತೂ ಹೆಚ್ಚಾಗಬಹುದು. ಎರಡೂ ರಾಜ್ಯದ ಗಡಿ ಪ್ರದೇಶದಲ್ಲಿ ಬಸ್ ಪ್ರಯಾಣವನ್ನೇ ಬಹುಪಾಲು ಅವಲಂಬಿಸಿದ್ದಾರೆ. ಕರ್ನಾಟಕ ರಾಜ್ಯ ಸಾರಿಗೆ ಸೇವೆ ಚೆನ್ನಾಗಿದೆ ಎಂಬ ಕಾರಣಕ್ಕೆ ತಮಿಳುನಾಡಿನವರೂ ನಮ್ಮ ಸಾರಿಗೆಯನ್ನೇ ಅವಲಂಬಿಸಿದ್ದರು. ಆದರೆ ಈ ಭಾಗಗಳಲ್ಲಿ ನಮಗೆ ಸಿಗುತ್ತಿದ್ದ ವರಮಾನ ಖೋತಾ ಆಗಿದೆ ಎಂದು ಲತಾ ಹೇಳುತ್ತಾರೆ.[ರಾಮನಗರದಲ್ಲಿ ಗುರುವಾರದಿಂದ ನಗರಸಾರಿಗೆ ಬಸ್ಸಿಗೆ ಚಾಲನೆ]
ಆರ್ಥಿಕ ನಷ್ಟ ಒಂದು ಕಡೆಯಾದರೆ, ಜನರ ವಿಶ್ವಾಸವನ್ನೂ ಕಳೆದುಕೊಳ್ತಿದೀವಿ. ಪ್ರತಿಭಟನೆ ಕಾರಣಕ್ಕೆ ಶೆಡ್ಯೂಲ್ ಕ್ಯಾನ್ಸಲ್ ಆಗಿದ್ದರಿಂದ ಮುಂಚಿತವಾಗಿ ಟಿಕೆಟ್ ಬುಕ್ ಮಾಡುವುದಕ್ಕೆ ಜನರು ಯೋಚಿಸುವಂತಾಗಿದೆ. ಒಟ್ಟು 25 ಸಾವಿರ ಬುಕಿಂಗ್ ಪೈಕಿ ಶೇ 20ರಷ್ಟು ಆನ್ ಲೈನ್ ಮೂಲಕ ಆಗುತ್ತಿದ್ದವು.
"ನಾವೀಗ ಕ್ಯಾನ್ಸಲ್ ಆದ ಪ್ರಯಾಣದ ಟಿಕೆಟ್ ದರ ವಾಪಸ್ ನೀಡುತ್ತಿದ್ದೇವೆ. ಕೌಂಟರ್ ಗಳಲ್ಲೂ, ಆನ್ ಲೈನ್ ಮೂಲಕವೂ ವಾಪಸ್ ಮಾಡಲಾಗುತ್ತಿದೆ. ಇದು ಎಷ್ಟು ಕಷ್ಟದ ಕೆಲಸ ಅಂದರೆ ಈಗಲೂ ಆ ಪ್ರಕ್ರಿಯೆ ನಡೆಯುತ್ತಲೇ ಇದೆ" ಎಂದು ಲತಾ ತಿಳಿಸಿದರು.