ಕರ್ನಾಟಕದಿಂದ ಇಂದು ಸುಪ್ರೀಂ ಕೋರ್ಟ್ ಗೆ ಅರ್ಜಿ
ಬೆಂಗಳೂರು, ಸೆಪ್ಟೆಂಬರ್ 26: ಸುಪ್ರೀಂ ಕೋರ್ಟ್ ಸೆ.20ರಂದು ನೀಡಿದ್ದ ಆದೇಶದಲ್ಲಿ ಬದಲಾವಣೆ ಮಾಡಬೇಕು ಎಂದು ಕೋರಿ ಸೋಮವಾರ ಕರ್ನಾಟಕ ಸರಕಾರ ಮತ್ತೆ ಅರ್ಜಿ ಸಲ್ಲಿಸಲಿದೆ. 6 ಕ್ಯೂಸೆಕ್ ನಂತೆ ಸೆಪ್ಟೆಂಬರ್ 27ರ ವರೆಗೆ ತಮಿಳುನಾಡಿಗೆ ನೀರು ಬಿಡುವಂತೆ ಕೋರ್ಟ್ ಸೂಚಿಸಿತ್ತು.
ಸೆಪ್ಟೆಂಬರ್ 23ರಂದು ಕರೆದಿದ್ದ ವಿಶೇಷ ಅಧಿವೇಶನದಲ್ಲಿ ಕೈಗೊಂಡ ನಿರ್ಣಯವನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದು, ಆದೇಶ ಬದಲಾವಣೆಗೆ ಮನವಿ ಮಾಡಲಿದೆ. ರಾಜ್ಯದಲ್ಲಿ ಕಾವೇರಿ ಕೊಳ್ಳದ ಜಲಾಶಯಗಳ ಸ್ಥಿತಿ ಉತ್ತಮವಾಗುವವರೆಗೆ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೇಳಿತ್ತು.[ನಿರ್ದೇಶಕ ಗಿರಿರಾಜ್ ಕಾವೇರಿ ನೀರು ನಿರ್ವಹಣೆ' ವಿಡಿಯೋ 'ವೈರಲ್]
ಕರ್ನಾಟಕ ವಿಧಾನಸಭೆಯಲ್ಲಿ ಕೈಗೊಂಡ ನಿರ್ಣಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದರು. ಮಧ್ಯಂತರ ಆದೇಶದ ಬದಲಾವಣೆಗೆ ಸೋಮವಾರ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸುವುದಾಗಿ ತಿಳಿಸಿದ್ದರು.[ಕುಡಿಯುವುದಕ್ಕೆ ಮಾತ್ರ ಕಾವೇರಿ: ನಿರ್ಣಯದ ಪೂರ್ಣ ಪಾಠ]
'ಅಧಿವೇಶನದಲ್ಲಿ ಕೈಗೊಂಡ ನಿರ್ಣಯದ ಪ್ರತಿಯನ್ನು ಲಗತ್ತಿಸಿದ್ದೇವೆ. ಸದ್ಯಕ್ಕೆ ನಾಲ್ಕು ಜಲಾಶಯಗಳಲ್ಲಿರುವ 26.33 ಟಿಎಂಸಿ ಅಡಿ ನೀರನ್ನು ಕಾವೇರಿ ಕೊಳ್ಳದ ಪಟ್ಟಣ ಹಾಗೂ ಹಳ್ಳಿಗಳು, ಬೆಂಗಳೂರು ನಗರದ ಜನರ ಕುಡಿಯುವ ಉದ್ದೇಶಕ್ಕೆ ಬಿಟ್ಟು ಇನ್ಯಾವುದಕ್ಕೂ ಬಳಸಬಾರದು ಎಂಬ ನಿರ್ಣಯ ಕೈಗೊಳ್ಳಲಾಗಿದೆ' ಎಂದು ತಿಳಿಸಿದ್ದಾರೆ.