ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿನ ಅರ್ಥವೇನು: ಮುಂದೇನಾಗಬಹುದು?
ಬೆಂಗಳೂರು, ಸೆಪ್ಟೆಂಬರ್ 22: ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ನಂತರವೂ ಸದ್ಯಕ್ಕೆ ತಮಿಳುನಾಡಿಗೆ ನೀರು ಬಿಡಲ್ಲ, ಶನಿವಾರ ಕರೆದಿರುವ ಅಧಿವೇಶನದಲ್ಲಿ ಬರುವ ತೀರ್ಮಾನದ ಮೇಲೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ ಸಿದ್ದರಾಮಯ್ಯ. ಹಾಗಾದರೆ ಇದರ ಅರ್ಥ ಏನು? ಎಂಬುದು ಎಲ್ಲರ ಪ್ರಶ್ನೆ. ಮುಂದೇನಾಗಬಹುದು ಎಂಬುದು ಜನರ ಪಾಲಿನ ಸದ್ಯದ ಕುತೂಹಲ.
ಆರು ಸಾವಿರ ಕ್ಯೂಸೆಕ್ ನೀರು ಸೆ.27ರ ವರೆಗೆ ಹರಿಸುವುದಕ್ಕೆ ವಾಸ್ತವದಲ್ಲಿ ಸಾಧ್ಯವೇ ಇಲ್ಲ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಆದರೆ ರಾಜ್ಯ ಸರಕಾರದ ಯಾವುದೇ ಅತಿರೇಕದ ನಿರ್ಣಯ ಸೆ.28ರ ವಿಚಾರಣೆ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.[ಕಾವೇರಿ ನೀರು ಬಿಡದಿರುವ ಬಗ್ಗೆ ಸೆ. 23ರಂದು ಅಧಿಕೃತ ಪ್ರಕಟಣೆ]
ಇನ್ನು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಹಾಗೂ ಜಲ ಸಂಪನ್ಮೂಲ ಸಚಿವರ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಎದುರಾಗಬಹುದು. ಆದೇಶ ಪಾಲಿಸದ ಕಾರಣ ಜೈಲಿಗೆ ಕಳುಹಿಸಬಹುದು. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಕೇಂದ್ರಕ್ಕೆ ಸೂಚಿಸುವ ಸಾಧ್ಯತೆಯೂ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇನೂ ನೀರು ಬಿಡಲ್ಲ ಎಂದಿಲ್ಲ. ಅದೇ ರೀತಿ ಬಿಡ್ತೀವಿ ಅಂತಲೂ ಹೇಳಿಲ್ಲ. ಇದೇ ವಿಚಾರವಾಗಿ ಇಲ್ಲಿ ಕೆಲವು ಸಾಧ್ಯತೆಗಳನ್ನು ಕೊಡಲಾಗಿದೆ. ಮುಂದಿನ ನಿರೀಕ್ಷೆ ಹಾಗೂ ಸಾಧ್ಯತೆಗಳ ಬಗೆಗೆ ನೀವೂ ಅಭಿಪ್ರಾಯ ಹಂಚಿಕೊಳ್ಳಬಹುದು.[ಕಾವೇರಿ ಸಭೆ ಬಹಿಷ್ಕಾರ: ಬಿಜೆಪಿ ನಾಯಕರೇ ನಿಮ್ಮ ಪಲಾಯನವಾದ ತಪ್ಪು]
ಮುಂದೂಡಿಕೆಯೇ ವಿನಾ ತಿರಸ್ಕರಿಸಿಲ್ಲ
ನ್ಯಾಯಾಲಯದ ಆದೇಶ ಪಾಲಿಸಬೇಕಾದ ವಿಚಾರವನ್ನು ಸರಕಾರ ಮುಂದೂಡಿದೆಯೇ ವಿನಾ, ತಿರಸ್ಕರಿಸಿಲ್ಲ. ಸದ್ಯಕ್ಕೆ ತಮಿಳುನಾಡಿನಲ್ಲಿ ಸಾಕಷ್ಟು ನೀರಿದ್ದು, ಕೂಡಲೇ ನೀರು ಹರಿಸಬೇಕಾದ ತುರ್ತಿಲ್ಲ. ಕರ್ನಾಟಕದ ನಿರ್ಧಾರದಿಂದ ನಮಗೆ ನಷ್ಟ ಆಗಿಹೋಯಿತು ಎಂದು ತಮಿಳುನಾಡು ಆರೋಪಿಸುವ ಸಾಧ್ಯತೆಯೂ ಇಲ್ಲ. ಆದ್ದರಿಂದ ಆದೇಶ ಪಾಲನೆ ವಿಳಂಬ ಆಗುವುದರಿಂದ ಕಾನೂನಿನ ತೊಡಕೇನೂ ಆಗೋದಿಲ್ಲ.
ಆದರೆ, ನೀರು ಬಿಡುಗಡೆ
ನಿರ್ಧಾರ ಯಾಕೆ ಮುಂದಕ್ಕೆ ಹಾಕಲಾಯಿತು ಅನ್ನೋ ಬಗ್ಗೆ ಮಾತ್ರ ಸರಿಯಾದ, ಒಪ್ಪಿಗೆ ಆಗುವಂಥ ಕಾರಣವಾಗಿರಲೇಬೇಕು. ಒಂದು ವೇಳೆ ಕೋರ್ಟ್ ಗೆ ಮನವರಿಕೆ ಮಾಡಿಕೊಡುವುದಕ್ಕೆ ವಿಫಲವಾದರೆ ಪರಿಸ್ಥಿತಿ ಮತ್ತೂ ಕಠಿಣವಾಗುತ್ತದೆ.
ಒಬ್ಬರ ತೀರ್ಮಾನವಲ್ಲ
ಶನಿವಾರ ನಡೆಯುವ ವಿಧಾನ ಮಂಡಲದ ಅಧಿವೇಶನದಲ್ಲಿ ನೀರು ಬಿಡುವುದು ಬೇಡ ಎಂಬ ನಿರ್ಣಯ ಕೈಗೊಂಡರೆ ಅದು ಒಬ್ಬ ಮುಖ್ಯಮಂತ್ರಿ ನಿರ್ಧಾರ ಎನಿಸುವುದಿಲ್ಲ. ಇಂಥ ಸಂದರ್ಭದಲ್ಲಿ ಎಲ್ಲ ಜನಪ್ರತಿನಿಧಿಗಳ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಹೊರಿಸುವುದು ಸುಲಭದ ವಿಷಯ ಅಲ್ಲ. ಅದನ್ನೂ ಮೀರಿ ಅಂಥ ತೀರ್ಮಾನ ತೆಗೆದುಕೊಂಡರೆ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಬಹುದು.
ಪ್ರಕರಣ ವರ್ಗಾವಣೆ
ಇನ್ನು ಕೋರ್ಟ್ ಆದೇಶವನ್ನೇ ಪ್ರಶ್ನಿಸಲು ಮುಂದಾಗಬಹುದು. ದ್ವಿಸದಸ್ಯ ಪೀಠದಿಂದ ಮತ್ತೊಂದು ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸುವಂತೆ ರಾಜ್ಯ ಸರಕಾರ ಮನವಿ ಮಾಡಬಹುದು. ಪೀಠದ ಬಗ್ಗೆ ವಿಶ್ವಾಸವಿಲ್ಲ ಎಂದು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಗೆ ತಿಳಿಸಿ, ಬದಲಿ ವ್ಯವಸ್ಥೆಗೆ ಮನವಿ ಮಾಡಬಹುದು.
ಪೀಠದ ಸ್ಪಂದನೆ ಹೇಗೆ?
ಆ ಹಂತಕ್ಕೆ ಹೋದರೆ ರಾಜ್ಯ ಸರಕಾರದ ವಿರುದ್ಧ ದ್ವಿಸದಸ್ಯ ಪೀಠ ಹೇಗೆ ಸ್ಪಂದಿಸುತ್ತದೆ ಎಂಬುದು ಕುತೂಹಲಕರವಾಗುತ್ತದೆ. ಇದು ಸ್ವಲ್ಪ ಅಪಾಯಕಾರಿಯಾದ ಚಿಂತನೆಯಾಗುತ್ತದೆ.
ಅಷ್ಟರಲ್ಲಿ ಮಳೆ ಬಂದರೆ
ಇಷ್ಟೆಲ್ಲ ಆಗಬೇಕಾದರೆ ಸಮಯ ಅಂತೂ ಆಗುತ್ತದೆ. ಅಷ್ಟರಲ್ಲಿ ರಾಜ್ಯದ ಪಾಲಿಗೆ ಅದೃಷ್ಟ ಇದ್ದರೆ ಮಳೆಯೇ ಬರಬಹುದು. ಹಾಗೊಂದು ವೇಳೆ ಆದರೆ ಸಮಸ್ಯೆ ನಿವಾರಣೆ ಸಲೀಸಾಗುತ್ತದೆ.
ನಿರ್ವಹಣೆ ಮಂಡಳಿ ಗುಮ್ಮ
ನಿಜವಾದ ಬೆದರುಬೊಂಬೆ ಆಗಿರುವುದು ನಿರ್ವಹಣಾ ಮಂಡಳಿಯ ರಚನೆ. ತಜ್ಞರ ಅಭಿಪ್ರಾಯದಂತೆ ಸುಪ್ರೀಂ ಕೋರ್ಟ್ ದ್ವಿ ಸದಸ್ಯ ಪೀಠಕ್ಕೆ ಈ ಅಧಿಕಾರ ಇಲ್ಲ. ಮತ್ತು ಈ ಬಗೆಗಿನ ವಿಚಾರಣೆ ತ್ರಿಸದಸ್ಯ ಪೀಠದ ಮುಂದಿರುವುದರಿಂದ ಪೂರ್ಣ ಪ್ರಮಾಣದ ಪೀಠ ರಚನೆಗೂ ಮನವಿ ಮಾಡಬಹುದು.