ಕಾವೇರಿ ವಿವಾದ: ಮಂಡ್ಯ ಸಂಸದ ಸಿ ಎಸ್ ಪುಟ್ಟರಾಜು ರಾಜೀನಾಮೆ
ಮಂಡ್ಯ, ಸೆ 20: ಸರ್ವೋಚ್ಚ ನ್ಯಾಯಾಲಯದ ಆದೇಶದ ವಿರುದ್ದ ಜನಪ್ರತಿನಿಧಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಮಂಡ್ಯ ಕ್ಷೇತ್ರದ ಜೆಡಿಎಸ್ ಸಂಸದ ಸಿ ಎಸ್ ಪುಟ್ಟರಾಜು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಂಗಳವಾರ (ಸೆ 20) ಸುಪ್ರೀಂಕೋರ್ಟ್ ಆದೇಶ ಹೊರಬೀಳುತ್ತಿದ್ದಂತೇ, ಮಂಡ್ಯ ಜಿಲ್ಲಾಧಿಕಾರಿ ಎಸ್ ಜಿಯಾವುಲ್ಲಾ ಮೂಲಕ ಪುಟ್ಟರಾಜು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಇದು ಕ್ರಮಬದ್ದ ಅಲ್ಲವೆಂದಾದರೆ ನೇರವಾಗಿ ಲೋಕಸಭಾ ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸುವುದಾಗಿ ಪುಟ್ಟರಾಜು ಹೇಳಿದ್ದಾರೆ. (ಪ್ರತಿದಿನ 6,000 ಕ್ಯೂಸೆಕ್ಸ್ ನೀರು ಹರಿಸಿ)
ರಾಜೀನಾಮೆ ಪತ್ರ ಸಲ್ಲಿಸಿದ ನಂತರ ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಮಾದೇಗೌಡ ಅವರನ್ನು ಮಂಡ್ಯದ ಅವರ ನಿವಾಸದಲ್ಲಿ ಪುಟ್ಟರಾಜು ಭೇಟಿ ಮಾಡಿ, ತನ್ನ ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದಾರೆ.
ನೀವ್ಯಾಕೆ ರಾಜೀನಾಮೆ ನೀಡಿದ್ರಿ, ಶಾಸಕರಿಂದ ರಾಜೀನಾಮೆ ಕೊಡಿಸಬೇಕಾಗಿತ್ತು ಎಂದು ಮಾದೇಗೌಡ್ರು ಪ್ರಶ್ನಿಸಿದರು, ಅವರಿಗೆ ನನ್ನ ರಾಜೀನಾಮೆಯ ಬಗ್ಗೆ ಮನವರಿಕೆ ಮಾಡಿದ್ದೇನೆಂದು ಪುಟ್ಟರಾಜು ಹೇಳಿದ್ದಾರೆ.
ಡಿ ಸಿ ತಮ್ಮಣ್ಣ ರಾಜೀನಾಮೆ: ಕಾವೇರಿ ಕಣಿವೆ ಭಾಗದ ಮಂಡ್ಯ ಜಿಲ್ಲೆ ಮದ್ದೂರು ಕ್ಷೇತ್ರದ ಜೆಡಿಎಸ್ ಶಾಸಕ ಡಿ ಸಿ ತಮ್ಮಣ್ಣ ಕೂಡಾ ಸುಪ್ರೀಂ ಆದೇಶದ ವಿರುದ್ದ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ನಾಳೆ ಮಂಡ್ಯದಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡುವುದಾಗಿ ತಮ್ಮಣ್ಣ ಹೇಳಿದ್ದಾರೆ.
ರಾಜೀನಾಮೆ ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಪುಟ್ಟರಾಜು, ಕಾವೇರಿ ನದಿನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇದೆ. ಇಂತಹ ಸಮಯದಲ್ಲಿ ಸಂಸದನಾಗಿ ಮುಂದುವರಿಯಲು ನನ್ನ ಮನಸ್ಸು ಕೇಳುತ್ತಿಲ್ಲ.
ನೀರು ಬಿಡಬೇಕು ಎನ್ನುವ ಆಘಾತಕಾರಿ ತೀರ್ಪು ಒಂದೆಡೆಯಾದರೆ, ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಬೇಕು ಎನ್ನುವ ತೀರ್ಪು ತೀವ್ರ ನೋವಿನ ವಿಚಾರ. ಹಾಗಾಗಿ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆಂದು ಪುಟ್ಟರಾಜು ಹೇಳಿದ್ದಾರೆ.