ಕಾವೇರಿ ಐತೀರ್ಪಿನ ವಿಚಾರಣೆ ಆರಂಭ, ಮಂಡ್ಯದಲ್ಲಿ ಬಿಗಿ ಭದ್ರತೆ
ನವದೆಹಲಿ, ಜುಲೈ 11: ಕಾವೇರಿ ನ್ಯಾಯಮಂಡಳಿ ನೀಡಿರುವ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ತಮಿಳುನಾಡು ಮತ್ತು ಕರ್ನಾಟಕ ಸಲ್ಲಿಸಿರುವ ಅರ್ಜಿಯ ವಿಚಾರಣೆ ಆರಂಭವಾಗಿದೆ. ಈ ಹಿನ್ನಲೆಯಲ್ಲಿ ಮಂಡ್ಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಕಾವೇರಿ ಕೊಳ್ಳದ ನಾಲ್ಕು ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಪುದುಚೆರಿ ಮತ್ತು ಕೇರಳ ರಾಜ್ಯಗಳಿಗೆ ನೀರಿನ ಹಂಚಿಕೆ ಮಾಡಿ ಕಾವೇರಿ ನ್ಯಾಯಮಂಡಳಿ ಆದೇಶ ನೀಡಿದೆ. ಆದರೆ ಈ ತೀರ್ಪನ್ನು ಪ್ರಶ್ನಿಸಿ ತಮಿಳುನಾಡು ಮತ್ತು ಕರ್ನಾಟಕ ಸರಕಾರಗಳು ಸುಪ್ರೀಂ ಕೋರ್ಟಿಗೆ ಮೊರೆ ಹೋಗಿವೆ. ಹೀಗಾಗಿ ಇದರ ವಿಚಾರಣೆ ಇಂದಿನಿಂದ ಆರಂಭವಾಗಿದೆ.
ಕರ್ನಾಟಕದ ಪರವಾಗಿ ಹಿರಿಯ ನ್ಯಾಯವಾದಿ ಫಾಲಿ ಎಸ್ ನಾರಿಮನ್ ನೇತೃತ್ವದ ತಂಡ ವಾದ ಮಂಡಿಸಲಿದೆ.
ನ್ಯಾಯಮಂಡಳಿ ಆದೇಶವೇನು?
ಕಾವೇರಿ ನದಿಯಲ್ಲಿ ಒಟ್ಟು 740 ಟಿಎಂಸಿ ನೀರು ಲಭ್ಯವಾಗಲಿದ್ದು, ಅದರಲ್ಲಿ ತಮಿಳು ನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270, ಕೇರಳಕ್ಕೆ 30 ಟಿಎಂಸಿ, ಪುದುಚೆರಿಗೆ 7 ಟಿಎಂಸಿ ನೀರನ್ನು ಕಾವೇರಿ ನ್ಯಾಯಮಂಡಳಿ ಹಂಚಿಕೆ ಮಾಡಿ ಆದೇಶ ನೀಡಿತ್ತು.
ಈ ಆದೇಶದಿಂದ ನದಿಯ ಮೇಲ್ಭಾಗದಲ್ಲಿ ಬರುವ ಕರ್ನಾಟಕ ತಮಿಳುನಾಡಿಗೆ ಪ್ರತಿ ವರ್ಷ 192 ಟಿಎಂಸಿ ನೀರು ಬಿಡಬೇಕು. ಇದೀಗ ನ್ಯಾಯಮಂಡಳಿಯ ಈ ಆದೇಶವನ್ನೇ ರಾಜ್ಯ ಸರ್ಕಾರ ಪ್ರಶ್ನೆ ಮಾಡಿದೆ. ಒಟ್ಟು ಲಭ್ಯವಿರುವ ನೀರಿನಲ್ಲಿ ಕರ್ನಾಟಕಕ್ಕೆ ಕಡಿಮೆ ನೀಡಲಾಗಿದೆ ಎಂಬುದು ಕರ್ನಾಟಕದ ವಾದ.
ಕರ್ನಾಟಕದಲ್ಲಿ ಸಾಮಾನ್ಯ ಮಳೆಯಾದ ವರ್ಷ 192 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡಬೇಕು ಎಂಬುದು ಐತೀರ್ಪಿನಲ್ಲಿದೆ. ಆದರೆ ಒಂದೊಮ್ಮೆ ಮಳೆಯ ಕೊರತೆಯಾದರೆ, ಎಷ್ಟು ನೀರು ಬಿಡಬೇಕು ಎನ್ನುವ ಬಗ್ಗೆ ಆದೇಶದಲ್ಲಿ ಸ್ಪಷ್ಟತೆ ನೀಡಿಲ್ಲ ಎಂದು ಕರ್ನಾಟಕ ತಕರಾರು ತೆಗೆದಿದೆ.
ಜತೆಗೆ ಬೆಂಗಳೂರಿನ ಕುಡಿಯುವ ನೀರಿನ ಹಂಚಿಕೆಗೂ ನ್ಯಾಯ ಒದಗಿಸಿಲ್ಲ. ಹೀಗಾಗಿ ಆದೇಶವನ್ನು ಮರು ಪರಿಶೀಲನೆಗೆ ಒಳಪಡಿಸಬೇಕು ಎಂದು ಸರಕಾರ ಅರ್ಜಿಯಲ್ಲಿ ಹೇಳಿದೆ.
ತಮಿಳುನಾಡು
ತಕರಾರು
ಇತ್ತ
ಕರ್ನಾಟಕ
ತಾನು
ತಮಿಳುನಾಡಿಗೆ
ನೀಡಬೇಕಾದ
ನೀರೇ
ಹೆಚ್ಚಾಗಿದೆ
ಎಂದು
ಅರ್ಜಿಯಲ್ಲಿ
ಹೇಳಿದ್ದರೆ
ಅತ್ತ
ತಮಿಳುನಾಡು
ಕೂಡ
ಆದೇಶದಲ್ಲಿ
ತನಗೆ
ಅನ್ಯಾಯವಾಗಿದೆ
ಎಂದು
ತಕರಾರು
ಅರ್ಜಿ
ಸಲ್ಲಿಸಿದೆ.
ಹೀಗೆ ಏಕಕಾಲಕ್ಕೆ ನೀರಿನ ಹಂಚಿಕೆಯಲ್ಲಿ ಅನ್ಯಾಯವಾಗಿದೆ ಎಂದು ಎರಡೂ ರಾಜ್ಯಗಳು ಸುಪ್ರಿಂ ಕೋರ್ಟ್ ಮೊರೆ ಹೋಗಿವೆ. ಯಥಾಪ್ರಕಾರ, "ಕಾವೇರಿ ಕೊಳ್ಳದಲ್ಲಿ ತಮಿಳುನಾಡಿನಲ್ಲಿ ನೀರಾವರಿ ಪ್ರದೇಶ ಹೆಚ್ಚು, ಹೀಗಾಗಿ ನಮಗೆ ಇನ್ನೂ ಹೆಚ್ಚಿನ ನೀರು ಬಿಡಬೇಕು. ಜತೆಗೆ ನ್ಯಾಯ ಮಂಡಳಿ ಆದೇಶದಂತೆ ಕರ್ನಾಟಕ 10 ಟಿಎಂಸಿ ನೀರು ಬಿಟ್ಟಿಲ್ಲ," ಎಂದು ತಮಿಳುನಾಡು ಅರ್ಜಿಯಲ್ಲಿ ಹೇಳಿದೆ.
ಹೀಗೆ ಮೂಲ ಅರ್ಜಿ ಹಾಗೂ ಇದರೊಂದಿಗೆ ತಮಿಳುನಾಡು ಹಾಕಿರುವ ಹೊಸ ಅರ್ಜಿಯೂ ವಿಚಾರಣೆಗೆ ಬರಲಿದೆ. ಇದಕ್ಕೆ ಸಮರ್ಥ ವಾದ ಮಂಡಿಸಲು ಕರ್ನಾಟಕದ ವಕೀಲರ ತಂಡ ಸಿದ್ಧತೆ ಮಾಡಿಕೊಂಡಿದೆ.
ವಿಚಾರಣೆ ಹಿನ್ನಲೆಯಲ್ಲಿ ಗಲಭೆ ಉಂಟಾಗುವ ಸಾಧ್ಯತೆಗಳಿರುವುದರಿಂದ ಮಂಡ್ಯದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.