ಕಾವೇರಿಗಾಗಿ ಕಾವೇರಿದ ಕರ್ನಾಟಕ, ಬಂದ್ ದಿನ ಏನೆಲ್ಲ ಬಂದ್ ?
ಬೆಂಗಳೂರು, ಸೆ. 08: ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕಾವೇರಿ ನದಿ ನೀರನ್ನು ಹರಿಸಲು ಕರ್ನಾಟಕ ಮುಂದಾಗಿದೆ. ಸಾವಿರಾರು ಕನ್ನಡ ಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು, ಈಗಾಗಲೇ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಸುಮಾರು 1,200ಕ್ಕೂ ಅಧಿಕ ಸಂಘಟನೆಗಳು ಬೆಂಬಲ ಸೂಚಿಸಿದ್ದು ಶುಕ್ರವಾರ(ಸೆಪ್ಟೆಂಬರ್ 09) ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ರಾಜ್ಯ ಸಂಪೂರ್ಣ ಸ್ತಬ್ಧವಾಗಲಿದೆ.
ಆಟೋ, ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಕಾರ್ಮಿಕರು ಬಂದ್ಗೆ ಬೆಂಬಲ ನೀಡಿದ್ದು, ಬಸ್ ಮತ್ತು ಆಟೋ ಸಂಚಾರ ಸ್ಥಗಿತಗೊಳ್ಳಲಿದೆ. ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿ, ಖಾಸಗಿ ಉದ್ಯಮ ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ.
Must Read : ಬೆರಳ ತುದಿಯಲ್ಲಿ ರಿಲಯನ್ಸ್ ಕಾರ್ ವಿಮೆ ನವೀಕರಣ
ಬಂದ್ ದಿನ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗುವುದಿಲ್ಲ ಹಾಲು, ಔಷಧ, ಆಂಬ್ಯುಲೆನ್ಸ್, ಆಸ್ಪತ್ರೆ ಸೇವೆಗಳು ಎಂದಿನಂತೆ ಇರಲಿವೆ. ಕರ್ನಾಟಕ ಬಂದ್ ದಿನ ಏನಿರುತ್ತೆ, ಏನಿರಲ್ಲ? ಚಿತ್ರಗಳಲ್ಲಿ ನೋಡಿ...
ಕೆಎಸ್ಆರ್ ಟಿಸಿ, ಬಿಎಂಟಿಸಿ ಇರಲ್ಲ
ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಕಾರ್ಮಿಕರ ಸಂಘ ಎಐಟಿಯುಸಿ ಬೆಂಬಲ ಸೂಚಿಸಿದೆ. 50 ಸಾವಿರಕ್ಕೂ ಹೆಚ್ಚು ಬಸ್ ಗಳನ್ನು ಓಡಿಸದೇ ಇರಲು ನಿರ್ಧರಿಸಿದ್ದಾರೆ ಎಂದು ಕಾರ್ಮಿಕ ಸಂಘಟನೆ ಪರವಾಗಿ ಅನಂತ ಸುಬ್ಬರಾವ್ ಹೇಳಿದ್ದಾರೆ. ಅಷ್ಟೇ ಅಲ್ಲದೇ ಖಾಸಗಿ ಬಸ್ ಗಳ ಮಾಲೀಕರ ಸಂಘ ಸಹ ಬೆಂಬಲ ಸೂಚಿಸಿವೆ,
ಶಾಲೆ ಕಾಲೇಜುಗಳಿಗೆ ರಜೆ
ಕುಸ್ಮಾ ಮತ್ತು ಕ್ಯಾಮ್ಸ್ ಒಕ್ಕೂಟಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ರಜೆ ನೀಡಿವೆ. ಸರ್ಕಾರಿ ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನು ಸರ್ಕಾರ ಜಿಲ್ಲಾಡಳಿತಕ್ಕೆ ನೀಡಿದೆ. ಈಗಾಗಲೇ ಬೆಂಗಳೂರಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಖಾಸಗಿ ಶಾಲೆಗಳು ಕೂಡಾ ಬಂದ್ ಬೆಂಬಲ ನೀಡಿವೆ.
ಚಿತ್ರಪ್ರದರ್ಶನ ಇರಲ್ಲ, ಮಲ್ ತೆರೆಯಲ್ಲ
ಚಿತ್ರಮಂದಿರಗಳ ಮಾಲೀಕರು ಯಾವುದೇ ಚಿತ್ರಗಳನ್ನು ಪ್ರದರ್ಶನ ಮಾಡದಿರಲು ನಿರ್ಧರಿಸಿದ್ದಾರೆ.ಶುಕ್ರವಾರ ಬಂದ್ ಗೆ ಮಾಲ್ ಗಳಿಂದಲೂ ಬೆಂಬಲ ವ್ಯಕ್ತವಾಗಿದೆ. ಅನೇಕ ಮಾಲ್ ಗಳ ಪ್ರವೇಶದ ಬಾಗಿಲಲ್ಲಿ ಈ ಬಗ್ಗೆ ಸೂಚನೆ ನೀಡಲಾಗಿದೆ. ರಾತ್ರಿ ವೇಳೆಗೆ ಮಾಲ್ ಗಳಿಗೆ ಹೋಗಬಹುದು.
ಐಟಿ ಬಿಟಿ ಖಾಸಗಿ ಕಂಪೆನಿಗಳಿಗೆ ರಜೆ
ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್, ಮಾನ್ಯತಾ ಟೆಕ್ ಪಾರ್ಕ್, ಬೃಂದಾವನ ಟೆಕ್ ಪಾರ್ಕ್ ಗಳಲ್ಲಿರುವ ಕಂಪನಿಗಳು ರಜೆ ನೀಡಲು ಮುಂದಾಗಿರುವುದರಿಂದ ಈ ಭಾಗಗಳಿಗೆ ಖಾಸಗಿ ವಾಹನಗಳಲ್ಲಿ ಆರಾಮವಾಗಿ ತೆರಳಬಹುದು. ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳಬಹುದು,
ಹೋಟೆಲ್,ರೆಸ್ಟೋರೆಂಟ್, ಬಾರ್ ಇರಲ್ಲ
ಬೆಂಗಳೂರಿನ ಹೋಟೆಲ್ ಮಾಲೀಕರ ಸಂಘ ಕೂಡ ಬಂದ್ ಗೆ ಬೆಂಬಲ ಸೂಚಿಸಿದೆ ಬೆಳೆಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಹೋಟೆಲ್ ತೆರೆಯದೇ ಇರಲು ನಿರ್ಧರಿಸಿದ್ದಾರೆ. ಬಾರ್ ಆಂಡ್ ರೆಸ್ಟೋರೆಂಟ್ ಗಳಿಗೂ ಇದು ಅನ್ವಯವಾಗಲಿದೆ. ಮಾಲ್ ಗಳಲ್ಲಿರುವ ಹೋಟೆಲ್ ಗಳು, ಆನ್ ಲೈನ್ ಫುಡ್ ಆರ್ಡರ್ ಕೂಡಾ ಬಂದ್ ಆಗಲಿದೆ.
ಕ್ಯಾಬ್, ಆಟೋರಿಕ್ಷಾ ಇರಲ್ಲ
ಕರ್ನಾಟಕ ಬಂದ್ ಗೆ ಟ್ಯಾಕ್ಸಿ ಸಂಘಟನೆ, ಮೊಬೈಲ್ ಅಪ್ಲಿಕೇಷನ್ ಆಧಾರಿತ ಕ್ಯಾಬ್ ಗಳು ಕೂಡಾ ಬೆಂಬಲ ನೀಡಿವೆ. ಸರಿ ಸುಮಾರು 1 ಲಕ್ಷಕ್ಕೂ ಹೆಚ್ಚು ಕ್ಯಾಬ್ ಗಳನ್ನು ರಸ್ತೆಗೆ ಇಳಿಸದೇ ಇರಲು ಬೆಂಗಳೂರು ಟ್ಯಾಕ್ಸಿ ಅಸೋಸಿಯೇಷನ್ ತೀರ್ಮಾನಿಸಿದೆ. ಆಟೋ ಚಾಲಕರ ಸಂಘ ಸಹ ಬೆಂಬಲ ನೀಡಿವೆ. ಹೀಗಾಗಿ ಕ್ಯಾಬ್ ಹಾಗೂ ಆಟೋರಿಕ್ಷಾಗಳು ರಸ್ತೆಗಿಳಿಯುವುದಿಲ್ಲ.
ಪೆಟ್ರೋಲ್ ಸಿಗಲ್ಲ
ಪೆಟ್ರೋಲ್ ಬಂಕ್ ಮಾಲೀಕ ಸಂಘಟನೆ ಬೆಂಬಲ ಸೂಚಿಸಿದ್ದು ಬಂಕ್ ಗಳನ್ನು ತೆರೆಯದೇ ಇರಲು ನಿರ್ಧರಿಸಿದ್ದಾರೆ. ಹಾಲಿನ ಸರಬರಾಜಿಗೆ ವಿನಾಯಿತಿ ನೀಡಿದ್ದು ಅಂದು ಹಾಲಿನ ಸರಬರಾಜಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ.
ಶೂಟಿಂಗ್, ತಮಿಳು ಚಾನಲ್ ಗಳು ಬಂದ್
ಕನ್ನಡ ಚಲನಚಿತ್ರರಂಗದವರು ಅಂದು ತಮ್ಮ ಎಲ್ಲ ಚಿತ್ರಗಳ ಶೂಟಿಂಗ್ ರದ್ದುಗೊಳಿಸಿ ಪ್ರತಿಭಟನೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ. ಹೊರರಾಜ್ಯ, ದೇಶದಲ್ಲಿ ನಡೆಯುತ್ತಿರುವ ಶೂಟಿಂಗ್ ಕೂಡಾ ರದ್ದಾಗಲಿದೆ. ಸುಮಾರು 53 ತಮಿಳು ಚಾನಲ್ ಗಳನ್ನು ಶುಕ್ರವಾರ ಬಂದ್ ಮಾಡಲು ನಿರ್ಧರಿಸಿದ್ದೇವೆ ಎಂದು ಕರ್ನಾಟಕ ಕೇಬಲ್ ಆಪರೇಟರ್ ಗಳ ಸಂಘದ ಅಧ್ಯಕ್ಷ ಪ್ಯಾಟ್ರಿಕ್ ರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.