ಸಂಪುಟ ಪುನಾರಚನೆ : ಎಲ್ಲರ ಚಿತ್ತ ದೆಹಲಿಯತ್ತ!
ಬೆಂಗಳೂರು, ಜೂನ್ 16 : ಕರ್ನಾಟಕದ ರಾಜಕಾರಣ ದೆಹಲಿಗೆ ವರ್ಗಾವಣೆಗೊಂಡಿದೆ. ಸಚಿವ ಸಂಪುಟ ಪುನಾರಚನೆ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ಅವರು ಗುರುವಾರ ಮಧ್ಯಾಹ್ನ ದೆಹಲಿಗೆ ತೆರಳಲಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳು ಆಗಲೇ ದೆಹಲಿ ತಲುಪಿದ್ದಾರೆ.
ಬುಧವಾರ ಮಂತ್ರಿ ಪರಿಷತ್ ಸಭೆ ನಡೆಸಿದ್ದ ಸಿದ್ದರಾಮಯ್ಯ ಅವರು ಸಂಪುಟ ಪುನಾರಚನೆ ಬಗ್ಗೆ ಎಲ್ಲಾ ಸಚಿವರಿಗೆ ಮಾಹಿತಿ ನೀಡಿದ್ದಾರೆ. 8 ರಿಂದ 10 ಸಚಿವರನ್ನು ಸಂಪುಟದಿಂದ ಕೈ ಬಿಟ್ಟು, ಹೊಸಬರಿಗೆ ಅವಕಾಶ ನೀಡಲು ತೀರ್ಮಾನಿಸಿದ್ದು, ಸಚಿವ ಸ್ಥಾನ ಪಡೆಯಲು ಲಾಬಿ ಆರಂಭವಾಗಿದೆ. [ಸಂಪುಟ ಸೇರಲಿರುವ ಅದೃಷ್ಟವಂತರು ಯಾರು?]
ಇಂದು ಸಂಜೆ 4.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ನಂತರ ಆಸ್ಕರ್, ಫರ್ನಾಂಡೀಸ್, ಮಲ್ಲಿಕಾರ್ಜುನ ಖರ್ಗೆ ಅವರ ಜೊತೆ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಸಲಿದ್ದು, ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. [ಯಾರ ಕೈ ತಪ್ಪಲಿದೆ ಸಚಿವ ಸ್ಥಾನ?]
ಸೋನಿಯಾ ಭೇಟಿ ಮಾಡಿದ ರೇವಣ್ಣ : ಸಚಿವ ಸ್ಥಾನದ ಆಕಾಂಕ್ಷಿಗಳು ಆಗಲೇ ದೆಹಲಿ ತಲುಪಿದ್ದು, ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಿದ್ದಾರೆ. ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಅವರು ಗುರುವಾರ ಬೆಳಗ್ಗೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದು, ಕುರುಬ ಸಮುದಾಯಕ್ಕೆ ಪುನಾರಚನೆ ವೇಳೆ ಆದ್ಯತೆ ನೀಡುವಂತೆ ಮನವಿ ಸಲ್ಲಿಸಿದರು. [ಡಿಕೆಶಿಗೆ ಕಾಂಗ್ರೆಸ್ ಹೈಕಮಾಂಡಿನ ಭರ್ಜರಿ ಗಿಫ್ಟ್]
ಸಿಎಂ ಭೇಟಿ ಮಾಡಿದ ಸಚಿವರು : ಕಾರ್ಮಿಕ ಸಚಿವ ಪರಮೇಶ್ವರ ನಾಯಕ್ ಮುಂತಾದವರು ಗುರುವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಪರಮೇಶ್ವರ ನಾಯಕ್ ಅವರನ್ನು ಸಂಪುಟದಿಂದ ಕೈ ಬಿಡಬಹುದು ಎಂಬ ಸುದ್ದಿಯೂ ಇದೆ.
ಸಂಪುಟ ಪುನಾರಚನೆ ಮುಂದಕ್ಕೆ? : ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಪಕ್ಷದ ಮೂಲಗಳ ಮಾಹಿತಿ ಪ್ರಕಾರ ಅವರು ಇಂದು ಸಂಜೆ ಪ್ರಯಾಣ ಬೆಳೆಸಲಿದ್ದಾರೆ. ಒಂದು ವೇಳೆ ಇಂದು ಸೋನಿಯಾ ವಿದೇಶಕ್ಕೆ ತೆರಳಿದರೆ ಎರಡು ತಿಂಗಳ ಕಾಲ ಸಂಪುಟ ಪುನಾರಚನೆ ಮುಂದಕ್ಕೆ ಹೋಗಲಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.