ಸಿದ್ದು ಸಂಪುಟ ಸೇರಲಿರುವ ಅದೃಷ್ಟವಂತರು ಯಾರು?
ಬೆಂಗಳೂರು, ಜೂನ್ 15 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಪುನಾರಚನೆ ಬಗ್ಗೆ ಚರ್ಚೆ ನಡೆಯುತ್ತಿದೆ. ಹತ್ತು ಸಚಿವರನ್ನು ಸಂಪುಟದಿಂದ ಕೈ ಬಿಟ್ಟು, ಹೊಸಬರಿಗೆ ಅವಕಾಶ ನೀಡಲಾಗುತ್ತದೆ ಎಂಬುದು ಸದ್ಯದ ಸುದ್ದಿ.
ಬುಧವಾರ ಬೆಳಗ್ಗೆ ವಿಧಾನಸೌಧದಲ್ಲಿ ಮಂತ್ರಿ ಪರಿಷತ್ ಸಭೆ ಆರಂಭವಾಗಿದೆ. ಸಭೆಯಲ್ಲಿ ಪಕ್ಷದ ನಿರ್ಧಾರವನ್ನು ಸಚಿವರಿಗೆ ಸಿದ್ದರಾಮಯ್ಯ ಅವರು ತಿಳಿಸುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆ ಆದರೆ, ಸಿದ್ದರಾಮಯ್ಯ ಮತ್ತು ಪರಮೇಶ್ವರ ಅವರು ಗುರುವಾರ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ. [ಸಂಪುಟ ಪುನಾರಚನೆ, ಯಾರ ಕೈ ತಪ್ಪಲಿದೆ ಸಚಿವ ಸ್ಥಾನ?]
ಸಚಿವರನ್ನು ಸಂಪುಟದಿಂದ ಕೈ ಬಿಡಲು ಸಿದ್ದರಾಮಯ್ಯ ಅವರು ಯಾವ ಮಾನದಂಡ ಅನುಸರಿಸಲಿದ್ದಾರೆ? ಎಂಬುವುದು ಇನ್ನೂ ನಿಗೂಢವಾಗಿದೆ. ಸಂಪುಟದಿಂದ 10 ಸಚಿವರನ್ನು ಕೈ ಬಿಡಲು ಸಿದ್ದರಾಮಯ್ಯ ಪಟ್ಟಿ ತಯಾರು ಮಾಡಿದ್ದಾರೆ ಎಂಬುದು ಪಕ್ಷದ ಉನ್ನತ ಮೂಲಗಳ ಮಾಹಿತಿ. [ಡಿಕೆಶಿಗೆ ಕಾಂಗ್ರೆಸ್ ಹೈಕಮಾಂಡಿನ ಭರ್ಜರಿ ಗಿಫ್ಟ್]
ಸಂಪುಟ ಪುನಾರಚನೆ ಮಾಡುವಾಗ ಹಿರಿಯ ಶಾಸಕರನ್ನು ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ. ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ ಖರ್ಗೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ. ಸಂಪುಟ ಸೇರುವವರು ಯಾರು? ಇಲ್ಲಿದೆ ಮಾಹಿತಿ.....
ಸಚಿವರಾಗಲಿದ್ದಾರೆ ಕಾಗೋಡು ತಿಮ್ಮಪ್ಪ
ಸಾಗರ ಕ್ಷೇತ್ರದ ಶಾಸಕರಾದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸಿದ್ದರಾಮಯ್ಯ ಸಂಪುಟ ಸೇರುವ ಸಾಧ್ಯತೆ ಇದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರನ್ನು ಸಂಪುಟದಿಂದ ಕೈ ಬಿಟ್ಟು, ಕಾಗೋಡು ಅವರನ್ನು ಸೇರಿಸಿಕೊಳ್ಳಲಾಗುತ್ತದೆ ಎಂಬುದು ಸದ್ಯದ ಸುದ್ದಿ.
ರಮೇಶ್ ಕುಮಾರ್ಗೆ ಸಚಿವ ಸ್ಥಾನ?
ಸರ್ಕಾರವನ್ನು ವಿರೋಧ ಪಕ್ಷದವರಂತೆ ಸದಾ ಟೀಕಿಸುವ ಶ್ರೀನಿವಾಸಪುರ ಕ್ಷೇತ್ರದ ಶಾಸಕ ರಮೇಶ್ ಕುಮಾರ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಕೋಲಾರ ಭಾಗದ ಯಾವ ಶಾಸಕರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ರಮೇಶ್ ಕುಮಾರ್ ಅವರನ್ನು ಸೇರಿಸಿಕೊಂಡು ಆ ಭಾಗಕ್ಕೆ ಆದ್ಯತೆ ನೀಡಬಹುದು ಎಂಬುದು ಲೆಕ್ಕಾಚಾರ.
ಅಪ್ಪನ ಬದಲು ಮಗನಿಗೆ ಸಚಿವ ಪಟ್ಟ
ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಅವರನ್ನು ಸಂಪುಟದಿಂದ ಕೈ ಬಿಡುವ ಸಾಧ್ಯತೆ ಇದೆ. ಶಾಮನೂರು ಅವರ ಬದಲು ಅವರ ಪುತ್ರ ಎಸ್.ಎಸ್.ಮಲ್ಲಿಕಾರ್ಜುನ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.
ಉಡುಪಿ ಶಾಸಕರು ಸಂಪುಟ ಸೇರಲಿದ್ದಾರೆಯೇ?
ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.
ಕೆಬಿ ಕೋಳಿವಾಡ ಅವರಿಗೆ ಮಂತ್ರಿಗಿರಿ
ಸಿದ್ದರಾಮಯ್ಯ ಸಂಪುಟ ಸೇರಲು ಬಹಳ ದಿನಗಳಿಂದ ಪ್ರಯತ್ನ ಪಡುತ್ತಿರುವ ರಾಣೆಬೆನ್ನೂರು ಕ್ಷೇತ್ರದ ಶಾಸಕ ಕೆ.ಬಿ.ಕೋಳಿವಾಡ ಅವರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆ ಇದೆ. ಹಲವು ಬಾರಿ ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರ ಬಳಿ ಕೋಳಿವಾಡ ಅವರು ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದರು.
ಎನ್. ಎ. ಹ್ಯಾರೀಸ್ ಸಂಪುಟ ಸೇರ್ತಾರಾ?
ಬೆಂಗಳೂರಿನ ಶಾಂತಿನಗರದ ಕ್ಷೇತ್ರದ ಶಾಸಕ ಎನ್. ಎ. ಹ್ಯಾರೀಸ್ ಅವರು ಸಂಪುಟ ಸೇರುವ ಸಾಧ್ಯತೆ ಇದೆ.
ಖರ್ಗೆ ಪುತ್ರನಿಗೆ ಸಚಿವ ಸ್ಥಾನ?
ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ ಖರ್ಗೆ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಹೈಕಮಾಂಡ್ ನಾಯಕರಿಗೆ ಆಪ್ತರಾಗಿರುವ ಖರ್ಗೆ ಅವರು ಪುತ್ರನಿಗೆ ಮಂತ್ರಿಗಿರಿ ಕೊಡಿಸುವಲ್ಲಿ ಯಶಸ್ಸು ಕಾಣಬಹುದು.
ಸಂಪುಟ ಸೇರುವ ಇತರರು
ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ, ಯಾದಗಿರಿ ಶಾಸಕ ಎ.ಬಿ.ಮಾಲಕ ರೆಡ್ಡಿ ಅವರು ಸಚಿವರಾಗಿ ಸಂಪುಟ ಸೇರುವ ಸಾಧ್ಯತೆ ಇದೆ. [ಚಿತ್ರ : ಸಿದ್ದರಾಮಯ್ಯ, ಪರಮೇಶ್ವರ, ಕರ್ನಾಟಕ ಉಸ್ತುವಾರಿ ದಿಗ್ವಿಜಯ್ ಸಿಂಗ್]