ಎತ್ತಿನಹೊಳೆ ಯೋಜನೆಗೆ ಸರ್ಕಾರದ ಹಸಿರು ನಿಶಾನೆ
ಬೆಂಗಳೂರು, ಫೆ.12 : ದಕ್ಷಿಣ ಕರ್ನಾಟಕದ ಬರ ಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಕಲ್ಪಿಸುವ ವಿವಾದಿತ ಎತ್ತಿನಹೊಳೆ ಯೋಜನೆಯ ಪರಿಷ್ಕೃತ ಯೋಜನೆಗೆ ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇದರಿಂದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲು ಇದ್ದ ಅಡ್ಡಿ ಆತಂಕಗಳು ದೂರವಾದಂತಾಗಿವೆ.
ಮಂಗಳವಾರ ಸಂಜೆ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿಬಿ ಜಯಚಂದ್ರ, ಎತ್ತಿನಹೊಳೆ ಯೋಜನೆಯ ಪರಿಷ್ಕೃತ ಮೊತ್ತ 12,912.36 ಕೋಟಿ ಆಗಿದ್ದು, ಇದಕ್ಕೆ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು.
ಸಂಪುಟ ಸಭೆಯಲ್ಲಿ ಯೋಜನೆಯ ಎರಡೂ ಹಂತಕ್ಕೂ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದರಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಗೆ 24 ಟಿಎಂಸಿ ನೀರು ಒದಗಿಸಬಹುದಾಗಿದೆ ಎಂದು ಹೇಳಿದರು.
2011ರಲ್ಲಿ ಎತ್ತಿನಹೊಳೆ ಯೋಜನೆಗೆ ಮೊದಲ ಹಂತಕ್ಕೆ 2,800 ಕೋಟಿ ರೂ., ಎರಡನೇ ಹಂತಕ್ಕೆ 8,320 ಕೋಟಿ ರೂ. ಅಂದಾಜು ಪಟ್ಟಿ ತಯಾರಿಸಲಾಗಿತ್ತು. ಸದ್ಯ ದರಗಳು ಹೆಚ್ಚಾಗಿದ್ದರಿಮದ 12,912.36 ಕೋಟಿ ರೂ. ಪರಿಷ್ಕೃತ ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು. ಸಚಿವ ಸಂಪುಟ ಸಭೆಯ ಇತರ ನಿರ್ಣಯಗಳು
ಎತ್ತಿನಹೊಳೆ ಯೋಜನೆಗೆ ಸಂಪುಟ ಅಸ್ತು
ವಿವಾದಿತ ಎತ್ತಿನಹೊಳೆ ಯೋಜನೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಎತ್ತಿನಹೊಳೆ, ಹೊಂಗದಹೊಳ್ಳ, ಕೆರೆಹೊಳ್ಳ ಸೇರಿದಂತೆ ಎಂಟು ಹೊಳ್ಳಗಳಿಂದ ಸಕಲೇಶಪುರದ ಅರವನಹಳ್ಳಿವರೆಗೆ ಏತ ಕಾಮಗಾರಿ ಹಾಗೂ ಅರವನಹಳ್ಳಿಯಿಂದ ಕೋಲಾರದವರೆಗೆ ಕಾಲುವೆ ಕಾಮಗಾರಿ ಎರಡೂ ಹಂತದಲ್ಲಿ ನಡೆಯಲಿದೆ. ನೇತ್ರಾವತಿ ಮೂಲದಿಂದ ನೀರು ಪಡೆಯುವ ಯೋಜನೆ ಇದಲ್ಲ, ಪಶ್ಚಿಮಾಭಿಮುಖವಾಗಿ ಹರಿಯುವ ನೀರನ್ನು ಪಡೆಯುವುವ ಯೋಜನೆ ಇದಾಗಿದೆ. ಯೋಜನೆಯ ಕಾಮಗಾರಿಗಳಿಗೆ ಬುಧವಾರ ಆರ್ಥಿಕ ಬಿಡ್ ತೆರೆಯಲಾಗುತ್ತದೆ.
ಗ್ರಾಮ ಪಂಚಾಯಿತಿಗಳಿಗೆ ಡೆಸ್ಕ್ ಟಾಪ್ ಭಾಗ್ಯ
ರಾಜ್ಯದ ಗ್ರಾಮಪಂಚಾಯಿತಿಗಳಿಗೆ ಡೆಸ್ಕ್ ಟಾಪ್ ವಿರತಣೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಅದರಂತೆ 30 ಕೋಟಿ ರೂ. ವೆಚ್ಚಮಾಡಲು ಸಂಪುಟ ಸಭೆ ಅಸ್ತು ಎಂದಿದೆ.
ತನಿಖೆಗೆ ಐಜಿಪಿ ನೇತೃತ್ವದ ತಂಡ
ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ವರದಿ ಆಧಾರದ ಮೇಲೆ ತನಿಖೆ ನಡೆಸಲು ಐಜಿಪಿ ನೇತೃತ್ವದ ವಿಶೇಶ ತನಿಖಾ ತಂಡ (ಎಸ್ಐಟಿ) ರಚನೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಲೋಕಾಯುಕ್ತ ವ್ಯಾಪ್ತಿಯಲ್ಲಿ ಈ ತನಿಖಾ ತಂಡ ಕೆಲಸ ಮಾಡಲಿದ್ದು,ತಂಡಕ್ಕೆ ಅಗತ್ಯವಿರುವ 194 ಹುದ್ದೆಗಳ ನೇಮಕಾತಿಗೂ ಅನುಮೋದನೆ ನೀಡಲಾಗಿದೆ. ಲೋಕಾಯುಕ್ತ ವರದಿ ಅನ್ವಯ 27 ಪ್ರಕರಣಗಳ ಆಧಾರದ ಮೇಲೆ ತನಿಖೆ ನಡೆಯಲಿದ್ದು, ತನಿಖೆಗೆ 2 ವರ್ಷದ ಗಡುವು ವಿಧಿಸಲಾಗಿದೆ.
ಭೂಮಿ ನೀಡಲು ಒಪ್ಪಿಗೆ
ಕೇಂದ್ರ ಪೆಟ್ರೋಲಿಯಂ ಖಾತೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಸಮೀಪದ ಕಂಬಳಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ fire and safety technology research instituteಗೆ 281 ಎಕರೆ ಭೂಮಿ ನೀಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಕೆಪಿಎಸ್ ಸಿ ಹಗರಣದ ಬಗ್ಗೆ ಚರ್ಚೆ
ಮಂಗಳವಾರದ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ 2011ರ ನೇಮಕ ಪ್ರಕ್ರಿಯೆ ರದ್ದು ಅಥವಾ ಮುಂದುವರಿಸುವ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸಭೆಯಲ್ಲಿ ಸುದೀರ್ಘವಾಗಿ ಕೆಪಿಎಸ್ ಸಿ ಹಗರಣದ ಬಗ್ಗೆ ಚರ್ಚೆ ನಡೆಯಿತು. ಅಂತಿಮ ತೀರ್ಮಾನ ಕೈಗೊಳ್ಳುವ ಮೊದಲು ಮತ್ತೊಂದು ಸುತ್ತಿನಲ್ಲಿ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ನಿರ್ಧರಿಸಲಾಯಿತು ಎಂದು ಟಿಬಿ ಜಯಚಂದ್ರ ತಿಳಿಸಿದ್ದಾರೆ.
ಹೊಸ ರೈಲು ಮಾರ್ಗಕ್ಕಾಗಿ ಭೂಮಿ
ಗದಗ-ವಾಡಿ ಹೊಸ ರೈಲು ಮಾರ್ಗ ಯೋಜನೆ 1922 ಕೋಟಿ ಮೊತ್ತದಲ್ಲಿ ರಾಜ್ಯ ಸರ್ಕಾರ ಶೇ 50 ರಷ್ಟು ಪಾಲು ಭರಿಸುವುದು ಮತ್ತು ಉಚಿತವಾಗಿ ಭೂಮಿ ನೀಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
146 ಕೋಟಿ ಬಾಕಿ ಪಾವತಿಗೆ ಒಪ್ಪಿಗೆ
1591 ಕೋಟಿ ಮೊತ್ತದ ಮುಖ್ಯಮಂತ್ರಿ ನಗರೋತ್ಥಾನ ಯೋಜನಯಡಿ 2012-13ನೇ ಸಾಲಿನಲ್ಲಿ ಬಾಕಿ ಇದ್ದ 146 ಕೋಟಿ ರೂ.ಪಾವತಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
45.5ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ
ಮೈಸೂರು, ನಂಜನಗೂಡು ಮತ್ತು ಹೆಗ್ಗಡದೇವನಕೋಟೆ ತಾಲೂಕುಗಳ 23 ಕೆರೆಗಳಿಗೆ ಕಬಿನಿ ಜಲಾಶಯದಿಂದ ನೀರು ತುಂಬಿಸುವ 45.5ಕೋಟಿ ವೆಚ್ಚದ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.