1889 ಕೋಟಿ ವೆಚ್ಚದಲ್ಲಿ ಸೊಲ್ಲಾಪುರ-ವಿಜಯಪುರ ಹೆದ್ದಾರಿ ಮೇಲ್ದರ್ಜೆಗೆ
ನವದೆಹಲಿ, ಜುಲೈ 12: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ- 52 (NH-52 ಈ ಹಿಂದಿನ NH-13) ನ್ನು ಚತುಷ್ಪತ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಇಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ವಿಜಯಪುರ ಮತ್ತು ಸೊಲ್ಲಾಪುರ ನಡುವಿನ 110 ಕಿಲೋಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ 52ರ ಭಾಗವನ್ನು ಮೇಲ್ದರ್ಜೆಗೇರಿಸಲು ಒಪ್ಪಿಗೆ ನೀಡಲಾಯಿತು. 1889 ಕೋಟಿ ರೂಪಾಯಿ ವೆಚ್ಚದಲ್ಲಿ ಈ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗುತ್ತದೆ.
ಹೆದ್ದಾರಿಗಾಗಿ ಜಮೀನು ಪರಭಾರೆ ಮತ್ತು ರಸ್ತೆ ನಿರ್ಮಾಣಕ್ಕೆ ಈ ಹಣ ಬಳಕೆಯಾಗಲಿದೆ. ಸದ್ಯ ಸೊಲ್ಲಾಪುರ-ತಕ್ಲಿ-ನಂದನಿ-ಝಲ್ಕಿ-ಹೊರ್ತಿ-ವಿಜಯಪುರ ಮೂಲಕ ಹಾದು ಹೋಗುವ ರಸ್ತೆ ದ್ವಿಪಥವಾಗಿದ್ದು ವಾಹನ ಸಂಚಾರಕ್ಕೆ ಇಕ್ಕಟ್ಟಾಗಿದೆ.
ಬೆಂಗಳೂರು-ಚಿತ್ರದುರ್ಗ-ಬಿಜಾಪುರ-ಸೊಲ್ಲಾಪುರ - ಔರಂಗದಾಬಾದ್-ಧುಲೆ-ಇಂದೋರ್-ಗ್ವಾಲಿಯರ್ ಹೆದ್ದಾರಿಯ ಭಾಗ ಇದಾಗಿದೆ. ಈ ಹೆದ್ದಾರಿ ಮೇಲ್ದರ್ಜೆಯಲ್ಲಿ ಒಟ್ಟು 6 ಫ್ಲೈಓವರ್ ಗಳೂ ಬರಲಿದ್ದು ಪ್ರಯಾಣದ ಅವಧಿಯಲ್ಲಿ ದೊಡ್ಡ ಮಟ್ಟಕ್ಕೆ ಇಳಿಕೆಯಾಗಲಿದೆ.
ಬಿಜಾಪುರ, ಚಿತ್ರದುರ್ಗ, ಹಂಪಿಯಂಥ ಪ್ರಮುಖ ಪ್ರವಾಸಿ ಸ್ಥಳಗಳನ್ನು ಸಂಪರ್ಕಿಸಲೂ ಇದು ಸಹಾಯಕವಾಗಲಿದೆ. ಸೋಲ್ಲಾಪುರದ ಬಟ್ಟೆ ಉದ್ಯಮಕ್ಕೂ ಇದು ಸಹಕಾರಿಯಾಗಲಿದೆ.