ಅರ್ಚಕರ ತಸ್ತಿಕ್ ಹಣ: ಜಿಲ್ಲಾಧಿಕಾರಿ ಕೊಟ್ಟರೂ, ತಹಶೀಲ್ದಾರ್ ಕೊಡಬೇಕಲ್ಲಾ..
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ 'ಸಿ' ದರ್ಜೆಯ ದೇವಾಲಯಗಳು ಒಟ್ಟು 227.
ಈ ದೇವಾಲಯಗಳ ನಿರ್ವಹಣೆಗಾಗಿ ಸಂಬಂಧಪಟ್ಟ ದೇವಾಲಯದ ಅರ್ಚಕರಿಗೆ ಮುಜರಾಯಿ ಇಲಾಖೆ ತಸ್ತಿಕ್ ಹಣ ನೀಡುತ್ತಿದ್ದು, ಈ ವಾರ್ಷಿಕ ತಸ್ತಿಕ್ ಹಣ ಡಿಸಿ ಕಚೇರಿಯಿಂದ ಸಂಪೂರ್ಣವಾಗಿ ತಾಲೂಕು ಕಚೇರಿಗೆ ಬರುತ್ತದೆ.
ಈ ಹಣ ಮೂರು ಕಂತುಗಳಲ್ಲಿ ತಾಲೂಕು ಕಚೇರಿಯಿಂದ ಅರ್ಚಕರಿಗೆ ಬಿಡುಗಡೆಯಾಗಬೇಕಾಗಿರುವುದು ಸದ್ಯ ನಡೆದುಕೊಂಡು ಬರಬೇಕಾಗಿರುವ ಪದ್ದತಿ.[ಬೆಂಗಳೂರು ಕರಗಕ್ಕೆ ಸಾಕ್ಷಿಯಾದ ಲಕ್ಷಾಂತರ ಭಕ್ತರು]
ಮೊದಲು ಶೇ.50% ಮತ್ತು ಉಳಿದ ಶೇ.50%ನ್ನು ಎರಡು ಕಂತುಗಳಲ್ಲಿ ತಾಲೂಕು ಕಚೇರಿಯಿಂದ ಬಿಡುಗಡೆಯಾಗುತ್ತದೆ. ಇದರಂತೆ, ಸಿ ದರ್ಜೆಯ ಎಲ್ಲಾ 227 ದೇವಾಲಯಗಳಿಗೆ ತಸ್ತಿಕ್ ಹಣ ದಿನಾಂಕ 28/10/2015ರಂದು ಸಂಪೂರ್ಣ ಮೊತ್ತ ಜಿಲ್ಲಾಧಿಕಾರಿ ಕಚೇರಿಯಿಂದ ತಾಲೂಕು ಕಚೇರಿಗೆ ರವಾನೆಯಾಗಿದೆ.
ಆದರೆ, ಡಿಸಿ ಕಚೇರಿಯಿಂದ ಹಣ ಬಿಡುಗಡೆಯಾಗಿದ್ದರೂ ತಾಲೂಕು ಕಚೇರಿ 25.01.2016ರಂದು ಕೇವಲ 82 ದೇವಾಲಯಗಳಿಗೆ, ಮತ್ತು 11.03.2016 ರಂದು 30 ದೇವಾಲಯಗಳಿಗೆ ಮೊದಲ ಕಂತು ಬಿಡುಗಡೆಮಾಡಿದೆ.[ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾಟಲಿ ತೀರ್ಥಕ್ಕೂ ನೀರಿಲ್ಲ !]
ಅಕ್ಟೋಬರ್ ತಿಂಗಳಲ್ಲಿ ಡಿಸಿ ಕಚೇರಿಯಿಂದ ಬಿಡುಗಡೆಯಾದ ಹಣ ಏಪ್ರಿಲ್ ತಿಂಗಳು ಮುಗಿಯುತ್ತಾ ಬಂದರೂ ತಾಲೂಕು ಕಚೇರಿ ಕೇವಲ 112 ದೇವಾಲಯಗಳಿಗೆ ಮಾತ್ರ ತಸ್ತಿಕ್ ಹಣ ಬಿಡುಗಡೆ ಮಾಡಿ ಉಳಿದ ದೇವಾಲಯಗಳಿಗೆ ನಯಾಪೈಸೆ ಬಿಡುಗಡೆ ಮಾಡದೇ ಬಾಕಿ ಉಳಿಸಿಕೊಂಡಿದೆ.
ಜೊತೆಗೆ, ಎರಡನೇ ಮತ್ತು ಮೂರನೇ ಕಂತಿನ ಹಣವನ್ನು ಯಾವ ದೇವಾಲಯಗಳಿಗೂ ಇದುವರೆಗೆ ಬಿಡುಗಡೆ ಮಾಡಿಲ್ಲ. ದೇವಾಲಯಗಳಿಗೆ ಸಂಬಂಧಿಸಿದಂತೆ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಸುತ್ತೋಲೆ ಎ.ಡಿ.ಎಂ.2/ಐ.ಎಸ್.ಎ./ಸಿ.ಆರ್.01/14-15 ರಂತೆ ರಾಜಸ್ವ ನಿರೀಕ್ಷಕರು ವಾರ್ಷಿಕವಾಗಿ ಒಂದು ಬಾರಿ ಮಾತ್ರ ಇಡೀ ಹೋಬಳಿಗೆ ಒಂದೇ ಪಟ್ಟಿಯಲ್ಲಿ ದೃಢೀಕರಿಸಿ ಮನವಿ ಸಲ್ಲಿಸಲು ಅವಕಾಶವಿರುತ್ತದೆ.
ಒಂದು ವರ್ಷದಲ್ಲಿ ತಸ್ತಿಕ್ /ವರ್ಷಾಸನ ಸಾಮಾನ್ಯವಾಗಿ 3 ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, 2015-16ನೇ ಸಾಲಿನ ಆರ್ಥಿಕ ವರ್ಷದಿಂದ ಯಾವುದೇ ಕಾರಣಕ್ಕೆ ಚೆಕ್ ಮೂಲಕ ಹಣ ವಿತರಣೆ ಯಾಗದಂತೆ ಉಪವಿಭಾಗಾಧಿಕಾರಿಗಳು ಕ್ರಮವಹಿಸಲು ಆಯುಕ್ತರು ಸೂಚಿಸಿದ್ದಾರೆ.[ನೋಡ ಬನ್ನಿ: ಬೆಂಗಳೂರು ಕರಗ ಎಷ್ಟೊಂದು ಸುಂದರ!]
ಅರ್ಚಕರ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕವೇ ಹಣ ಜಮೆ ಮಾಡಬೇಕೆಂದು ಸುತ್ತೋಲೆ ನೀಡಿದ್ದಾರೂ ಸಹ ಗ್ರಾಮಾಂತರ ದೇವಾಲಯಗಳ ಅರ್ಚಕರಿಗೆ ಉದ್ದೇಶ ಪೂರ್ವಕವಾಗಿ ತಾಲೂಕು ಕಛೇರಿಯ ತಹಶೀಲ್ದಾರ್ ಅರ್ಚಕರ ಜೊತೆಗೆ ದೇವಾಲಯಗಳನ್ನೂ ಕಡೆಗಣಿಸುತ್ತಿದ್ದಾರೆ.
ಅರ್ಚಕರು ತಾಲೂಕು ಕಚೇರಿಯ ಅಧಿಕಾರಿಗಳ 'ಕೈ'ಬಿಸಿ ಮಾಡಿದರೆ ಮಾತ್ರ ತಸ್ತಿಕ್ ಹಣ ಬಿಡುಗಡೆಯಾಗುತ್ತಿದೆ ಎನ್ನುವುದು ಸದ್ಯ ಕೇಳಿ ಬರುತ್ತಿರುವ ಆರೋಪ.
ಕಚೇರಿ ಸಿಬ್ಬಂದಿ ತಹಶೀಲ್ದಾರ್ ಮಾತಗಳನ್ನು ಕೇಳುತ್ತಿಲ್ಲ. ಧಾರ್ಮಿಕ ದತ್ತಿ ಆಯುಕ್ತರು, ತಾಲ್ಲೂಕು ಕಚೇರಿಗಳ ಕಡೆ ಗಮನಹರಿಸಿ ಅರ್ಚಕರಿಗೆ ತಸ್ತಿಕ್ ಹಣ ಬಿಡುಗಡೆ ಮಾಡಬೇಕೆಂದು ಅರ್ಚಕರು ಒತ್ತಾಯ ಪಡಿಸುತ್ತಿದ್ದಾರೆ.