ಕಾಂಗ್ರೆಸ್-ಬಿಜೆಪಿ ಉಪಚುನಾವಣೆ ಅಬ್ಬರ ಪ್ರಚಾರದ ಅಸಲಿಯತ್ತು ಏನು?
ಉಪಚುನಾವಣೆಗಳಿಗೆ ಪ್ರಾಶಸ್ತ್ಯ ಇರುವುದು ಕಡಿಮೆ. ಆದರೆ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಹಟಕ್ಕೆ ಬಿದ್ದಂತೆ ಅಬ್ಬರದ ಪ್ರಚಾರ ನಡೆಸುತ್ತಿವೆ. ಇದಕ್ಕೆ ಕಾರಣ ಏನು ಎಂಬುದರ ವಿಶ್ಲೇಷಣೆ ಇಲ್ಲಿದೆ
ಕರ್ನಾಟಕ ಇತ್ತೀಚಿನ ವರ್ಷಗಳಲ್ಲಿ ಕಂಡ ಪ್ರತಿಷ್ಠಿತ ಹಣಾಹಣಿ ಆಗಿದೆ ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆ. ಇನ್ನೇನು ಮತದಾನಕ್ಕೆ ಎರಡು ದಿನ (ಏಪ್ರಿಲ್ 9) ಬಾಕಿ ಇದೆ. ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ತಂತಮ್ಮ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸುತ್ತಿವೆ. ಇದು ಸ್ಥಾನಕ್ಕಾಗಿ ನಡೆಯುತ್ತಿರುವ ಜಿದ್ದಾಜಿದ್ದಿ ಖಂಡಿತಾ ಅಲ್ಲ.
ಕಾಂಗ್ರೆಸ್ ನಲ್ಲಿ ನಾಯಕತ್ವದ ವಿಚಾರವಾಗಿ ಸಂಘರ್ಷ ಉದ್ಭವಿಸಿದೆ. ಈ ಚುನಾವಣೆಯು ಎಲ್ಲರೂ ಒಗ್ಗೂಡಿ ನಡೆಯುವುದಕ್ಕೆ ಒಂದು ಅವಕಾಶದಂತೆ. ಇನ್ನು ಬಿಜೆಪಿ ಪಾಲಿಗೆ ಇದು ಪ್ರತಿಷ್ಠೆಯ ಪ್ರಶ್ನೆ. ಅದರಲ್ಲೂ ಯಡಿಯೂರಪ್ಪನವರ ಪಾಲಿಗಂತೂ ಈ ಚುನಾವಣೆ ಪ್ರತಿಷ್ಠೆ ಹೌದು. ಈ ಉಪ ಚುನಾವಣೆ ಯಾರ ಪಾಲಿಗೆ ಏನು ಎಂಬುದು ಬಹಳ ಮುಖ್ಯ.[ಗುಂಡ್ಲುಪೇಟೆ ಈ ಬಡಾವಣೇಲಿ ಶೌಚಾಲಯವೇ ಇಲ್ಲ, ಇದೇನಾ ಅಭಿವೃದ್ಧಿ?]
ಆದ್ದರಿಂದ ಎಲ್ಲರ ಮನಸಿನಲ್ಲಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸಿದ್ದೇವೆ. ಜನರ ಸಮಸ್ಯೆ, ಕ್ಷೇತ್ರದ ಬೇಕುಗಳೇನು ಎಂಬುದು ಸಾಮಾನ್ಯವಾಗಿ ಉಪ ಚುನಾವಣೆಗಳ ವಿಷಯವಾಗುವುದಿಲ್ಲ. ಇಲ್ಲೂ ಕೂಡ ಒಂದು ಕಡೆ ಸ್ವಾಭಿಮಾನ ಮತ್ತೊಂದು ಕಡೆ ಅನುಕಂಪದ ಆಧಾರದಲ್ಲಿ ಮತ ಯಾಚನೆ ನಡೆಯುತ್ತಿದೆ.
ಈ ಉಪ ಚುನಾವಣೆ ಬಿಜೆಪಿಗೆ ಏಕೆ ಮುಖ್ಯ?
ಕಾಂಗ್ರೆಸ್ ನಂತೆಯೇ ಬಿಜೆಪಿಗೂ ಗೊತ್ತು, ಈ ಉಪ ಚುನಾವಣೆ ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯಲ್ಲ. ಆದರೆ ಕಾಂಗ್ರೆಸ್ ಭದ್ರಕೋಟೆ ಎನಿಸಿದ ಈ ಭಾಗದಲ್ಲಿ ಜನರ ಮನಸಿನಲ್ಲಿ ಬಿಜೆಪಿ ಬಗ್ಗೆ ಎಂಥ ಅಭಿಪ್ರಾಯ ಇದೆ ಎಂದು ತಿಳಿದುಕೊಳ್ಳಲು ಇದು ಅವಕಾಶ.
ಗೆಲುವು ಯಡಿಯೂರಪ್ಪಗೆ ಅನಿವಾರ್ಯ
ಇನ್ನು ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಎದುರಾದ ಮೊದಲ ಚುನಾವಣೆ ಇದು. ಆದ್ದರಿಂದ ಎರಡೂ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪರವಾಗಿ ಭಾರೀ ಬಿರುಸಿನ ಪ್ರಚಾರ ನಡೆಸಿದ್ದಾರೆ. ನಿರಂಜನ್ ಕುಮಾರ್, ಶ್ರೀನಿವಾಸ್ ಪ್ರಸಾದ್ ಇಬ್ಬರೂ ಯಡಿಯೂರಪ್ಪನವರ ವೈಯಕ್ತಿಕ ಆಯ್ಕೆ. ಆದ್ದರಿಂದ ಎರಡೂ ಕಡೆ ಗೆಲುವು ಸಾಧಿಸುವುದು ಯಡಿಯೂರಪ್ಪನವರಿಗೆ ಅನಿವಾರ್ಯವಾಗಿದೆ.
ಶ್ರೀನಿವಾಸ್ ಪ್ರಸಾದ್ ಗಿಂತ ಬಿರುಸು
ಮುಖ್ಯಮಂತ್ರಿ ಆಗಬೇಕು ಎಂಬ ಆಕಾಂಕ್ಷೆ ಇರುವ ಯಡಿಯೂರಪ್ಪನವರ ಮೇಲೆ ಉಪಚುನಾವಣೆ ಫಲಿತಾಂಶ ನೇರ ಪರಿಣಾಮ ಬೀರುತ್ತದೆ. ಈ ಕಾರಣಕ್ಕೆ ಬಿಎಸ್ ವೈ ತಾವೇ ಪ್ರಚಾರದ ಮುನ್ನೆಲೆಯಲ್ಲಿದ್ದಾರೆ. ಶ್ರೀನಿವಾಸ್ ಪ್ರಸಾದ್ ಅವರು ಅಭ್ಯರ್ಥಿಯಾಗಿ ತಾವೇ ಯಡಿಯೂರಪ್ಪನವರಷ್ಟು ಬಿರುಸಾಗಿ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ.
ಸಾಮರ್ಥ್ಯ ಸಾಬೀತಿಗೆ ಅವಕಾಶ
ಎಲ್ಲೆಲ್ಲೂ ಬಿಎಸ್ ವೈ ಕಾಣಿಸಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪ ಅವರ ವಯಸ್ಸು ಕಾರಣಕ್ಕೆ ಮುಖ್ಯಮಂತ್ರಿ ಮಾಡುವುದಿಲ್ಲವೇನೋ ಎಂಬ ಪ್ರಶ್ನೆ ಇರುವವರಿಗೆ ಈ ಚುನಾವಣೆಯಲ್ಲಿ ಗೆದ್ದು ತಾವೇನು ಎಂದು ಯಡಿಯೂರಪ್ಪ ತೋರಿಸಬೇಕಿದೆ. ತಮ್ಮ ವಿರೋಧಿಗಳ ಬಳಿ ಸಾಮರ್ಥ್ಯ ಸಾಬೀತು ಮಾಡಬೇಕಿರುವ ಯಡಿಯೂರಪ್ಪ ಅವರಿಗೆ ಚುನಾವಣೆ ಗೆಲುವು ಬಹಳ ಮುಖ್ಯವಾಗಿದೆ.
ಕಾಂಗ್ರೆಸ್ ಒಡೆದ ಮನೆ
ಎರಡೂ ಕ್ಷೇತ್ರದಲ್ಲಿ ಬಿಜೆಪಿಗಿಂತ ತಡವಾಗಿ ಕಾಂಗ್ರೆಸ್ ಪ್ರಚಾರ ಆರಂಭಿಸಿತು. ಈ ಮಧ್ಯೆ ನಾಯಕತ್ವದ ಸಂಘರ್ಷದಿಂದ ಕಾಂಗ್ರೆಸ್ ಒಡೆದ ಮನೆಯಾಗಿದೆ. ಉತ್ತರಪ್ರದೇಶದ ಸೋಲನ್ನು ಬಿಡಿ, ಕಾಂಗ್ರೆಸ್ ಗೆ ಮಣಿಪುರ, ಗೋವಾದಲ್ಲಿ ಅಧಿಕಾರ ಹಿಡಿಯುವ ಸಾಧ್ಯತೆ ಇತ್ತು. ಆದರೆ ಕೈಯಾರೆ ಬಿಟ್ಟುಕೊಟ್ಟಿದ್ದು ಕರ್ನಾಟಕದ ಕಾಂಗ್ರೆಸ್ ನಾಯಕರು, ಮುಖಂಡರಿಗೂ ಸಿಟ್ಟು ತರಿಸಿದೆ.
ಎರಡೂ ಕಡೆ ಗೆದ್ದರೆ ಮತ್ತೆ ಆತ್ಮವಿಶ್ವಾಸ
ರಾಜ್ಯಗಳ ಉಸ್ತುವಾರಿ ನೋಡಿಕೊಳ್ಳುತ್ತಿರುವವರನ್ನು ಬದಲಿಸಬೇಕು ಎಂದು ರಾಜ್ಯದಿಂದ ಹಲವು ಬಾರಿ ನಿಯೋಗ ಹೋಗಿಬರಲಾಗಿದೆ. ಪಕ್ಷವು 2018ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಬೇಕೆಂದರೆ ನಾಯಕತ್ವದಲ್ಲಿ ಬದಲಾವಣೆ ಆಗಬೇಕು ಎಂದು ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಒಂದು ವೇಳೆ ಎರಡೂ ಕಡೆ ಗೆದ್ದರೆ ಕಾರ್ಯಕರ್ತರಲ್ಲಿ ನಾಯಕತ್ವದ ಮತ್ತೆ ಆತ್ಮವಿಶ್ವಾಸ ಮೂಡಿಸಲು ಸಾಧ್ಯವಾಗುತ್ತದೆ.
ಭಿನ್ನಾಭಿಪ್ರಾಯ ಪಕ್ಕಕ್ಕಿಟ್ಟು ಒಗ್ಗಟ್ಟಾಗಿರಿ
ಕಾಂಗ್ರೆಸ್ ಉಪಚುನಾವಣೆಯ ಪ್ರಚಾರಕ್ಕೆ ಹೊರಟಾಗ ಕಾರ್ಯಕರ್ತರಿಗೆ ಹೇಳಿದ್ದು ಅದನ್ನೇ. "ನಿಮ್ಮ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಟ್ಟು, ಉಪ ಚುನಾವಣೆ ಮುಗಿಯುವವರೆಗೆ ಒಗ್ಗಟ್ಟಿನಿಂದಿರಿ. ಉಪಚುನಾವಣೆ ನಂತರ ನಾಯಕತ್ವದಲ್ಲಿ ಬದಲಾವಣೆ ಮಾಡಲಾಗುವುದು" ಎಂಬ ಒಪ್ಪಂದವಾಗಿದೆ.
ಉಲ್ಟಾ ಹೊಡೆದರೆ ಮುಂದೇನು?
ಸದ್ಯಕ್ಕೇನೋ ಉಪ ಚುನಾವಣೆ ಕಾಂಗ್ರೆಸ್ ನಾಯಕರನ್ನು ಒಗ್ಗೂಡಿಸುವಲ್ಲಿ ಸಫಲವಾಗಿದೆ. ಆದರೆ ಚುನಾವಣೆ ಉಲ್ಟಾ ಹೊಡೆದರೆ ಇದೇ ಪರಿಸ್ಥಿತಿ ಇರುತ್ತದೆ ಎಂಬ ಯಾವ ನಂಬಿಕೆಯೂ ಇಲ್ಲ. ಈ ಉಪ ಚುನಾವಣೆ ಫಲಿತಾಂಶ ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀರದಿರಬಹುದು. ಆದರೆ ಈ ಫಲಿತಾಂಶದಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಕಳೆದುಕೊಳ್ಳುವುದಕ್ಕೆ ಸಾಕಷ್ಟು ಇವೆ.