ಸಾಲಮನ್ನಾಗೆ ನಾಯಕರ ಸ್ವಾಗತ, ಕೇಂದ್ರದ ಮೇಲೆ ಹೆಚ್ಚಿದ ಒತ್ತಡ
ಬೆಂಗಳೂರು, ಜೂನ್ 21: ರಾಜ್ಯದ ಸಿದ್ದರಾಮಯ್ಯ ಸರಕಾರ ರೈತರ ಸಾಲ ಮನ್ನಾ ಘೋಷಣೆಯನ್ನು ವಿಪಕ್ಷ ಬಿಜೆಪಿ, ಜೆಡಿಎಸ್ ಹಾಗೂ ರೈತ ಮುಖಂಡರು ಸ್ವಾಗತಿಸಿದ್ದಾರೆ. ಬೆನ್ನಿಗೆ ಇದೀಗ ಕೇಂದ್ರ ಸರಕಾರದ ಮೇಲೆ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.
ಸಾಲ ಮನ್ನಾ ಘೋಷಣೆ ಬೆನ್ನಿಗೆ ಹೇಳಿಕೆ ನೀಡಿರುವ ಜಾತ್ಯಾತೀತ ಜನತಾ ದಳ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕೇಂದ್ರವೂ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದ್ದಾರೆ.
ಸಿದ್ದು ಪಟ್ಟಿಗೆ ಸಿಕ್ಕು ಕರ್ನಾಟಕದಲ್ಲಿ ವಿಲವಿಲ ಎನ್ನಲಿದೆಯಾ ಬಿಜೆಪಿ?
ಇದೇ ವೇಳೆ ರೈತಸಂಘದ ಪುಟ್ಟಣ್ಣಯ್ಯ, ಜೆಡಿಎಸ್ ನಾಯಕ ಕೋನ ರೆಡ್ಡಿ ಕೇಂದ್ರ ಸರಕಾರ ಕಾರ್ಪೊರೇಟ್ ಸಂಸ್ಥೆಗಳ ಸಾಲ ಮನ್ನಾ ಮಾಡುತ್ತೆ ಆದರೆ ರೈತರ ಸಾಲ ಮನ್ನಾ ಮಾಡದಿದ್ದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, "ರಾಜ್ಯದ ರೈತರ ಪರವಾಗಿ ಬರವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿಗಳು ಸಾಲ ಮನ್ನಾ ಮಾಡುವಂತೆ ಒತ್ತಾಯಿಸುತ್ತೇನೆ," ಎಂದು ಹೇಳಿದ್ದಾರೆ. ಈ ಮೂಲಕ ಸಾಲ ಮನ್ನಾದ ಚೆಂಡನ್ನು ಕೇಂದ್ರ ಸರಕಾರದ ಅಂಗಳಕ್ಕೆ ತಳ್ಳಿದ್ದಾರೆ.
ರೈತ ಮುಖಂಡರ ಜತೆ ಚರ್ಚಿಸಿ ಮುಂದಿನ ತೀರ್ಮಾನ
ರಾಜ್ಯ ಸರಕಾರದ "ಸಾಲ ಮನ್ನಾದಿಂದ ಕೆಲವಷ್ಟು ರೈತರಿಗೆ ಸಹಾಯವಾಗಿದೆ. ಇಂದು ಸಂಜೆ ರೈತ ಮುಖಂಡರ ಜತೆ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ. ಕೇಂದ್ರ ಸರಕಾರ ಕಾರ್ಪೊರೇಟ್ ಸಂಸ್ಥೆಗಳ ಸಾಲ ಮನ್ನಾ ಮಾಡುತ್ತೆ. ಆದರೆ ರೈತರ ಸಾಲ ಮನ್ನಾ ಮಾಡದಿದ್ದರೆ ಹೇಗೆ?" ಎಂದು ರಾಜ್ಯ ರೈತ ಸಂಘದ ಕೆ.ಎಸ್ ಪುಟ್ಟಣ್ಣಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಹೊರೆ ಉಳಿಸಿ ಹೋಗುವುದು ಬೇಡ – ಶೆಟ್ಟರ್
ಸಿದ್ದರಾಮಯ್ಯ ಸರಕಾರದ ಸಾಲ ಮನ್ನಾಕ್ಕೆ ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, "ಮುಂದಿನ ಸರಕಾರಕ್ಕೆ ಹೊರೆ ಉಳಿಸಿ ಹೋಗುವುದು ಬೇಡ. ಈ ಸರಕಾರದ ಅವಧಿಯಲ್ಲೇ ಬ್ಯಾಂಕುಗಳಿಗೆ ಹಣ ಪಾವತಿಸಲಿ," ಎಂದು ಹೇಳಿದ್ದಾರೆ.
"ರಾಜ್ಯದಲ್ಲಿ ಅತೀ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಈ ಹಿನ್ನಲೆಯಲ್ಲಿ ನಾವು ಸಾಲ ಮನ್ನಾಕ್ಕೆ ಒತ್ತಾಯಿಸಿದ್ದೆವು. ರೈತರ ಸಾಲ ಮನ್ನಾ ನಿರ್ಧಾರ ತೆಗೆದುಕೊಂಡಿರುವುದ ಸ್ವಾಗತಾರ್ಹ. ಆದರೆ ಇದಕ್ಕಾಗಿ ಸರಕಾರ ಹಿಗ್ಗುವ ಅಗತ್ಯವಿಲ್ಲ. ನಾವು ಸಾಲ ಮನ್ನಾಕ್ಕೆ ಒತ್ತಾಯಿಸಿದ್ದೆವು. ನಮ್ಮ ಒತ್ತಾಯಗಳಿಗೆ ಸಿದ್ದರಾಮಯ್ಯ ಮಣಿದಿದ್ದಾರೆ," ಎಂದು ಅವರು ಹೇಳಿದ್ದಾರೆ.
ಕೇಂದ್ರವೂ ಸಾಲ ಮನ್ನಾ ಮಾಡಲಿ - ಕುಮಾರಸ್ವಾಮಿ
ಇದೇ ವೇಳೆ ಸಾಲ ಮನ್ನಾ ನಿರ್ಧಾರ ಸ್ವಾಗತಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ, ಕೇಂದ್ರವೂ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, "ರೈತರ ಸಾಲಮನ್ನಾ ಸ್ವಾಗತಾರ್ಹ. ಆದರೆ ಬೇರೆ ಬೇರೆ ರಾಜ್ಯಗಳಲ್ಲಿ 1-2 ಲಕ್ಷವರೆಗಿನ ಸಾಲ ಮನ್ನಾ ಮಾಡಿದ್ದರೆ ನಮ್ಮಲ್ಲಿ ಕೇವಲ 50,000 ರೂಪಾಯಿವರೆಗಿನ ಸಾಲ ಮಾತ್ರ ಮನ್ನಾ ಮಾಡಲಾಗಿದೆ. ಸರಕಾರ ಸಾಲ ಮನ್ನಾದ ಮಿತಿ ಹೆಚ್ಚಿಸಲಿ," ಎಂದಿದ್ದಾರೆ. ಕರ್ನಾಟದಲ್ಲಿ ಸಹಕಾರಿ ಬ್ಯಾಂಕುಗಳ ಸಾಲ ಮಾತ್ರ ಮನ್ನಾ ಮಾಡಲಾಗಿದೆ. ಕೇಂದ್ರ ಸರಕಾರವೂ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.
ಬೆನ್ನು ತಟ್ಟಿಕೊಳ್ಳುವ ಅಗತ್ಯವಿಲ್ಲ
"ಸರಕಾರದ ಸಾಲಮನ್ನಾ ಸ್ವಾಗತಾರ್ಹ. ಆದರೆ ಇದಕ್ಕೆ ಸರಕಾರ ಬೆನ್ನು ತಟ್ಟಿಕೊಳ್ಳುವ ಅಗತ್ಯವಿಲ್ಲ. ಸಾಲ ಮನ್ನಾಕ್ಕೆ ನಾವೂ ಒತ್ತಾಯಿಸಿದ್ದೆವು. ಈಗ ಕೇಂದ್ರ ಸರಕಾರ ಸಾಲ ಮನ್ನಾ ಮಾಡಲಿ," ಎಂಬುದು ಜೆಡಿಎಸ್ ನಾಯಕ ಎನ್.ಎಚ್ ಕೋನರೆಡ್ಡಿ ಹೇಳಿಕೆ. ಈ ಕುರಿತು ಬಿಜೆಪಿಗೆ ಹೆಚ್ಚಿನ ಜವಾಬ್ದಾರಿ ಇದೆ. ಬಿಜೆಪಿ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಬೇಕು. ಈ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳೂ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
|
'ನೀವು ಸಾಲ ಮನ್ನಾ ಮಾಡಿ' ಕೇಂದ್ರಕ್ಕೆ ಸಿಎಂ ಒತ್ತಾಯ
ಸಾಲ ಮನ್ನಾ ಘೋಷಣೆ ಬೆನ್ನಿಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ , "ರಾಜ್ಯ ಸರ್ಕಾರವು ಸಹಕಾರ ಸಂಸ್ಥೆಗಳಿಂದ ಪಡೆದ ಸಾಲಮನ್ನಾ ಮಾಡಿರುವುದರಿಂದ ವಾಣಿಜ್ಯ ಬ್ಯಾಂಕುಗಳಿಂದ ಪಡೆದ ಸಾಲವನ್ನು ಕೇಂದ್ರ ಮನ್ನಾ ಮಾಡಲಿ. ರಾಜ್ಯದ ರೈತರ ಪರವಾಗಿ ಬರವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿಗಳು ಸಾಲ ಮನ್ನಾ ಮಾಡಬೇಕು," ಎಂದು ಟ್ವೀಟ್ ಮಾಡಿದ್ದಾರೆ.