ನೆಗೆದುಬಿದ್ದು ನೆಲ್ಲಿಕಾಯಿಯಾದ ಕರ್ನಾಟಕ ಗುಪ್ತಚರ ವರದಿ
ಚುನಾವಣೆ ನಂತರ ಕರ್ನಾಟಕ ಗುಪ್ತಚರ ಇಲಾಖೆಯ ವರದಿ ಸಿದ್ದರಾಮಯ್ಯ ಅವರಿಗೆ ಬೆವರು ಬರುವಂತೆ ಮಾಡಿತ್ತು. ಇದೀಗ ಎಲ್ಲ ಉಲ್ಟಾಪುಲ್ಟಾ ಆಗಿದ್ದು ಗುಪ್ತಚರ ವರದಿ ನೆಗೆದುಬಿದ್ದ ನೆಲ್ಲಿಕಾಯಿ ಆಗಿದೆ.
ಬೆಂಗಳೂರು, ಏಪ್ರಿಲ್ 13 : ಜನವರಿ ಫೆಬ್ರವರಿಯಲ್ಲಿ ನಡೆದಿದ್ದ 5 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಭಾರೀ ಕಲರವ ಎಬ್ಬಿಸಿದ್ದವು. ಹೆಚ್ಚೂಕಡಿಮೆ ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಶರಾ ಬರೆದಿದ್ದವು.
ಆದರೆ, ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ನಡೆದ ಉಪಚುನಾವಣೆಯ ನಂತರ ನಡೆಸಿದ ಹರಿಯಬಿಡಲಾಗಿದ್ದ 'ಗುಪ್ತಚರ' ಮಾಹಿತಿ ಸಂಪೂರ್ಣ ಉಲ್ಟಾಪುಲ್ಟಾ ಆಗಿದೆ. ಎರಡೂ ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ ಜಯಭೇರಿ ಬಾರಿಸುತ್ತದೆಂದು ಗುಪ್ತಚರ ಮಾಹಿತಿ ಹೇಳಿತ್ತು. ಆದರೆ ಆಗಿದ್ದೇನು? ಎರಡೂ ಕಡೆ ಬಿಜೆಪಿ ಮಕಾಡೆ ಮಲಗಿದೆ.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ: ಗುಪ್ತಚರ ವರದಿ]
ಏಪ್ರಿಲ್ 11ರಂದು ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ಮತದಾನ ನಡೆದಿತ್ತು. ಎರಡೂ ಕ್ಷೇತ್ರಗಳಲ್ಲಿ ಶೇ.75ರಷ್ಟು ಮತದಾನವಾಗಿತ್ತು. ನಂತರ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯ ವರದಿ ಸಿದ್ದರಾಮಯ್ಯ ಅವರ ಕಚೇರಿಯನ್ನು ತಲುಪಿತ್ತು ಮತ್ತು ಅವರಿಗೆ ಬೆವರು ಬರುವಂತೆ ಮಾಡಿತ್ತು.[ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ LIVE]
ಇದೀಗ ಆ ಗುಪ್ತಚರ ಇಲಾಖೆಯ ವರದಿ ಸಂಪೂರ್ಣ ತಲೆಕೆಳಗಾಗಿದ್ದು, ಕಾಂಗ್ರೆಸ್ ಎರಡೂ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ನಂಜನಗೂಡಿನಲ್ಲಿ ಸತತವಾಗಿ ಸೋಲುಣ್ಣುತ್ತಿದ್ದ ಕಳಲೆ ಕೇಶವಮೂರ್ತಿ ಅವರು ಸತತವಾಗಿ ಗೆಲ್ಲುತ್ತಿದ್ದ ವಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಮಣ್ಣುಮುಕ್ಕಿಸಿದ್ದಾರೆ. ಇನ್ನು, ಗುಂಡ್ಲುಪೇಟೆಯಲ್ಲಿ ಮೊದಲ ಬಾರಿ ಕಣಕ್ಕಳಿಸಿದ್ದ ಗೀತಾ ಮಹದೇವ್ ಪ್ರಸಾದ್ ಅವರು ಬಿಜೆಪಿಯ ನಿರಂಜನ್ ಅವರಿಗೆ ಹ್ಯಾಟ್ರಿಕ್ ಸೋಲು ಕಾಣಿಸಿದ್ದಾರೆ.
ದಲಿತರ ಮತಗಳೂ ಬಿಜೆಪಿಗೆ ಕೈಕೊಟ್ಟಿವೆ
ಎಸ್ಸಿ ಮೀಸಲು ಕ್ಷೇತ್ರವಾಗಿರುವ ನಂಜನಗೂಡು ವಿಧಾನಸಭೆ ಕ್ಷೇತ್ರದಲ್ಲಿ ದಲಿತರ ನಾಯಕ ವಿ ಶ್ರೀನಿವಾಸ್ ಪ್ರಸಾದ್ ಅವರ ಗೆಲುವು ನಿಶ್ಚಿತ ಎಂದು ಗುಪ್ತಚರ ಇಲಾಖೆ ಗುಪ್ತವಾಗಿಯೇ ಮಾಹಿತಿಯನ್ನು ಸರಕಾರಕ್ಕೆ ರವಾನಿಸಿತ್ತು. ಆದರೆ, ಶ್ರೀನಿವಾಸ್ ಪ್ರಸಾದ್ ಅವರು ಗಳಿಸಿರುವ ಮತಗಳನ್ನು ನೋಡಿದರೆ, ದಲಿತರು ಪ್ರಸಾದ್ ಅವರಿಗೆ ಕೈಕೊಟ್ಟಿರುವುದು ನಿಶ್ಚಿತ.
ಸತತ ಸೋಲುಂಡಿದ್ದ ಕಳಲೆ ಕೇಶವಮೂರ್ತಿ
ಶ್ರೀನಿವಾಸ್ ಪ್ರಸಾದ್ ಅಂದ್ರೆ ನಂಜನಗೂಡು, ನಂಜನಗೂಡು ಅಂದ್ರೆ ಶ್ರೀನಿವಾಸ್ ಪ್ರಸಾದ್. ಆ ವಿಧಾನಸಭಾ ಕ್ಷೇತ್ರದಲ್ಲಿ ಅವರ ಹೆಸರು ಅಷ್ಟು ಚಿರಪರಿಚಿತ. ಕಳಲೆ ಕೇಶವಮೂರ್ತಿ ಒಳ್ಳೆ ವರ್ಚಸ್ಸು ಗಳಿಸಿದ್ದರೂ ಚುನಾವಣೆಯಲ್ಲಿ ಸತತ ಸೋಲು ಕಂಡಿದ್ದರು. ಆದರೆ, ಜೆಡಿಎಸ್ ನಿಂದ ಕಾಂಗ್ರೆಸ್ ಸೇರಿದ್ದೇ ಸೇರಿದ್ದು ಅವರ ಹಣಬರಹ ಬದಲಾಗಿದೆ.[ಎರಡು ಬಾರಿ ಸೋತು ಗೆದ್ದ ಕಳಲೆ ಕೇಶವಮೂರ್ತಿ ಯಾರು?]
ಕಳಲೆ ಸೋಲುತ್ತಾರೆ ಎಂದಿತ್ತು ವರದಿ
ಬ್ರಹ್ಮಚಾರಿ ಕಳಲೆ ಎನ್ ಕೇಶವಮೂರ್ತಿ ಅವರು ಸುಮಾರು 3 ಸಾವಿರದಿಂದ 5 ಸಾವಿರ ಮತಗಳಿಂದ ಸೋಲುತ್ತಾರೆ ಎಂದಿದ್ದು ಗುಪ್ತಚರ ಇಲಾಖೆ. ಅದ್ಯಾವ ಆಧಾರದ ಮೇಲೆ ಈ ವರದಿ ಸಲ್ಲಿಸಿತ್ತೋ ಗುಪ್ತಚರ ಇಲಾಖೆ? ಈಗ ಅವರು 21 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಶ್ರೀನಿವಾಸ್ ಪ್ರಸಾದ್ ವಿರುದ್ಧ ಜಯಭೇರಿ ಬಾರಿಸಿದ್ದಾರೆ. ಈ ಮಟ್ಟದ ಅಂತರದಿಂದ ಗೆಲ್ಲುತ್ತಾರೆಂದು ಸಿದ್ದರಾಮಯ್ಯ ಕೂಡ ಊಹಿಸಿರಲಿಕ್ಕಿಲ್ಲ.[ನಂಜನಗೂಡಲ್ಲಿ ಕಾಂಗ್ರೆಸಿಗೆ ಭರ್ಜರಿ ಗೆಲುವು, ಮುಗ್ಗರಿಸಿದ ಬಿಜೆಪಿ]
ಹುಬ್ಬೇರಿಸುವಂತೆ ಮಾಡಿದ ಗೆಲುವಿನ ಅಂತರ
ಎರಡೂ ಕ್ಷೇತ್ರಗಳಲ್ಲಿ ತುರುಸಿನ ಸ್ಪರ್ಧೆ ಏರ್ಪಡಲಿದ್ದು, ಯಾವುದೇ ವ್ಯಕ್ತಿ ಗೆದ್ದರೂ ಅತ್ಯಂತ ಕಡಿಮೆ ಅಂತರದಿಂದ ಗೆಲ್ಲುತ್ತಾರೆ ಎಂದೂ ಗುಪ್ತಚರ ಇಲಾಖೆ ವರದಿ ನೀಡಿತ್ತು. ಈ ಮಾಹಿತಿ ಕೂಡ ತಲೆಕೆಳಗಾಗಿದೆ. ನಂಜನಗೂಡಿನಲ್ಲಿ ಕಳಲೆ ಕೇಶವಮೂರ್ತಿಯವರು 21 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರೆ, ಗುಂಡ್ಲುಪೇಟೆಯಲ್ಲಿ ಗೀತಾ ಮಹದೇವ್ ಪ್ರಸಾದ್ ಅವರು 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ.[ಉಪ ಚುನಾವಣೆ ಫಲಿತಾಂಶ: ಯಾರಿಗೆ ಲಾಭ? ಯಾರಿಗೆ ನಷ್ಟ?]
ಗುಪ್ತಚರ ವರದಿ ತಿರುವುಮುರುವಾಗಲು ಕಾರಣವೇನು
ಯಾವುದೇ ಚುನಾವಣೆಯಂತೆ ಈ ಚುನಾವಣೆಯಲ್ಲಿ ಕೂಡ ಕುರುಡು ಕಾಂಚಾಣ ನರ್ತಿಸಿದ್ದು ಸುಳ್ಳೇನಲ್ಲ. 'ಲಕ್ಷ್ಮೀ' ಕಟಾಕ್ಷದಿಂದ ಕಾಂಗ್ರೆಸ್ ಜಯ ಸಾಧಿಸಿದೆ ಎಂದು ಕೆಲ ಬಿಜೆಪಿ ನಾಯಕರು ಈಗಾಗಲೆ ಅಳಲು ತೋಡಿಕೊಳ್ಳಲು ಆರಂಭಿಸಿದ್ದಾರೆ. ಕೆಲ ದಿನಗಳ ಹಿಂದೆ ಗರಿಗರಿ ನೋಟುಗಳು ಮತದಾರರ ಕೈಸೇರುತ್ತಿರುವುದು ವಿಡಿಯೋದಲ್ಲಿ ಬಹಿರಂಗವಾಗಿತ್ತು. ಇದಕ್ಕೆ ಬಿಜೆಪಿ ತಗಾದೆ ಎತ್ತಿದ್ದರೂ ಪ್ರಯೋಜನವಾಗಿರಲಿಲ್ಲ.[ಎದುರಾಳಿ ಮುನ್ನಡೆ ಬಗ್ಗೆ ಶ್ರೀನಿವಾಸ್ ಪ್ರಸಾದ್ ಹೇಳಿದ್ದೇನು?]