ನರಗುಂದದಲ್ಲಿ ಬಿಎಸ್ ವೈ ಸಭೆ, ಮಹಾದಾಯಿ ಹೋರಾಟಗಾರರ ಎಚ್ಚರಿಕೆ!
ನರಗುಂದ, ಮೇ 23: ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮಂಗಳವಾರ ಗದಗ ಜಿಲ್ಲೆಯ ನರಗುಂದಕ್ಕೆ ಬರಲಿದ್ದು, ಜನ ಸಂಪರ್ಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಜೆ ಆರಕ್ಕೆ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಲಿದ್ದಾರೆ.
ಆದರೆ, ಯಡಿಯೂರಪ್ಪನವರು ಕಾರ್ಯಕ್ರಮಕ್ಕೆ ತೆರಳುವ ಮೊದಲು ಮಹಾದಾಯಿ ಧರಣಿ ವೇದಿಕೆಗೆ ಬಂದು, ಭೇಟಿ ನೀಡಲೇಬೇಕು. ಒಂದು ವೇಳೆ ಬರದಿದ್ದರೆ ಅವರ ಕಾರ್ಯಕ್ರಮವನ್ನೇ ಬಹಿಷ್ಕರಿಸುತ್ತೇವೆ ಎಂದು ರೈತ ಸೇನೆ ರಾಜ್ಯ ಉಪಾಧ್ಯಕ್ಷ ಶಂಕ್ರಣ್ಣ ಅಂಬಲಿ ಎಚ್ಚರಿಸಿದ್ದಾರೆ.
ಮಹಾದಾಯಿ ಹೋರಾಟಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸುತ್ತಿಲ್ಲ. ಬಿಜೆಪಿಯವರಿಂದಲೂ ಯಾವುದೇ ಪ್ರತಿಕ್ರಿಯೆ ಇಲ್ಲ. ನಮ್ಮ ಸಿಟ್ಟಿನ ಕಾರಣಕ್ಕೆ ಬಿಜೆಪಿ ಸಭೆಯಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸುವುದಕ್ಕೂ ನಾವು ಯೋಚಿಸುವುದಿಲ್ಲ. ಆದ್ದರಿಂದ ಯಡಿಯೂರಪ್ಪ ಧರಣಿ ಸ್ಥಳಕ್ಕೆ ಭೇಟಿ ನೀಡಬೇಕು, ನಮ್ಮ ಹೋರಾಟ ಬೆಂಬಲಿಸಬೇಕು ಎಂದಿದ್ದಾರೆ.
ಯಡಿಯೂರಪ್ಪನವರು ಈ ಹಿಂದೆಯೇ ಮಾತನಾಡಿ, ಮಹಾದಾಯಿ ಹೋರಾಟಕ್ಕೆ ಗೆಲುವು ತಂದುಕೊಂಡುವುದಾಗಿ ಮಾತು ನೀಡಿದ್ದರು. ಅದನ್ನೀಗ ಅವರು ಉಳಿಸಿಕೊಳ್ಳಬೇಕು ಎಂದು ರೈತ ಮುಖಂಡರು ಆಗ್ರಹ ಮಾಡಿದ್ದಾರೆ.