ಎಫ್ಐಆರ್ ರದ್ದಾದರೂ ಯಡಿಯೂರಪ್ಪ ಕಾನೂನು ಹೋರಾಟ ಮುಗಿದಿಲ್ಲ
ಬೆಂಗಳೂರು, ಜನವರಿ 07 : ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ದಾಖಲಾಗಿದ್ದ 15 ಎಫ್ಐಆರ್ಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದ್ದು ನಿಮಗೆ ಗೊತ್ತು. ಆದರೆ, ಯಡಿಯೂರಪ್ಪ ಅವರು ಎದುರಿಸುತ್ತಿರುವ ಕಾನೂನು ಹೋರಾಟಗಳು ಅಲ್ಲಿಗೆ ಮುಗಿಯುವುದಿಲ್ಲ. ಇನ್ನೂ ಮೂರು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿದ್ದು, ವಿಚಾರಣೆ ಹಂತದಲ್ಲಿದೆ.
ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಹಿರೇಮಠ ಅವರು ಲೋಕಾಯುಕ್ತದಲ್ಲಿ ಸಲ್ಲಿಸಿದ್ದ 15 ದೂರುಗಳನ್ನು ಹೈಕೋರ್ಟ್ ರದ್ದುಗೊಳಿಸಿದೆ. ಬೆಂಗಳೂರಿನ ಜೆ.ಪಿ.ನಗರ, ಎಚ್ಆರ್ಬಿಆರ್ ಲೇಔಟ್, ಜಯನಗರ 8ನೇ ಬ್ಲಾಕ್ ಮತ್ತು ರಾಚೇನಹಳ್ಳಿ ಸುತ್ತಮುತ್ತಲಿನ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಸಿಎಜಿ ವರದಿ ಆಧರಿಸಿ ಈ ದೂರುಗಳನ್ನು ಸಲ್ಲಿಸಲಾಗಿತ್ತು. [ಯಡಿಯೂರಪ್ಪ ರಾಜಕೀಯ ಕಥೆಗೆ ಅಡ್ವಾಣಿಯೇ ವಿಲನ್]
ಮಹಾಲೆಕ್ಕಪಾಲ ವರದಿ (ಸಿಎಜಿ) ವರದಿ ಹೊರತುಪಡಿಸಿ ಇತರೆ ಅಂಶಗಳ ಆಧಾರದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ಅವಕಾಶವನ್ನು ಹೈಕೋರ್ಟ್ ಮುಕ್ತವಾಗಿಟ್ಟಿದೆ. ಅಲ್ಲದೇ ಕರ್ನಾಟಕ ಸರ್ಕಾರ ಅಥವ ಲೋಕಾಯುಕ್ತ ಎಫ್ಐಆರ್ ರದ್ದುಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. [15 FIR ರದ್ದು : ಯಾರು, ಏನು ಹೇಳಿದರು?]
ಸಿಬಿಐ ವಿಶೇಷ ನ್ಯಾಯಾಲಯ, ಲೋಕಾಯುಕ್ತ ನ್ಯಾಯಾಲಯದಲ್ಲಿ ಯಡಿಯೂರಪ್ಪ ಅವರ ವಿರುದ್ಧದ ಮೂರು ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿವೆ. ಕೆಲವು ದಿನಗಳ ಹಿಂದೆಯಷ್ಟೆ ಲೋಕಾಯುಕ್ತ ಪೊಲೀಸರು ಯಡಿಯೂರಪ್ಪ ಅವರ ವಿರುದ್ಧ 16ನೇ ಎಫ್ಐಆರ್ ದಾಖಲು ಮಾಡಿಕೊಂಡು ತನಿಖೆ ಆರಂಭಿಸಿದ್ದಾರೆ. ಆದ್ದರಿಂದ ಕಾನೂನು ಹೋರಾಟ ಸಂಪೂರ್ಣವಾಗಿ ಅಂತ್ಯಗೊಂಡಿಲ್ಲ. ಯಡಿಯೂರಪ್ಪ ಅವರ ವಿರುದ್ಧದ ಪ್ರಕರಣಗಳ ವಿವರ ಇಲ್ಲಿವೆ...
15 ಎಫ್ಐಆರ್ ರದ್ದುಗೊಂಡಿವೆ
2013ರಲ್ಲಿ ಜಯಕುಮಾರ್ ಹಿರೇಮಠ ಅವರು ಸಿಎಜಿ ವರದಿ ಆಧರಿಸಿ ಯಡಿಯೂರಪ್ಪ ಅವರ ವಿರುದ್ಧ ದೂರು ದಾಖಲಿಸಲು ಅನುಮತಿ ಕೇಳಿದ್ದರು. ಹೈಕೋರ್ಟ್ ಒಪ್ಪಿಗೆ ನೀಡಿತ್ತು. ಲೋಕಾಯುಕ್ತ ಈ ದೂರಿನ ಪ್ರಾಥಮಿಕ ತನಿಖೆ ನಡೆಸುವಂತೆ ಸಿಐಡಿಗೆ ಸೂಚಿಸಿತ್ತು. ಸಿಐಡಿ ವರದಿ ಬಂದ ಬಳಿಕ ಯಡಿಯೂರಪ್ಪ ಅವರ ವಿರುದ್ಧ 15 ಎಫ್ಐಆರ್ಗಳನ್ನು ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿತ್ತು. ಹೈಕೋರ್ಟ್ ಈ 15 ಎಫ್ಐಆರ್ ರದ್ದು ಮಾಡಿದೆ.
ಅವಕಾಶ ಮುಕ್ತವಾಗಿಡಲಾಗಿದೆ
15 ಎಫ್ಐಆರ್ ರದ್ದುಗೊಂಡರೂ ಯಡಿಯೂರಪ್ಪ ಅವರಿಗೆ ಗೆಲುವು ಸಿಕ್ಕಂತೆ ಅಲ್ಲ. ಮಹಾಲೆಕ್ಕಪಾಲ ವರದಿ (ಸಿಎಜಿ) ವರದಿ ಹೊರತುಪಡಿಸಿ ಇತರೆ ಅಂಶಗಳ ಆಧಾರದಲ್ಲಿ ಯಡಿಯೂರಪ್ಪ ಅವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳುವ ಅವಕಾಶವನ್ನು ಹೈಕೋರ್ಟ್ ಮುಕ್ತವಾಗಿಟ್ಟಿದೆ. ಆದ್ದರಿಂದ, ಪುನಃ ಯಡಿಯೂರಪ್ಪ ಅವರ ವಿರುದ್ಧ ದೂರು ದಾಖಲಾಗುವ ಸಾಧ್ಯತೆಯೂ ಇದೆ.
ಮೇಲ್ಮನವಿ ಸಲ್ಲಿಸಲು ಅವಕಾಶವಿದೆ
ಎಫ್ಐಆರ್ ರದ್ದುಗೊಳಿಸಿರುವ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸರ್ಕಾರ ಮತ್ತು ಲೋಕಾಯುಕ್ತ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಈಗಾಗಲೇ ಯಡಿಯೂರಪ್ಪ ಅವರ ವಿರುದ್ಧದ 3 ಡಿನೋಟಿಫಿಕೇಷನ್ ಹಗರಣಗಳ ತನಿಖೆಗೆ ಕರ್ನಾಟಕ ಹೈಕೋರ್ಟ್ ನೀಡಿರುವ ತಡೆಯಾಜ್ಞೆಯನ್ನು ತೆರವುಗೊಳಿಸಬೇಕು ಎಂದು ಕೋರಿ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಎಂದು ಸುಪ್ರೀಂಕೋರ್ಟ್ ಹೈಕೋರ್ಟ್ಗೆ ಸೂಚನೆ ನೀಡಿದೆ. ಈಗ ಎಫ್ಐಆರ್ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಪುನಃ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.
16ನೇ ಎಫ್ಐಆರ್ ದಾಖಲಾಗಿದೆ
ಕರ್ನಾಟಕ ಲೋಕಾಯುಕ್ತ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ 16ನೇ ಎಫ್ಐಆರ್ ದಾಖಲು ಮಾಡಿದೆ. ಬೆಂಗಳೂರಿನ ಕಾಚರಕನಹಳ್ಳಿಯಲ್ಲಿ 1 ಎಕರೆ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಲಾಗಿದೆ ಎಂಬ ಆರೋಪ ಇದಾಗಿದೆ. ಈ ಪ್ರಕರಣವಿನ್ನೂ ತನಿಖಾ ಹಂತದಲ್ಲಿದೆ, ಇದಕ್ಕೆ ತಡೆ ಸಿಕ್ಕಿಲ್ಲ.
ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ
ಪ್ರೇರಣಾ ಶಿಕ್ಷಣ ಟ್ರಸ್ಟ್ ಮತ್ತು ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್ ಕಂಪನಿಗಳಿಗೆ ಅಕ್ರಮವಾಗಿ ದೇಣಿಗೆ ಪಡೆದ ಆರೋಪ ಮತ್ತು ರಾಚೇನಹಳ್ಳಿಯಲ್ಲಿ ಬಿಡಿಎ ವಶಪಡಿಸಿಕೊಂಡಿದ್ದ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಷನ್ ಮಾಡಿದ ಆರೋಪಗಳ ಕುರಿತು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಐಟಿ ಕಾರಿಡಾರ್ ಡಿನೋಟಿಫೈ ಆರೋಪ
ವರ್ತೂರು ಮತ್ತು ವೈಟ್ಫೀಲ್ಡ್ಗಳಲ್ಲಿ ಐಟಿ ಕಾರಿಡಾರ್ಗಾಗಿ ಮೀಸಲಾಗಿದ್ದ 100 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ ಆರೋಪದ ಬಗ್ಗೆ ಲೋಕಾಯುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಆದ್ದರಿಂದ ಬಿಎಸ್ವೈ ಅವರ ಕಾನೂನು ಹೋರಾಟ ಇನ್ನೂ ಕೆಲವು ದಿನಗಳ ಮಟ್ಟಿಗೆ ಮುಂದುವರೆಯಲಿದೆ.