ಬ್ರಹ್ಮಾಂಡ ಗುರುಗಳ ಚುನಾವಣಾ ಭವಿಷ್ಯ ನಿಜವಾಯಿತೇ?
ಚಾಟಿ ಬೀಸುವ ತನ್ನ ವ್ಯಾಖ್ಯಾನದ ಮೂಲಕ ಬ್ರಹ್ಮಾಂಡ ಗುರುಗಳು ಕನ್ನಡಿಗರಿಗೆ ಚಿರಪರಿಚಿತ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅಂತಿಮ ಹಂತಕ್ಕೆ ಬಂದ ಮೇಲಂತೂ ರಾಜಕಾರಣಿಗಳು, ಸೆಲೆಬ್ರಿಟಿಗಳು ನಾಚುವ ಮಟ್ಟಕ್ಕೆ ಜನಪ್ರಿಯತೆ ಪಡೆದವರು ಬ್ರಹ್ಮಾಂಡ ಗುರುಗಳು.
ಪಬ್ಲಿಕ್ ಟಿವಿಯ ಚುನಾವಣಾ ಭವಿಷ್ಯ ಕಾರ್ಯಕ್ರಮವೊಂದರಲ್ಲಿ ಬ್ರಹ್ಮಾಂಡ ಕಾರ್ಯಕ್ರಮ ಖ್ಯಾತಿಯ ನರೇಂದ್ರ ಬಾಬು ಶರ್ಮಾ ಮತ್ತು ರವಿಶಂಕರ್ ಗುರೂಜಿಗಳು ಜಂಟಿಯಾಗಿ ಕಾರ್ಯಕ್ರಮವೊಂದನ್ನು ನಡೆಸಿಕೊಟ್ಟಿದ್ದರು.
ರಾಜ್ಯದ 28 ಕ್ಷೇತ್ರಗಳ ಪೈಕಿ 18 ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು, ಯಾರು ಸೋಲಬಹುದು, ಯಾವ ಪಕ್ಷಕ್ಕೆ ಎಷ್ಟು ಸ್ಥಾನ ಸಿಗಬಹುದೆಂದು ಇಬ್ಬರು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದರು. (ಪಬ್ಲಿಕ್ ಟಿವಿಯಲ್ಲಿ ಭವಿಷ್ಯ)
ಅವರುಗಳು ನುಡಿದಿದ್ದ ಭವಿಷ್ಯ ಕರಾರುವಾಗಿತ್ತೇ? ಸ್ಲೈಡಿನಲ್ಲಿ
ಹಾವೇರಿ ಮತ್ತು ದಾವಣಗೆರೆ
ಹಾವೇರಿ ಮತ್ತು ದಾವಣಗೆರೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅದರಂತೆ ಹಾವೇರಿಯಲ್ಲಿ ಶಿವಕುಮಾರ್ ಉದಾಸಿ 87571 ಮತಗಳ ಅಂತರದಿಂದ ಗೆದ್ದಿದ್ದರು. ದಾವಣಗೆರೆಯಲ್ಲಿ ಸಿದ್ದೇಶ್ 17607 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಹುಬ್ಬಳ್ಳಿ -ಧಾರವಾಡ, ಬೆಳಗಾವಿ
ಹುಬ್ಬಳ್ಳಿಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದಿದ್ದರು. ಅದರಂತೆ ಬಿಜೆಪಿಯ ಪ್ರಲ್ಹಾದ್ ಜೋಷಿ 113657 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇನ್ನು ಬೆಳಗಾವಿಯಲ್ಲಿ ಕಾಂಗ್ರೆಸ್ಸಿನ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಗೆಲುವು ಅಂದಿದ್ದರು. ಆದರೆ ಅಲ್ಲಿ ಬಿಜೆಪಿಯ ಸುರೇಶ್ ಅಂಗಡಿ 75860 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಕರಾವಳಿ ಬಗ್ಗೆ
ದಕ್ಷಿಣಕನ್ನಡ ಮತ್ತು ಉಡುಪಿ - ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದ್ದಾರೆಂದು ಭವಿಷ್ಯ ನುಡಿದಿದ್ದರು. ಆದರೆ ಎರಡೂ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಉಡುಪಿಯಲ್ಲಿ ಶೋಭಾ 181643 ಮತಗಳ ಅಂತರದಿಂದ ಮತ್ತು ದ.ಕದಲ್ಲಿ ಕಟೀಲ್ 143709 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
ಗುಲ್ಬರ್ಗ, ಬೀದರ್
ಗುಲ್ಬರ್ಗದಲ್ಲಿ ಕಾಂಗ್ರೆಸ್ ಮತ್ತು ಬೀದರ್ ನಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿಯಲಾಗಿತ್ತು. ಅದರಂತೆ ಗುಲ್ಬರ್ಗದಲ್ಲಿ ಮಲ್ಲಿಕಾರ್ಜುನ ಖರ್ಗೆ 74733, ಬೀದರ್ ನಿಂದ ಬಿಜೆಪಿಯ ಭಗವಂತ ಖೂಬಾ 92222 ಮತಗಳ ಅಂತರದ ಜಯ ಸಾಧಿಸಿದ್ದರು.
ಬಳ್ಳಾರಿ, ಕೋಲಾರ
ಬಳ್ಳಾರಿಯಲ್ಲಿ ಭವಿಷ್ಯ ನುಡಿದಂತೆ ಆಗಿದ್ದರೆ, ಕೋಲಾರದಲ್ಲಿ ಉಲ್ಟಾ ಆಗಿದೆ. ಬಳ್ಳಾರಿಯಲ್ಲಿ ಶ್ರೀರಾಮುಲು ಗೆದ್ದಿದ್ದರೆ, ಆದರೆ ಕೋಲಾರದಲ್ಲಿ ಮುನಿಯಪ್ಪ ಮೂರನೇ ಸ್ಥಾನಕ್ಕೆ ಹೋಗಬಹುದೆಂದು ಭವಿಷ್ಯ ನುಡಿದಿದ್ದರು. ಆದರೆ ಕೋಲಾರದಲ್ಲಿ ಮುನಿಯಪ್ಪ ಸತತವಾಗಿ ಆಯ್ಕೆಯಾಗಿದ್ದಾರೆ.
ಮಂಡ್ಯ, ಚಿಕ್ಕಬಳ್ಳಾಪುರ
ಮಂಡ್ಯದಲ್ಲಿ ರಮ್ಯಾಗೆ ಪ್ರಯಾದ ಗೆಲುವು ಎಂದು ಭವಿಷ್ಯ ನುಡಿಯಲಾಗಿತ್ತು, ಆದರೆ ರಮ್ಯಾಗೆ ಸೋಲುಂಟಾಗಿದೆ. ಚಿಕ್ಕಬಳ್ಳಾಪುರದಲ್ಲಿ ಕುಮಾರಸ್ವಾಮಿಗೆ ಮೂರನೇ ಸ್ಥಾನ ಎಂದು ಭವಿಷ್ಯ ನುಡಿಯಲಾಗಿತ್ತು. ಅದರಂತೆ ಆಗಿದೆ, ಆದರೆ ಬಚ್ಚೇಗೌಡ ಜಯಸಾಧಿಸುತ್ತಾರೆ ಎನ್ನುವ ಭವಿಷ್ಯ ಸುಳ್ಳಾಗಿದೆ. ಅಲ್ಲಿ ಕಾಂಗ್ರೆಸ್ಸಿನ ವೀರಪ್ಪ ಮೊಯ್ಲಿ ಪ್ರಯಾಸದ ಗೆಲುವು ಸಾಧಿಸಿದ್ದಾರೆ.
ಶಿವಮೊಗ್ಗ, ತುಮಕೂರು
ಶಿವಮೊಗ್ಗದಲ್ಲಿ ಭವಿಷ್ಯ ನುಡಿದಂತೆ ಯಡಿಯೂರಪ್ಪ ಗೆಲುವು ಸಾಧಿಸಿದ್ದಾರೆ. ತುಮಕೂರಿನಲ್ಲಿ ಬಸವರಾಜು ಗೆಲುವು ಸಾಧಿಸಲಿದ್ದಾರೆ ಎನ್ನುವ ಭವಿಷ್ಯ ಸುಳ್ಳಾಗಿದೆ. ಕಾಂಗ್ರೆಸ್ಸಿನ ಮುದ್ದು ಹನುಮೇಗೌಡ ಮೂರನೇ ಸ್ಥಾನ ಪಡೆಯಲಿದ್ದಾರೆ ಎನ್ನುವ ಭವಿಷ್ಯ ಉಲ್ಟಾ ಆಗಿ ಅಲ್ಲಿ ಅವರೇ ಗೆದ್ದಿದ್ದಾರೆ.
ಮೈಸೂರು, ಹಾಸನ
ಹಾಸನದಲ್ಲಿ ಬ್ರಹ್ಮಾಂಡ ಗುರುಗಳು ಭವಿಷ್ಯ ನುಡಿದಂತೆ ದೇವೇಗೌಡ ಗೆಲುವು ಸಾಧಿಸಿದ್ದಾರೆ. ಆದರೆ ಮೈಸೂರಿನಲ್ಲಿ ವಿಶ್ವನಾಥ್ ಸೋಲು ಅನುಭವಿಸಿದ್ದಾರೆ. ಮೈಸೂರಿನಲ್ಲಿ ಪ್ರತಾಪ್ ಸಿಂಹಗೆ ಸೋಲಾಗಲಿದೆ ಎನ್ನುವ ಭವಿಷ್ಯ ನಿಜವಾಗಲಿಲ್ಲ.
ಬೆಂಗಳೂರು ದಕ್ಷಿಣ, ಉತ್ತರ
ಬೆಂಗಳೂರು ಉತ್ತರದಲ್ಲಿ ಭವಿಷ್ಯ ನುಡಿದಂತೆ ಸದಾನಂದ ಗೌಡ ಗೆಲುವು ಸಾಧಿಸಿದ್ದಾರೆ, ದಕ್ಷಿಣದಲ್ಲಿ ನಿಲೇಕಣಿ ಗೆಲ್ಲಲಿದ್ದಾರೆ ಎನ್ನುವ ಭವಿಷ್ಯ ಸುಳ್ಳಾಗಿದ್ದು ಅಲ್ಲಿ ಅನಂತ ಕುಮಾರ್ ಪ್ರಚಂಡ ಜಯಭೇರಿ ಬಾರಿಸಿದ್ದಾರೆ.
ಯಾರಿಗೆ ಎಷ್ಟು?
ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಮತ್ತು ರವಿಶಂಕರ್ ಗುರೂಜಿಗಳ ಭವಿಷ್ಯದ ಪ್ರಕಾರ ಬಿಜೆಪಿಗೆ 12-15, ಕಾಂಗ್ರೆಸ್ಸಿಗೆ 9-13 ಮತ್ತು ಜೆಡಿಎಸ್ 2-3 ಸ್ಥಾನ ಎನ್ನಲಾಗಿತ್ತು. ರಾಜ್ಯದಲ್ಲಿ ಬಿಜೆಪಿ 17, ಕಾಂಗ್ರೆಸ್ 09, ಜೆಡಿಎಸ್ 02 ಸ್ಥಾನ ಗೆದ್ದಿದೆ.