ವಿಧಾನಪರಿಷತ್ ಚುನಾವಣೆ ಟಿಕೆಟ್ ಕೊಡೋಕೆ ಹಣ ಬೇಡಿಕೆ ಇಟ್ಟಿದ್ರಾ ಜೋಶಿ?
ಹುಬ್ಬಳ್ಳಿ,ಡಿಸೆಂಬರ್,22: ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿಯವರು ವಿಧಾನ ಪರಿಷತ್ ಚುನಾವಣೆ ಟಿಕೆಟ್ ಗಾಗಿ ಭಾರೀ ಹಣದ ಬೇಡಿಕೆ ಇಟ್ಟಿದ್ದರು ಎಂದು ಬಿಜೆಪಿ ಬಂಡಾಯ ಅಭ್ಯರ್ಥಿ ರಾಜಶ್ರೀ ಜಡಿ ಆರೋಪಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜಶ್ರೀ ಜಡಿ ಅವರು, 'ನಾನು ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಜೋಶಿ ಅವರಲ್ಲಿ ಟಿಕೆಟ್ ಕೇಳಿದಾಗ ನಿಮ್ಮ ಬಳಿ ಹಣವಿದ್ದರೆ ಮಾತ್ರ ಟಿಕೆಟ್ ವಿಷಯ ಮಾತನಾಡಿ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದರು ಎಂದು ದೂರಿದ್ದಾರೆ.[ವಿಧಾನ ಪರಿಷತ್ ಚುನಾವಣೆ, ಮತ ಹಾಕಿದ್ರೆ ಗ್ರಾಮಜ್ಯೋತಿ ಪ್ರಶಸ್ತಿ!]
ಸುಮಾರು 20 ವರ್ಷಗಳಿಂದಲೂ ನಾನು ಬಿಜೆಪಿಯಲ್ಲಿ ಸಕ್ರೀಯವಾಗಿ ನಿಷ್ಠಾವಂತಳಾಗಿ ಕೆಲಸ ಮಾಡಿದ್ದೇನೆ. ಹಣ ನನ್ನ ಬಳಿ ಇಲ್ಲವೆಂದಾಗ ವಿಧಾನ ಪರಿಷತ್ ಟಿಕೆಟ್ ನೀಡದೇ ಬೇರೆಯವರಿಗೆ ನೀಡಿದ್ದಾರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಕ್ಕಾಗಿ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.
ನಾನು ಇನ್ನೂ ಪಕ್ಷದ ಕಾರ್ಯಕರ್ತೆಯಾಗಿಯೇ ಉಳಿದುಕೊಂಡಿದ್ದೇನೆ. ಸ್ಥಳೀಯ ಸಂಸ್ಥೆಯ ಸಾಕಷ್ಟು ಸದಸ್ಯರು ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದರು. ಸಾಮಾನ್ಯ ಕಾರ್ಯಕರ್ತಳಾಗಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಕಾರ್ಪೋರೇಟರ್ ಆಗಿ ಸೇವೆ ಸಲ್ಲಿಸಿದ ನನಗೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.[ಡಿಸೆಂಬರ್ 27ರ ವಿಧಾನಪರಿಷತ್ ಚುನಾವಣೆ ಬಗ್ಗೆ ತಿಳಿಯಿರಿ]
ವಿಧಾನ ಪರಿಷತ್ಗೆ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಆಯ್ಕೆ ಖಚಿತ
ಉಡುಪಿ, ಡಿಸೆಂಬರ್, 22: ಮುಂಬರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳ ಒಲವು ಬಿಜೆಪಿ ಕಡೆಗಿದ್ದು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರ ಆಯ್ಕೆ ಖಚಿತ ಎಂದು ಕ್ಷೇತ್ರ ಸಮಿತಿ ಅಧ್ಯಕ್ಷ ರಾಜೇಶ್ ಕಾವೇರಿ ಹೇಳಿದ್ದಾರೆ.[ಬಂಡಾಯ ಅಭ್ಯರ್ಥಿಗಳ ಉಚ್ಚಾಟನೆ : ಯಾರು, ಏನು ಹೇಳಿದರು?]
ಸಾಮಾನ್ಯ ಜನರ ಸಮಸ್ಯೆಗಳ ಬಗ್ಗೆ ಕಾಳಜಿ ಹೊಂದಿರುವ ಕೋಟ ಶ್ರೀನಿವಾಸ ಪೂಜಾರಿಯವರು ತಮ್ಮ ಅವಧಿಯಲ್ಲಿ ಪರಿಷತ್ ಸದಸ್ಯನಾಗಿ ಮತ್ತು ಮಂತ್ರಿಯಾಗಿ ಹಲವಾರು ಜನೋಪಯೋಗಿ ಕಾರ್ಯ ಮಾಡಿದ್ದಾರೆ. ಆದ್ದರಿಂದ ಈ ಬಾರಿ ದಾಖಲೆ ಮತದ ಅಂತರದಿಂದ ಶ್ರೀನಿವಾಸ ಪೂಜಾರಿಯವರು ಗೆಲ್ಲುವುದು ಖಚಿತ ಎಂದು ಮೀನುಗಾರಿಕ ಪ್ರಕೋಷ್ಠದ ರಾಜ್ಯ ಸಂಚಾಲಕ ಬಿ. ಕಿಶೋರ್ ಕುಮಾರ್ ಮತ್ತು ಕ್ಷೇತ್ರ ಅಧ್ಯಕ್ಷ ರಾಜೇಶ್ ಕಾವೇರಿ ತಮ್ಮ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.