ಕರ್ನಾಟಕ ಬಿಜೆಪಿಗೆ ನೂತನ ಸಾರಥಿ ಯಾರು?
ಬೆಂಗಳೂರು, ಅಕ್ಟೋಬರ್ 13 : ಕರ್ನಾಟಕ ಬಿಜೆಪಿಯ ಹೊಸ ಸಾರಥಿಗಾಗಿ ಹುಡುಕಾಟ ಆರಂಭವಾಗಿದೆ. ಪ್ರಸ್ತುತ ಬಿಜೆಪಿ ಅಧ್ಯಕ್ಷರಾಗಿರುವ ಪ್ರಹ್ಲಾದ್ ಜೋಶಿ ಅವರ ಅಧಿಕಾರಾವಧಿ ಮಕ್ತಾಯಗೊಳ್ಳುತ್ತಿದ್ದು, ಡಿಸೆಂಬರ್ನಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಯಲಿದೆ ಎಂದು ಈಗಾಗಲೇ ಪಕ್ಷ ಪ್ರಕಟಿಸಿದೆ.
'ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಡಿಸೆಂಬರ್ ಅಂತ್ಯದೊಳಗೆ ಚುನಾವಣೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದಾರೆ' ಎಂದು ಬಿಜೆಪಿಯ ಚುನಾವಣಾಧಿಕಾರಿ ಭಾನುಪ್ರಕಾಶ್ ಅವರು ಹೇಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆಯಲ್ಲಿ 310 ಸದಸ್ಯರು ಮತದಾನ ಮಾಡಲಿದ್ದಾರೆ. ಇವರಲ್ಲಿ 36 ಜಿಲ್ಲಾ ಸಮಿತಿ ಅಧ್ಯಕ್ಷರು, 274 ವಿಧಾನಸಭಾ ಕ್ಷೇತ್ರಗಳ ಬಿಜೆಪಿ ಕೌನ್ಸಿಲ್ ಸದಸ್ಯರು ಸೇರಿದ್ದಾರೆ. [ಡಿಸೆಂಬರ್ ನಲ್ಲಿ ನೂತನ ಅಧ್ಯಕ್ಷರ ಆಯ್ಕೆ]
ಬಿಜೆಪಿ ರಾಜ್ಯಾಧ್ಯಕ್ಷರು ಯಾರಾಗಬೇಕು? ಎಂಬ ಚರ್ಚೆ ನಡೆಯುತ್ತಿದೆ. ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಧ್ಯಕ್ಷರಾಗುವ ಮೂಲಕ ರಾಜ್ಯ ರಾಜಕಾರಣಕ್ಕೆ ಮರಳಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ.[ಯಡಿಯೂರಪ್ಪ ಸಂದರ್ಶನ ಓದಿ]
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಮಾಜಿ ಸಚಿವ ಸಿ.ಟಿ.ರವಿ, ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಮುಂತಾದವರ ಹೆಸರುಗಳು ಅಧ್ಯಕ್ಷ ಹುದ್ದೆಗೆ ಕೇಳಿಬರುತ್ತಿವೆ. ಪ್ರಹ್ಲಾದ್ ಜೋಶಿ ಅವರೇ ಮತ್ತೊಂದು ಅವಧಿಗೆ ಅಧ್ಯಕ್ಷರಾಗಲಿದ್ದಾರೆ ಎಂಬ ಮಾತುಗಳು ಇವೆ. ಹಾಗಾದರೆ ಯಾರು ಅಧ್ಯಕ್ಷರಾಗಬಹುದು? ಚಿತ್ರಗಳಲ್ಲಿ ನೋಡಿ.....
ಯಡಿಯೂರಪ್ಪ ರಾಜ್ಯಕ್ಕೆ ಮರಳಲಿದ್ದಾರೆ
ಈಗಾಗಲೇ ಎರಡು ಸುತ್ತಿನ ರೈತ ಚೈತನ್ಯ ಯಾತ್ರೆ ನಡೆಸಿ ರಾಜ್ಯ ಪ್ರವಾಸ ಮಾಡಿರುವ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ. ಯಡಿಯೂರಪ್ಪ ಅವರು ರಾಜ್ಯ ರಾಜಕಾರಣಕ್ಕೆ ಮರಳುವ ಬಯಕೆಯನ್ನು ಹಲವು ಬಾರಿ ವ್ಯಕ್ತಪಡಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಅಧ್ಯಕ್ಷ ಸ್ಥಾನ ಸಿಗುವುದೇ? ಎಂದು ಕಾದು ನೋಡಬೇಕು.
ಅಶೋಕ್ಗೆ ರಾಜ್ಯಾಧ್ಯಕ್ಷ ಪಟ್ಟ?
ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಶತಕ ಬಾರಿಸಲು ನೆರವಾಗಿದ್ದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್. ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳಿಸುತ್ತಿದ್ದಂತೆ ಅಶೋಕ್ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ಸಿಗಲಿದೆ ಎಂಬ ಮಾತುಗಳು ಹಬ್ಬಿದ್ದವು. ಆದರೆ, ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ದೂರ ಇಟ್ಟಿವೆ. ಇದು ಅಶೋಕ್ ಅವರಿಗೆ ಹಿನ್ನಡೆ ಎಂದು ಹೇಳಲಾಗುತ್ತಿದ್ದೂ ರಾಜ್ಯಾಧ್ಯಕ್ಷರ ಹುದ್ದೆಯ ರೇಸ್ನಲ್ಲಿ ಅವರ ಹೆಸರೂ ಇದೆ.
ರೇಸ್ನಲ್ಲಿ ಮಾಜಿ ಸಚಿವ ಸಿ.ಟಿ.ರವಿ
2016ರಲ್ಲಿ ನಡೆಯುವ ತಮಿಳುನಾಡು ವಿಧಾನಸಭೆ ಚುನಾವಣೆ ಜವಾಬ್ದಾರಿ ವಹಿಸಿಕೊಂಡಿರುವ ಚಿಕ್ಕಮಗಳೂರು ಶಾಸಕ ಮತ್ತು ಮಾಜಿ ಸಚಿವ ಸಿ.ಟಿ.ರವಿ ಅವರ ಹೆಸರು ಸಹ ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿಬರುತ್ತಿದೆ. ಯುವಕರಾಗಿರುವ ರವಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ಪಕ್ಷ ಸಂಘಟನೆ ಸಹಾಯಕವಾಗುತ್ತದೆ. ಯುವಕರನ್ನು ಪಕ್ಷದತ್ತ ಸೆಳೆಯಬಹುದು ಎಂಬುದು ಲೆಕ್ಕಾಚಾರ.
ನಳೀನ್ ಕುಮಾರ್ ಕಟೀಲ್ಗೆ ಅಧ್ಯಕ್ಷಗಿರಿ
ಕರಾವಳಿ ಭಾಗದ ಜನರೊಂದಿಗೆ ನಿಂತು ಎತ್ತಿನಹೊಳೆ ಯೋಜನೆ ವಿರುದ್ಧ ನಿರಂತರ ಹೋರಾಟ ನಡೆಸುತ್ತಿರುವ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಅವರ ಹೆಸರು ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿಬರುತ್ತಿದೆ. ನಳೀನ್ ಕುಮಾರ್ ಅವರ ಹೆಸರು ಕೇಳಿಬಂದಿರುವುದು ಹಲವರ ಅಚ್ಚರಿಗೂ ಕಾರಣವಾಗಿದೆ. ಯುವಕರಾಗಿರುವ ನಳೀನ್ ಅವರನ್ನು ಆಯ್ಕೆ ಮಾಡಬಹುದು ಎಂಬ ಲೆಕ್ಕಾಚಾರಗಳು ಇವೆ.
ಪ್ರಹ್ಲಾದ್ ಜೋಶಿಗೆ ಎರಡನೇ ಬಾರಿಗೆ ಪಟ್ಟ
ಪ್ರಸ್ತುತ ಬಿಜೆಪಿ ಅಧ್ಯಕ್ಷರಾಗಿರುವ ಪ್ರಹ್ಲಾದ್ ಜೋಶಿ ಅವರನ್ನು ಮತ್ತೊಂದು ಅವಧಿಗೆ ಆಯ್ಕೆ ಮಾಡಲಾಗುತ್ತದೆ ಎಂಬ ಮಾತುಗಳು ಇವೆ. ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳು ಚುನಾವಣೆಗಳು ಎದುರಾಗುವುದರಿಂದ ಜೋಶಿ ಅವರ ಅಧಿಕಾರವನ್ನು 6 ತಿಂಗಳ ಕಾಲ ವಿಸ್ತರಣೆ ಮಾಡಿ, ನಂತರ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬಹುದು ಎಂಬ ಮಾಹಿತಿ ಸದ್ಯ ಲಭ್ಯವಾಗುತ್ತಿವೆ.