ಬ್ರಹ್ಮಚಾರಿ, ಉಗ್ರ ಹಿಂದುತ್ವವಾದಿ ಬಿಎಲ್ ಸಂತೋಷ್ ಜೀ ವ್ಯಕ್ತಿಚಿತ್ರ
ರಾಜ್ಯ ಬಿಜೆಪಿ ಘಟಕದಲ್ಲಿ ಸದ್ಯ ಭಾರೀ ಚಾಲ್ತಿಯಲ್ಲಿರುವ ಮೂರು ಹೆಸರೆಂದರೆ, ಯಡಿಯೂರಪ್ಪ, ಈಶ್ವರಪ್ಪ ಮತ್ತು ಬಿ ಎಲ್ ಸಂತೋಷ್. ಬಿಜೆಪಿ (ಸಂಘಟನೆ) ಡೆಪ್ಯೂಟಿ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ವ್ಯಕ್ತಿಚಿತ್ರ.
ಮನೆಯೊಂದು ಮೂರು ಬಾಗಿಲಂತಾಗಿರುವ ರಾಜ್ಯ ಬಿಜೆಪಿ ಘಟಕದಲ್ಲಿ ಸದ್ಯ ಭಾರೀ ಚಾಲ್ತಿಯಲ್ಲಿರುವ ಮೂರು ಹೆಸರೆಂದರೆ, ಯಡಿಯೂರಪ್ಪ, ಈಶ್ವರಪ್ಪ ಮತ್ತು ಬಿ ಎಲ್ ಸಂತೋಷ್.
ಬಿಎಸ್ವೈ, ಈಶ್ವರಪ್ಪ ಹೆಸರು ರಾಜ್ಯದ ಜನರಿಗೆ ಚಿರಪರಿಚಿತವಾಗಿದ್ದರೂ, ಸಂತೋಷ್ ಆಲಿಯಾಸ್ ಸಂತೋಷ್ ಜೀ..ಯಾರು ಎನ್ನುವುದು ಬಿಜೆಪಿ ವಲಯದಲ್ಲಿ ಮತ್ತು ಸಂಘಟನಾ ಸದಸ್ಯರನ್ನು ಬಿಟ್ಟರೆ ಹೊರಜಗತ್ತಿಗೆ ಅಪರಿಚಿತ.
ಬ್ರಹ್ಮಚಾರಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿರುವ ಸಂತೋಷ್, ಮೂಲತ: ಉಡುಪಿ ಜಿಲ್ಲೆಯವರು. ದಾವಣಗೆರೆಯ ಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿದ ಸಂತೋಷ್, ವಿದ್ಯಾರ್ಥಿ ಜೀವನದಲ್ಲಿ ಎಬಿವಿಪಿ ಮೂಲಕ RSS ಸಂಘಟನೆಯ ಸಂಪರ್ಕಕ್ಕೆ ಬಂದಿದ್ದರು. [ಯೋಗಿಯಾಗಲು ಬಿಎಲ್ ಸಂತೋಷ್ಗೆ ಏಕೆ ಸಾಧ್ಯವಿಲ್ಲ]
ಉಗ್ರ ಹಿಂದೂ ಪ್ರತಿಪಾದಕರಾದ ಸಂತೋಷ್, ವಿದ್ಯಾಭ್ಯಾಸ ಮುಗಿದ ನಂತರ ಸಂಘಟನೆಯ ಕೆಲಸದಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡವರು. ಸರಳ ವ್ಯಕ್ತಿತ್ವ, ಕೆಲಸದಲ್ಲಿನ ವೃತ್ತಿಪರತೆ, ಮಿತಭಾಷಿ ಮತ್ತು ಸಮಸ್ಯೆ ಪರಿಹರಿಸುವಲ್ಲಿನ ಅವರ ನೈಪುಣ್ಯತೆಯಿಂದಾಗಿ ಸಂಘಟನೆಯಲ್ಲಿ ಆಯಕಟ್ಟಿನ ಸ್ಥಾನಕ್ಕೆ ಏರಿದವರು ಸಂತೋಷ್ ಜೀ..
ಸಂಘದ ಕೆಲಸ ಕಾರ್ಯಗಳಲ್ಲಿ ತೊಡಗಿದ ಸಂತೋಷ್ ಜೀ.. ನಂತರ ಸಂಘಟನೆಯ ಪ್ರಚಾರಕರಾಗಿ ಕೆಲಸ ನಿರ್ವಹಿಸಿದರು. ಮಾಧ್ಯಮದವರೊಂದಿಗೆ ಅಂತರ ಕಾಯ್ಡುಕೊಂಡು ಬರುವ ಸಂತೋಷ್, ಅಪ್ರತಿಮ ಸಂಘಟನೆಕಾರ ಮತ್ತು ಅಗಾಧ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸಂಘಟನೆಗೆ ಸೇರಿಸಿದ ಖ್ಯಾತಿಯನ್ನು ಕೂಡಾ ಹೊಂದಿದ್ದಾರೆ.[ಬಿಎಸ್ ವೈ ಕಟ್ಟಿಹಾಕಲು ಸೃಷ್ಟಿಯಾಗಿದ್ದೇ ಬಿಜೆಪಿ ಬಿಕ್ಕಟ್ಟು!]
ಬಿಜೆಪಿಯ ಕೋರಿಕೆ ಮೇರೆಗೆ ಸಂಘಟನೆಯ ಕೆಲಸದಿಂದ ಪಕ್ಷದ ಕೆಲಸಕ್ಕೆ ನಿಯೋಜನೆಗೊಂಡ ಸಂತೊಷ್, ತಮ್ಮ ಕಾರ್ಯದಕ್ಷತೆಯಿಂದ ಬೇರು ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಿ, ಕಾರಣಾಂತರದಿಂದ ಪಕ್ಷದಿಂದ ದೂರವಾಗಿದ್ದ ಕಾರ್ಯಕರ್ತರನ್ನು ಮತ್ತೆ ಒಗ್ಗೂಡಿಸಿದರು.
ಇಂಜಿನಿಯರಿಂಗ್ ಪದವೀಧರಾಗಿರುವ ಸಂತೋಷ್, ಹೊಸ ತಂತ್ರಜ್ಞಾನದ ಮೂಲಕ ಜನರನ್ನು ಮತ್ತು ಯುವ ಸಮುದಾಯವನ್ನು ಹೇಗೆ ಆಕರ್ಷಿಸಬಹುದು ಎಂದು ತೋರಿಸಿಕೊಟ್ಟವರು. 2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಲ್ಲಿ ಸಂತೋಷ್ ಅವರ ಪಾತ್ರ ಬಹಳ ನಿರ್ಣಾಯಕವಾದದ್ದು.
ಸದಾನಂದ ಗೌಡ ಸಿಎಂ ಆಗುವ ವೇಳೆ
ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೂರೇ ವರ್ಷಗಳಲ್ಲಿ ಪಕ್ಷದಲ್ಲಿನ ಭಿನ್ನಮತದಿಂದ ಸದಾನಂದ ಗೌಡ ಮುಖ್ಯಮಂತ್ರಿಯಾದರು. ಗೌಡ್ರು ಸಿಎಂ ಆಗಿ ಆಯ್ಕೆಯಾಗುವ ಮೊದಲು ಪಕ್ಷದ ಸೈದ್ದಾಂತಿಕ ಹಿನ್ನಲೆಯುಳ್ಳ ಸಂತೋಷ್ ಅವರನ್ನು ಸಿಎಂ ಮಾಡಬೇಕು ಎಂದು ಕೆಲವು ಶಾಸಕರು ಪ್ರತ್ಯೇಕ ಸಭೆ ನಡೆಸುತ್ತಿದ್ದರು.
ಮುಖ್ಯಮಂತ್ರಿ ಹುದ್ದೆ ನಿರಾಕರಿಸಿದ್ದ ಸಂತೋಷ್
ಆವೇಳೆ ಸಭೆಗೆ ಬಂದ ಸಂತೋಷ್, ಇನ್ಯಾವತ್ತೂ ಈ ರೀತಿಯ ಸಭೆ ನಡೆಸಬೇಡಿ, ನಾನು ಯಾವುದೇ ಕಾರಣಕ್ಕೂ ಮುಖ್ಯಮಂತ್ರಿಯಾಗುವುದಿಲ್ಲ. ಇಂತಹ ಸಭೆಗಳ ಮೂಲಕ ನನ್ನ ಹೆಸರಿಗೆ ಕಳಂಕ ತರಬೇಡಿ ಎಂದು ಶಾಸಕರನ್ನು ಉದ್ದೇಶಿಸಿ ಸಂತೋಷ್ ಗದರಿದ್ದನ್ನು ಸಂಘಟನೆಯ/ಪಕ್ಷದ ಕಾರ್ಯಕರ್ತರು ಈಗಲೂ ನೆನಪಿಸಿಕೊಳ್ಳುವುದುಂಟು.
ಪ್ರಲ್ಹಾದ್ ಜೋಷಿ ರಾಜ್ಯಾಧ್ಯಕ್ಷರಾಗಿದ್ದ ವೇಳೆ
2013ರಲ್ಲಿ ಚುನಾವಣೆ ಸೋತು ಹೈರಾಣವಾಗಿದ್ದ ಬಿಜೆಪಿಯನ್ನು ಪ್ರಲ್ಹಾದ್ ಜೋಷಿ ಮುನ್ನಡೆಸುತ್ತಿದ್ದರು. ಬಿಎಸ್ವೈ ಕೆಜೆಪಿ ಕಟ್ಟಿದ್ದರು, ಪಕ್ಷಕ್ಕೆ ಮಾಸ್ ಲೀಡರ್ ಕೊರತೆಯಿತ್ತು. ಆ ಸಮಯದಲ್ಲಿ ತೆರೆಮೆರೆಯಲ್ಲಿ ಸಂಘಟನಾತ್ಮಕವಾಗಿ ಪಕ್ಷ ಕಟ್ಟಿ, ಕಾರ್ಯಕರ್ತರಿಗೆ ಮನೋಬಲ ತುಂಬಿಸಿದ್ದು ಇದೇ ಸಂತೋಷ್ ಎನ್ನುವುದು ನಿಷ್ಠಾವಂತ ಕಾರ್ಯಕರ್ತರ ಮಾತು.
ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಫಸಲು
ಇದಾದ ನಂತರ ಕಳೆದ ಲೋಕಸಭಾ ಚುನಾವಣೆಯಲ್ಲಿ ಬೇರೆ ಬೇರೆ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಯುವಕರನ್ನು ಪಕ್ಷದ ಪರವಾಗಿ ಪ್ರಚಾರದಲ್ಲಿ ತೊಡಗಿಸಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ರಾಜ್ಯದಿಂದ ಭರ್ಜರಿ ಫಸಲು ತಂದು ಕೊಡುವಲ್ಲಿ ಸಂತೋಷ್ ಪಾತ್ರ ಏನು ಎನ್ನುವುದು ಬಿಜೆಪಿಯ ಪ್ರಮುಖ ನಾಯಕರಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ.
ಕಮಿಟಿಯಿಂದ ಶೋಭಾ ಔಟ್
ಜುಲೈ 2016ರಲ್ಲಿ ಬಿಜೆಪಿ ಕೋರ್ ಕಮಿಟಿಯಿಂದ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯನ್ನು ಕೈಬಿಟ್ಟ ಖಡಕ್ ನಿರ್ಧಾರದ ಹಿಂದೆ ಸಂತೋಷ್ ಪಾತ್ರವಿದೆ. ಇದು ಸಂತೋಷ್ ಮತ್ತು ಯಡಿಯೂರಪ್ಪ ನಡುವೆ ಶೀತಲ ಸಮರ ಆರಂಭವಾಗಲು ಮೂಲ ಕಾರಣವಾಯಿತು ಎನ್ನುವುದು ಬಿಜೆಪಿ/ಸಂಘಟನೆಯ ಸದಸ್ಯರ ಅಭಿಪ್ರಾಯ.
ಯಡಿಯೂರಪ್ಪ- ಈಶ್ವರಪ್ಪ
ಈಗ ಯಡಿಯೂರಪ್ಪ- ಈಶ್ವರಪ್ಪ ಭಿನ್ನಮತಕ್ಕೆ ಸಂತೋಷ್ ಜೀ ಕಾರಣ ಎನ್ನುವ ಹೆಸರು ಕೇಳಿ ಬರುತ್ತಿದೆ. ಖುದ್ದು.. ಯಡಿಯೂರಪ್ಪನವರೇ ಮಾಧ್ಯಮಗಳ ಜೊತೆ ಮಾತನಾಡುತ್ತಾ ಈ ಎಲ್ಲಾ ಭಿನ್ನಮತೀಯ ಚಟುವಟಿಕೆಗೆ ಸಂತೋಷ್ ಅವರು ಕುಮ್ಮುಕ್ಕು ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಸಂತೋಷ್ ಕ್ಷಮೆಯಾಚಿಸುತ್ತೇನೆಂದ ಈಶೂ
ನಮ್ಮ, ಬಿಎಸ್ವೈ ಭಿನ್ನಮತಕ್ಕೂ ಸಂತೋಷ್ ಜೀಗೂ ಯಾವುದೇ ಸಂಬಂಧವಿಲ್ಲ. ಅವರ ಹೆಸರು ಮಧ್ಯೆ ಬಂದಿದ್ದಕ್ಕೆ ನಾನು ಅವರ ಮತ್ತು ಆರ್ ಎಸ್ ಎಸ್ ಸಂಘಟನೆಯ ಕ್ಷಮೆಯಾಚಿಸುತ್ತೇನೆಂದು ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಸಿ ಟಿ ರವಿ ಕೂಡಾ ಸಂತೋಷ್ ಪರವಾಗಿ ನಿಂತಿದ್ದಾರೆ. ಇದ್ಯಾವುದಕ್ಕೂ ತಲೆಕೆಡೆಸಿಕೊಳ್ಳದ ಸಂತೋಷ್ ಯಾವುದೇ ಹೇಳಿಕೆಯನ್ನು ನೀಡದೇ RSS ಶಿಸ್ತನ್ನು ತೋರಿಸುತ್ತಿದ್ದಾರೆ.
ಇಬ್ಬರ ನಡುವಿನ ಜಗಳ ಮೂರನೇಯವರಿಗೆ ಲಾಭ
ಈ ಎಲ್ಲಾ ಬೆಳವಣಿಗೆಗಳ ನಡುವೆ ಸಿಎಂ ಹುದ್ದೆಯ ರೇಸಿನಲ್ಲಿ ಸಂತೋಷ್ ಹೆಸರೂ ಕೇಳಿಬರುತ್ತಿರುವುದು ಹೊಸ ಬೆಳವಣಿಗೆ. ಇಬ್ಬರ ನಡುವಿನ ಜಗಳ ಮೂರನೇಯವರಿಗೆ ಲಾಭ ಎನ್ನುವ ಗಾದೆ ಮಾತಿದ್ದರೂ, ಸಂತೋಷ್ ಜೀ ಆ ಹುದ್ದೆಯನ್ನು ಒಪ್ಪಿಕೊಳ್ಳುತ್ತಾರಾ ಎನ್ನುವುದೇ ಸದ್ಯಕ್ಕಿರುವ ಬಹುದೊಡ್ಡ ಪ್ರಶ್ನೆ.
{promotion-urls}