ಇಲ್ಲಿ ಅಮಿತ್ ಶಾ, ಅಲ್ಲಿ ರಾಹುಲ್ : ಚುನಾವಣೆ ಬಂತಪ್ಪೋ ಚುನಾವಣೆ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ (ಆ 12) ಕರ್ನಾಟಕಕ್ಕೆ ಬರುತ್ತಿದ್ದಾರೆ. ಅಮಿತ್ ಶಾ ಅವರದ್ದು ಮೂರು ದಿನದ ಪ್ರವಾಸವಾದರೆ, ರಾಹುಲ್ ಗಾಂಧಿಯವರದ್ದು ಒಂದು ದಿನದ ಪ್ರವಾಸ.
ಒಬ್ಬರದ್ದು ಬಿಜೆಪಿಯನ್ನು ಇನ್ನಷ್ಟು ಬೆಳೆಸುವ ಮಹತ್ವಾಕಾಂಕ್ಷೆಯ ರಾಜ್ಯ ಪ್ರವಾಸ, ಇನ್ನೊಬ್ಬರದ್ದು ಕಾಂಗ್ರೆಸ್ ಉಳಿಸಲು ರಾಜ್ಯ ಪ್ರವಾಸ. ಕಾಂಗ್ರೆಸ್ ಮುಕ್ತ್ ಭಾರತ್ ಒಬ್ಬರ ಕನಸಾದರೆ, ಕಾಂಗ್ರೆಸ್ ಬಚಾವೋ ಗಾಗಿ ಇನ್ನೊಬ್ಬರ ಹೋರಾಟ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಶ್ರಾವಣ ಶನಿವಾರ (ಆ 12) ಕರ್ನಾಟಕಕ್ಕೆ ಬರುತ್ತಿದ್ದಾರೆ. ಅಮಿತ್ ಶಾ ಅವರದ್ದು ಮೂರು ದಿನದ ಪ್ರವಾಸವಾದರೆ, ರಾಹುಲ್ ಗಾಂಧಿಯವರದ್ದು ಒಂದು ದಿನದ ಪ್ರವಾಸ.
ರಾಜ್ಯ ಭೇಟಿಗೆ ಮುನ್ನ ಬಿಜೆಪಿ ನಾಯಕರಿಗೆ ಅಮಿತ್ ಶಾ ರವಾನಿಸಿದ ಸೂಚನೆ
ಚುನಾವಣಾ ವರ್ಷದಲ್ಲಿ ಈ ಇಬ್ಬರು ರಾಷ್ಟ್ರೀಯ ನಾಯಕರ ಭೇಟಿ ರಾಜ್ಯ ಮುಖಂಡರಲ್ಲಿ ಮತ್ತು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸನ್ನು ಮೂಡಿಸಿದೆ. ಅಮಿತ್ ಶಾ ಪಕ್ಷ ಸಂಘಟನೆಗೆ ಆಗಮಿಸುತ್ತಿದ್ದರೆ, ರಾಹುಲ್ ಗಾಂಧಿ ರಾಯಚೂರಿನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.
ಇಂಧನ ಸಚಿವ ಡಿ ಕೆ ಶಿವಕುಮಾರ್ ಅವರ ಮನೆಯ ಮೇಲೆ ಆದಾಯ ತೆರಿಗೆ ದಾಳಿಯ ವೇಳೆ, ರಾಹುಲ್ ಕಾರ್ಯಕ್ರಮ ರದ್ದಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಬದಲಾದ ಸನ್ನಿವೇಶದಲ್ಲಿ ರಾಹುಲ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಹಾಗಾಗಿ, ಇಬ್ಬರ ನಾಯಕರ ಕರ್ನಾಟಕ ಪುರಪ್ರವೇಶದಿಂದ ಅಸೆಂಬ್ಲಿ ಚುನಾವಣೆಗೆ ಅನಧಿಕೃತವಾಗಿ ರಣಕಹಳೆ ಊದಿದಂತಾಗಿದೆ.
In Pics : ಬೆಂಗಳೂರಿನಲ್ಲಿ ಬಿಜೆಪಿ ಚೀಫ್ ಅಮಿತ್ ಶಾಗೆ ಭವ್ಯ ಸ್ವಾಗತ
ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಮತ್ತು ಅಮಿತ್ ಶಾ ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಮೇಲೆ, ಬಿಜೆಪಿ ನೇತೃತ್ವದ NDA ಮೈತ್ರಿಕೂಟ ಹದಿನೇಳು ರಾಜ್ಯದಲ್ಲಿ ತಮ್ಮ ಸರಕಾರವನ್ನು ಸ್ಥಾಪಿಸಲು ಯಶಸ್ವಿಯಾಗಿವೆ. ಆಧುನಿಕ ಚಾಣಕ್ಯ ಎಂದೇ ಹೆಸರಾಗಿರುವ ಅಮಿತ್ ಶಾ ಅವರ ಮುಂದಿನ ಗುರಿ ಕರ್ನಾಟಕದಲ್ಲಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರುವುದು.
ಇತ್ತೀಚಿನ ವರ್ಷಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಪಂಜಾಬ್ ಹೊರತು ಪಡಿಸಿ ಉಳಿದ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟಕ್ಕೆ ಕರ್ನಾಟಕದಲ್ಲಿ ಅಧಿಕಾರ ಉಳಿಸಿಕೊಳ್ಳುವುದು ಪ್ರತಿಷ್ಠೆ ಮತ್ತು ಅಳಿವು ಉಳಿವಿನ ಪ್ರಶ್ನೆಯಾಗಿದೆ. ಮುಂದೆ ಓದಿ..
ಸದ್ಯದ ಮಟ್ಟಿಗೆ ಸಿದ್ದು ಸರಕಾರ ಸ್ವಲ್ಪ ಮೇಲುಗೈ
ಬಹುತೇಕ ತ್ರಿಕೋಣ ಸ್ಪರ್ಧೆಯಿರುವ ಕರ್ನಾಟಕದಲ್ಲಿ ಸದ್ಯದ ಮಟ್ಟಿಗೆ ಸಿದ್ದರಾಮಯ್ಯನವರ ಸರಕಾರ ಸ್ವಲ್ಪ ಮೇಲುಗೈ ಸಾಧಿಸಿದೆ ಎಂದು ಸಮೀಕ್ಷೆಗಳು ಹೇಳಿದ್ದರೂ, ಚುನಾವಣಾ ಹೊತ್ತಿನಲ್ಲಿ ಅದು ಕಾಂಗ್ರೆಸ್ಸಿಗೆ ಯಾವ ರೀತಿ ಲಾಭ ತಂದು ಕೊಡಲಿದೆ ಎನ್ನುವುದು ಪ್ರಶ್ನೆ. ಜೊತೆಗೆ, ದೇವೇಗೌಡರ ಅಪಾರ ರಾಜಕೀಯ ಅನುಭವ ಮತ್ತು ಅಮಿತ್ ಶಾ ಅವರ ತಂತ್ರಗಾರಿಕೆ ಕಾಂಗ್ರೆಸ್ಸಿನ ಎಲ್ಲಾ ಲೆಕ್ಕಾಚಾರ ಉಲ್ಟಾ ಹೊಡೆದರೆ ಆಶ್ಚರ್ಯ ಪಡಬೇಕಾಗಿಲ್ಲ.
ಕಾಟಾಚಾರದ ಪ್ರಯತ್ನ ಮೋದಿ, ಶಾ ವಿರುದ್ದ ಕೆಲಸಮಾಡದು
ಮಾಮೂಲಿ ಅಥವಾ ಕಾಟಾಚಾರದ ಪ್ರಯತ್ನ ಮೋದಿ ಮತ್ತು ಅಮಿತ್ ಶಾ ವಿರುದ್ದ ಯಾವುದೇ ರೀತಿಯಲ್ಲಿ ಕೆಲಸಮಾಡದು. ಕಾಂಗ್ರೆಸ್ಸಿಗೆ ಈಗ ಅಸ್ತಿತ್ವದ ಪ್ರಶ್ನೆ ಕಾದಿದೆ ಎಂದು ಕಾಂಗ್ರೆಸ್ಸಿನ ಇಬ್ಬರು ಹಿರಿಯ ಮುಖಂಡರಾದ ಜೈರಾಂ ರಮೇಶ್ ಮತ್ತು ಮಣಿಶಂಕರ್ ಅಯ್ಯರ್ ಹೇಳುವಂತೆ, ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು ವಿಫಲವಾಯಿತೆಂದರೆ ಪಕ್ಷಕ್ಕೆ ಇನ್ನಿಲ್ಲದ ಹಿನ್ನಡೆಯಾಗುವುದು ಖಂಡಿತ. ಹಾಗಾಗಿ, ಮೂರು ಪಕ್ಷಗಳಲ್ಲಿ ಇಲ್ಲಿ ಹೆಚ್ಚು ಒತ್ತಡದಲ್ಲಿರುವುದು ಕಾಂಗ್ರೆಸ್.
ಸರಕಾರದ ಸಾಧನೆಯೇ ಪಕ್ಷಕ್ಕೆ ಪ್ರಮುಖ ಚುನಾವಣಾ ಮಾನದಂಡ
ರಾಜಕೀಯವಾಗಿ ರಾಹುಲ್ ಗಾಂಧಿ ಇನ್ನೂ ಪ್ರಬುದ್ದತೆಗೆ ಬರಬೇಕೆಂದು ಸ್ವಪಕ್ಷೀಯರೇ ಹೇಳುವುದರಿಂದ, ರಾಹುಲ್ ಗಾಂಧಿ ಭಾಷಣ ಅಥವಾ ಕಾರ್ಯಕರ್ತರ ಭೇಟಿ ಪಕ್ಷಕ್ಕೆ ಅಷ್ಟು ಲಾಭ ತಂದು ಕೊಡುವ ಸಾಧ್ಯತೆ ಕಮ್ಮಿ. ಹಾಗಾಗಿ, ಸಿದ್ದರಾಮಯ್ಯನವರ ಸರಕಾರದ ಸಾಧನೆಯೇ ಪಕ್ಷಕ್ಕೆ ಪ್ರಮುಖ ಚುನಾವಣಾ ಮಾನದಂಡ.
ಮೋದಿ ಹೆಸರು, ಅಮಿತ್ ಶಾ ತಂತ್ರಗಾರಿಕೆಯೇ ಪಕ್ಷಕ್ಕೆ ಪ್ರಮುಖ ಅಸ್ತ್ರ
ಆದರೆ ಬಿಜೆಪಿಯಲ್ಲಿ ಹಾಗಲ್ಲ. ನರೇಂದ್ರ ಮೋದಿ ಎನ್ನುವ ಹೆಸರು ಮತ್ತು ಅಮಿತ್ ಶಾ ಅವರ ತಂತ್ರಗಾರಿಕೆಯೇ ಪಕ್ಷಕ್ಕೆ ಪ್ರಮುಖ ಅಸ್ತ್ರ. ಅಸೆಂಬ್ಲಿ ಚುನಾವಣೆಯಲ್ಲಿ ಮೋದಿ ವರ್ಚಸ್ಸು ಬಿಜೆಪಿಗೆ ಲಾಭ ತಂದುಕೊಡುತ್ತದೋ ಇಲ್ಲವೋ ಎನ್ನುವುದು ನಂತರದ ಪ್ರಶ್ನೆಯಾದರೂ, ಕರ್ನಾಟಕದ ಜನತೆಯಲ್ಲಿ ಅವರು ಮಾಡುವ ಮನವಿ, ಸಂಘಟಿತವಾಗಿ ಹೋರಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಿ ಎಂದು ಕಾರ್ಯಕರ್ತರಿಗೆ ಮೋದಿ, ಶಾ ನೀಡುವ ಕರೆ, ವರ್ಕೌಟ್ ಅಗಬಾರದಂತೇನೂ ಇಲ್ಲ.
ಮಹತ್ವ ಪಡೆದುಕೊಂಡ ಶಾ, ರಾಹುಲ್ ಕರ್ನಾಟಕ ಪ್ರವಾಸ
ವರ್ಷಾಂತ್ಯದಲ್ಲಿ ಅಥವಾ ಅದಕ್ಕೂ ಮುನ್ನ ನಡೆಯುವ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆ, ಬಿಜೆಪಿ ಮತ್ತು ಕಾಂಗ್ರೆಸ್ಸಿಗೆ ಹೇಗೆ ನಿರ್ಣಾಯಕವೋ, ಬರುವ ಮೇ ತಿಂಗಳೊಳಗೆ ನಡೆಯುವ ಕರ್ನಾಟಕ ಚುನಾವಣೆ ಕೂಡಾ ಅಷ್ಟೇ ಮುಖ್ಯ. ಹಾಗಾಗಿ, ಅಮಿತ್ ಶಾ ಮತ್ತು ರಾಹುಲ್ ಗಾಂಧಿ ಕರ್ನಾಟಕ ಪ್ರವಾಸ ಮಹತ್ವ ಪಡೆದುಕೊಂಡಿದೆ.