ಅಧಿವೇಶನದಲ್ಲಿ ಆಟ-ನೋಟ, ಯಾರು ಏನು ಹೇಳಿದ್ರು?
ಬೆಂಗಳೂರು, ಡಿ.11 : ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಬಿಜೆಪಿ ಶಾಸಕರೊಬ್ಬರು ಸ್ಮಾರ್ಟ್ ಫೋನ್ನಲ್ಲಿ ಫೋಟೊ ವೀಕ್ಷಿಸುತ್ತಿದ್ದರೆ, ಮತ್ತೊಬ್ಬರು ಕ್ಯಾಂಡಿಕ್ರಶ್ ಗೇಮ್ ಆಡುತ್ತ ಕಾಲ ಕಳೆಯುತ್ತಿರುವುದು ಬಹಿರಂಗಗೊಂಡು ವಿವಾದಕ್ಕೆ ಕಾರಣವಾಗಿವೆ. ಎಲ್ಲಾ ಪಕ್ಷದ ನಾಯಕರು ಬಿಜೆಪಿ ಶಾಸಕರ ಆಟ-ನೋಟವನ್ನು ಖಂಡಿಸಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ಕ್ಷೇತ್ರದ ಬಿಜೆಪಿ ಶಾಸಕ ಪ್ರಭು ಚೌವಾಣ್ ತಮ್ಮ ಫೋನ್ನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಫೋಟೊ ನೋಡುತ್ತಿದ್ದರು. ಹಿರೇಕೆರೂರು ಕ್ಷೇತ್ರದ ಬಿಜೆಪಿ ಶಾಸಕ ಯು.ಬಿ.ಬಣಕಾರ ಅವರು ಕ್ಯಾಂಡಿಕ್ರಶ್ ಗೇಮ್ ಆಡುತ್ತಿರುವುದನ್ನು ಟಿವಿ ಕ್ಯಾಮೆರಾಮನ್ಗಳು ಬುಧವಾರ ಸೆರೆ ಹಿಡಿದಿದ್ದರು. [ಚೌವಾಣ್ ಸದನದಲ್ಲಿ ಮಾಡಿದ್ದೇನು?]
ಸಿಎಂ ಸಿದ್ದರಾಮಯ್ಯ, ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಈ ಘಟನೆಯನ್ನು ಖಂಡಿಸಿದ್ದಾರೆ. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಕುಟುಂಬದ ಫೋಟೊ ತೋರಿಸುವಾಗ ಅಚಾನಕ್ ಆಗಿ ಈ ಘಟನೆ ನಡೆದಿದೆ. ಅವರು ಅಮಾಯಕರಾಗಿದ್ದು, ಯಾವುದೇ ಕೆಟ್ಟ ಉದ್ದೇಶ ಹೊಂದಿರಲಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಶಾಸಕರ ಆಟ-ನೋಟಕ್ಕೆ ಯಾರು ಏನು ಹೇಳಿದರು ನೋಡೋಣ ಬನ್ನಿ [ಸದನದಲ್ಲಿ ಬುಧವಾರ ಏನಾಯ್ತು?]
ಇದು ಬಿಜೆಪಿ ಸಂಸ್ಕೃತಿ : ಸಿಎಂ
ಸದನದಲ್ಲಿ ಶಾಸಕರ ವರ್ತನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ ಅವರು, 'ಇದು ಬಿಜೆಪಿ ಸಂಸ್ಕೃತಿಯನ್ನು ಮತ್ತೊಮ್ಮೆ ತೋರಿಸಿದೆ. ಬಿಜೆಪಿಯವರು ಹಳೆ ಚಾಳಿ ಮುಂದುವರಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅಂತಲ್ಲ, ಸದನದಲ್ಲಿ ಯಾರದೇ ಫೋಟೊ ನೋಡುವುದೂ ತಪ್ಪು. ಅಭಿವೃದ್ಧಿ, ಜನಪರ ವಿಚಾರಗಳ ಚರ್ಚೆಗೆ ಅಧಿವೇಶನ ನಡೆಸಲಾಗುತ್ತದೆ. ಭಾವಚಿತ್ರ ನೋಡಲು ಯಾರನ್ನೂ ಕಲಾಪಕ್ಕೆ ಕರೆಯುವುದಿಲ್ಲ' ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರಭು ಚೌವಾಣ್ ಸ್ಪಷ್ಟನೆಗಳು
'ನನ್ನ ತಪ್ಪಿಗೆ ನಾನು ಕ್ಷಮೆ ಕೇಳುತ್ತಿದ್ದೇನೆ. ನಾನು ಸದನದಲ್ಲಿ ಫೋಟೋ ನೋಡಿದ್ದು ತಪ್ಪು. ಆದರೆ, ಅಶ್ಲೀಲಕರವಾದ ಫೋಟೋವನ್ನು ನಾನು ನೋಡುತ್ತಿರಲಿಲ್ಲ. ಫೋಟೋ ಕೆಳಗಿದ್ದ ಘೋಷಣೆಯನ್ನು ಓದಲು ನಾನು ಝೂಮ್ ಮಾಡಿದೆ. 'ನಾನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಷ್ಟ್ರೀಯ ನಾಯಕರ ಚಿತ್ರಗಳನ್ನು ನೋಡುತ್ತಿದ್ದೆ. ಆ ಸಮಯದಲ್ಲಿ ಬಂದ ಫೋಟೋಗಳನ್ನು ನೋಡಿದ್ದೇನೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ. ನನ್ನ ಮೊಬೈಲ್ನಲ್ಲಿ ಯಾವುದೇ ಅಶ್ಲೀಲ ಚಿತ್ರಗಳಿಲ್ಲ' ಎಂದು ಮಾಧ್ಯಮಗಳಿಗೆ ಚೌವಾಣ್ ಪ್ರತಿಕ್ರಿಯೆ ನೀಡಿದ್ದಾರೆ.
ಚೌವಾಣ್ ಅಮಾಯಕರು : ಶೆಟ್ಟರ್
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, 'ಪ್ರಭು ಚೌವಾಣ್ ತಮ್ಮ ಕುಟುಂಬದ ಫೋಟೊ ತೋರಿಸುವಾಗ ಅಚಾನಕ್ ಆಗಿ ಈ ಘಟನೆ ನಡೆದಿದೆ. ಅವರು ಅಮಾಯಕರಾಗಿದ್ದು, ಯಾವುದೇ ಕೆಟ್ಟ ಉದ್ದೇಶ ಹೊಂದಿರಲಿಲ್ಲ. ಈ ಬಗ್ಗೆ ಅವರಿಂದ ಸ್ಪಷ್ಟನೆ ಪಡೆಯಲಾಗಿದೆ' ಎಂದು ಹೇಳಿದ್ದಾರೆ.
ಬೆಳಗಾವಿಗೂ ಬಂತು ಈ ಪ್ರವೃತ್ತಿ
'ಬಿಜೆಪಿ ಸಂಸ್ಕೃತಿ ಈಗಾಗಲೇ ಜಗಜ್ಜಾಹೀರಾಗಿದೆ. ಬೆಂಗಳೂರಿನ ವಿಧಾನಸೌಧದಲ್ಲಿ ಮೊಬೈಲ್ನಲ್ಲಿ ಚಿತ್ರ ವೀಕ್ಷಿಸುತ್ತಿದ್ದ ಬಿಜೆಪಿಯವರ ಪ್ರವತ್ತಿ ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೂ ಕಾಲಿಟ್ಟಿದೆ. ಈ ಮೂಲಕ ಬಿಜೆಪಿಯ ಮುಖವಾಡ ಕಳಚಿ ಬಿದ್ದಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದ್ಯ ಡಾ.ಜಿ. ಪರಮೇಶ್ವರ ಪ್ರತಿಕ್ರಿಯಿಸಿದ್ದಾರೆ.
ಜನಪ್ರತಿನಿಧಿಗಳು ಜವಾಬ್ದಾರಿ ಅರಿಯಲಿ
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, 'ಇಂತಹ ಮನುಷ್ಯ ಸಹಜ ನ್ಯೂನತೆ ಇರುತ್ತವೆ. ಆದರೆ, ಜನಪ್ರತಿನಿಧಿಗಳು ಜವಾಬ್ದಾರಿ ಅರಿತು ನಡೆಯಬೇಕು. ಇನ್ನು ಮುಂದೆ ಸದನದ ಒಳಗೆ ಮೊಬೈಲ್ ಪ್ರವೇಶ ನಿಷೇಧಿಸುವ ಬಗ್ಗೆ ಚಿಂತಿಸಲಾಗುವುದು' ಎಂದು ಹೇಳಿದ್ದಾರೆ.
ಪಕ್ಷ ಕಠಿಣ ಕ್ರಮ ಕೈಗೊಳ್ಳಲಿದೆ
'ಹಿಂದೆ ಬ್ಲೂಫಿಲಂ ಘಟನೆ ನಡೆದ ವೇಳೆಯಲ್ಲೂ ಪಕ್ಷ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಸದನದಲ್ಲಿ ಚಿತ್ರ ವೀಕ್ಷಣೆ ಬಗ್ಗೆ ಶಾಸಕ ಪ್ರಭು ಚೌವಾಣ್ ಅವರಿಂದ ವಿವರಣೆ ಕೇಳಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ.
ಶಾಸಕ ರವಿ ಸುಬ್ರಮಣ್ಯ ಸ್ಪಷ್ಟನೆ
ಸದನದಲ್ಲಿ ಪ್ರಭು ಚೌವಾಣ್ ಅವರ ಪಕ್ಕ ಕುಳಿತಿದ್ದ ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಅವರು ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದು, 'ನಾನು ಯಾವುದೇ ತಪ್ಪು ಮಾಡಿಲ್ಲ. ಚೌವಾಣ್ ತಮ್ಮ ಫ್ಯಾಮಿಲಿ ಸದಸ್ಯರ ಫೋಟೊಗಳನ್ನು ನನಗೆ ತೋರಿಸುತ್ತಿದ್ದರು. ಆಗ ನಾನೇ ಮೊಬೈಲ್ ಆಫ್ ಮಾಡುವಂತೆ ಸಲಹೆ ನೀಡಿದೆ' ಎಂದು ಹೇಳಿದ್ದಾರೆ.